
ಹುಬ್ಬಳ್ಳಿ, ಮೇ 26: ಪ್ರಾಥಮಿಕ ಶಾಲೆಯಿಂದ ಪಿಯುಸಿವರಗೆ ಒಂದೇ ಸೂರಿನಡಿ, ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅನೇಕ ವರ್ಷಗಳ ಹಿಂದೆ ಆರಂಭಿಸಿದೆ. ಈ ಶೈಕ್ಷಣಿಕ ವರ್ಷದಿಂದ ಮತ್ತಷ್ಟು ಕೆಪಿಎಸ್ ಶಾಲೆಗಳನ್ನು (KPS schools) ಆರಂಭಿಸಲು ಮುಂದಾಗಿದೆ. ಆದರೆ ಈ ಶಾಲೆಗಳ ಆರಂಭಕ್ಕೆ ಸುತ್ತಲಿನ ಕನ್ನಡ ಶಾಲೆಗಳನ್ನು ವಿಲೀನ ಮಾಡುವುದು ಮತ್ತು ಅವುಗಳನ್ನು ಬಂದ್ ಮಾಡುವ ಆರೋಪ ಕೇಳಿಬಂದಿವೆ. ಹೀಗಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಸರಿಸುಮಾರು ಒಂದು ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಈ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದರೆ ಹನ್ನೆರಡನೇ ತರಗತಿವರಗೆ ಒಂದೇ ಸೂರಿನಡಿ ಅಧ್ಯಯನ ಮಾಡಲು ಅವಕಾಶವಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿರುವ ಈ ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಆದರೆ ಈ ಕೆಪಿಎಸ್ ಶಾಲೆಗಳಿಂದ ಸುತ್ತಮುತ್ತಲಿನ ಕನ್ನಡ ಶಾಲೆಗಳನ್ನು ವಿಲೀನ ಮಾಡಿ, ಕೆಪಿಎಸ್ ಶಾಲೆಗಳನ್ನು ಮಾಡುತ್ತಿದೆ. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ವತಃ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೆಪಿಎಸ್ ಶಾಲೆಗಳನ್ನು ಆರಂಭಿಸುವುದು ಉತ್ತಮ ನಿರ್ಧಾರ. ಆದರೆ ಕೆಪಿಎಸ್ ಶಾಲೆಗಳಿಗಾಗಿ ಸುತ್ತಮುತ್ತಲಿನ ಕನ್ನಡ ಶಾಲೆಗಳನ್ನು ವಿಲೀನ ಮಾಡುವುದು ಬೇಡ ಅಂತ ಹೇಳಿದ್ದಾರೆ. ಒಂದು ಶಾಲೆ ಆರಂಭಕ್ಕೆ ಸುತ್ತಮುತ್ತಲಿನ ಶಾಲೆಗಳು ಬಂದ್ ಆಗುವಂತೆ ಮಾಡುವುದು ಸರಿಯಲ್ಲ. ನೀವು ಹೊಸದಾಗಿ ಕೆಪಿಎಸ್ ಶಾಲೆಗಳನ್ನು ಮಾಡಿ, ಅದಕ್ಕಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ವಿಲೀನ ಮಾಡುವುದು, ಅವು ಬಂದ್ ಆಗುವಂತೆ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ.
ಧಾರವಾಡ, ಹಾವೇರಿ ಸೇರಿದಂತೆ ಅನೇಕ ಕಡೆ ಕೆಪಿಎಸ್ ಶಾಲೆಗಳ ಆರಂಭಕ್ಕೆ, ಕಡಿಮೆ ಮಕ್ಕಳ ಸಂಖ್ಯೆಯಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳಲ್ಲಿ ವಿಲೀನ ಮಾಡುವ ಕೆಲಸ ಆರಂಭವಾಗಿದೆ. ಇದರಿಂದ ಅನೇಕ ಕನ್ನಡ ಶಾಲೆಗಳು ಬಂದ್ ಆಗುತ್ತವೆ. ಜೊತೆಗೆ ಅನೇಕರು ಉದ್ಯೋಗ ವಂಚಿತರಾಗುತ್ತಾರೆ. ಅನೇಕ ಕಡೆ ಅನುದಾನಿತ ಶಾಲೆಗಳಿದ್ದು, ಅವು ಕೂಡ ಬಂದ್ ಆಗುವ ಸಾಧ್ಯತೆಗಳು ಹೆಚ್ಚಿದೆ. ಹೀಗಾಗಿ ಸದ್ಯ ಇರುವ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿ, ಹೊಸದಾಗಿ ಕೆಪಿಎಸ್ ಶಾಲೆಗಳನ್ನು ಆರಂಭಿಸಬೇಕು ಅನ್ನೋದು ಬಸವರಾಜ್ ಹೊರಟ್ಟಿ ಸೇರಿದಂತೆ ಅನೇಕರ ಆಗ್ರಹವಾಗಿದೆ.
ಇದನ್ನೂ ಓದಿ: ಶಿಕ್ಷಣ ಇಲಾಖೆಯಲ್ಲಿ ಸರ್ಜರಿ: 5 ವರ್ಷ ಮೇಲ್ಪಟ್ಟ ನೌಕರರಿಗೆ ಕಡ್ಡಾಯ ವರ್ಗಾವಣೆ; ಡೆಡ್ಲೈನ್ ಸಹ ಫಿಕ್ಸ್!
ಕೆಪಿಎಸ್ ಶಾಲೆಗಳಿಗಾಗಿ ಸುತ್ತಮುತ್ತಲಿನ ಶಾಲೆಗಳನ್ನು ವಿಲೀನ ಮಾಡುವುದು ಅಥವಾ ಬಂದ್ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹೊರಟ್ಟಿ ಪತ್ರ ಬರೆದಿದ್ದಾರೆ. ಆದರೆ ಶಿಕ್ಷಣ ಇಲಾಖೆ ಈ ಬಗ್ಗೆ ಯಾವ ಕ್ರಮಕೈಗೊಳ್ಳುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.