ಪತ್ನಿ 9 ತಿಂಗಳ ತುಂಬು ಗರ್ಭಿಣಿ: ವಿದ್ಯುತ್ ಶಾಕ್ ತಗುಲಿ ಪತಿ ಸಾವು; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ತುಮಕೂರಿನ ತಿಪಟೂರು ತಾಲೂಕಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವಾಗ ಲೈನ್ ಮ್ಯಾನ್ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾರೆ. 9 ತಿಂಗಳ ತುಂಬು ಗರ್ಭಿಣಿಯಾದ ಪತ್ನಿ ಘಟನೆಯಿಂದ ಶಾಕ್ಗೆ ಒಳಗಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆದಿದೆ.

ತುಮಕೂರು, ಮಾರ್ಚ್ 08: ವಿದ್ಯುತ್ ಪರಿವರ್ತಕ ಅಳವಡಿಸುವಾಗ ಶಾಕ್ ತಗುಲಿ ಲೈನ್ಮ್ಯಾನ್ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಕೆ.ಪಿ. ಮನು (26) ಮೃತ ದುರ್ದೈವಿಯಾಗಿದ್ದು, ಈತನ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಎನ್ನಲಾಗಿದೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಲೈನ್ಮ್ಯಾನ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಘಟನೆ ಬಗ್ಗೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಸಾವು
ಗದಗ ತಾಲೂಕಿನ ಲಕ್ಕುಂಡಿಯ ಕಣಗಿನಾಳ ರಸ್ತೆ ಸಮೀಪ ಅಕ್ರಮವಾಗಿ ನಡೆಸಲಾಗಿರುವ ಮಣ್ಣು ಗಣಿಗಾರಿಕೆಯ ಹೊಂಡದ ನೀರಲ್ಲಿ ಮುಳುಗಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನಿನ್ನೆ ಬಣ್ಣ ಆಡಿ ಆರೇಳು ಸ್ನೇಹಿತರು ಸ್ನಾನಕ್ಕೆ ತೆರಳಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ. ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, 30-40 ಅಡಿ ಆಳ ಹೊಂಡ ತೆಗೆಯಲಾಗ್ತಿದೆ. ಈ ಹಿಂದೆ ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ, ಚಿಂಚಲಿ ಗ್ರಾಮಗಳಲ್ಲಿ ಇದೇ ರೀತಿಯ ಹೊಂಡದಲ್ಲಿ ಬಿದ್ದು ಮಕ್ಕಳು, ಯುವಕರು ಮೃತಪಟ್ಟಿದ್ದರು. ಕಳೆದ ವಾರವಷ್ಟೇ ಚಿಂಚಲಿ ಗ್ರಾಮದಲಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಹೀಗಿದ್ದರೂ ಸಂಬಂಧಪಟ್ಟ ಇಲಾಖೆ ಇವುಗಳಿಗೆ ಬ್ರೇಕ್ ಹಾಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು; ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಕೆರೆಗೆ ಬಿದ್ದ ಕಾರು
ಕೋಲಾರ ತಾಲೂಕಿನ ಮುದುವಾಡಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಬಿದ್ದಿದ್ದು, ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷ ವೆಂಕಟೇಶ್ ಮೃತಪಟ್ಟಿದ್ದಾರೆ. ಇವರು ಕೋಲಾರ ತಾಲೂಕಿನ ತುರಾಂಡಹಳ್ಳಿ ನಿವಾಸಿಯಾಗಿದ್ದು, ನಾಳೆಯಿಂದ ಕೋಲಾರದಲ್ಲಿ ರೈತ ಸಂಘದ ರಾಜ್ಯ ಸಮ್ಮೇಳನ ಹಿನ್ನೆಲೆ, ಕಾರ್ಯಕ್ರಮದ ಸಿದ್ಧತೆಗಳನ್ನು ಮುಗಿಸಿ ಹೋಗುವ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.