ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದ ರೆಪ್ಕೋ ಫೈನಾನ್ಸ್ ಸಂಸ್ಥೆ! ಪೂರ್ತಿ ಸಾಲದ ಮೊತ್ತ ನೀಡದಿದ್ದಕ್ಕೆ ಬಿತ್ತು 1 ಲಕ್ಷ ದಂಡ!

ಮಂಜೂರಾದ ಪೂರ್ತಿ ಸಾಲದ ಹಣ ನೀಡದ ರೆಪ್ಕೋ ಹಣಕಾಸು ಸಂಸ್ಥೆಗೆ ರು.1 ಲಕ್ಷ ದಂಡ ವಿಧಿಸಿ ದೂರದಾರರಿಗೆ ಪರಿಹಾರ ನೀಡಲು ಧಾರವಾಡ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದ ರೆಪ್ಕೋ ಫೈನಾನ್ಸ್ ಸಂಸ್ಥೆ! ಪೂರ್ತಿ ಸಾಲದ ಮೊತ್ತ ನೀಡದಿದ್ದಕ್ಕೆ ಬಿತ್ತು 1 ಲಕ್ಷ ದಂಡ!
ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದ ರೆಪ್ಕೋ ಫೈನಾನ್ಸ್ ಸಂಸ್ಥೆ! ಪೂರ್ತಿ ಸಾಲದ ಮೊತ್ತ ನೀಡದಿದ್ದಕ್ಕೆ ಬಿತ್ತು 1 ಲಕ್ಷ ದಂಡ!
Edited By: ಸಾಧು ಶ್ರೀನಾಥ್​

Updated on: Nov 09, 2023 | 6:20 PM

ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಮಹಾಂತೇಶ ಹೂಲಿ ಎಂಬುವರು ನಿವೇಶನ ಖರೀದಿಸಿ ಮನೆ ಕಟ್ಟುವ ಉದ್ದೇಶದಿಂದ 2022ರ ಸಪ್ಟೆಂಬರ್‌ 9ರಂದು ಹುಬ್ಬಳ್ಳಿ ವಿದ್ಯಾನಗರದ (Hubballi) ರೆಪ್ಕೋ ಹೋಮ್ ಫೈನಾನ್ಸ್‌ (Housing loan finance company Repco Home Finance) ಅವರಿಂದ ರೂ. 12 ಲಕ್ಷ ಸಾಲ (Housing loan) ಪಡೆದಿದ್ದರು. ಮಂಜೂರಾದ ಒಟ್ಟು ಸಾಲವನ್ನು ಆಯಾ ಆಯಾ ಹಂತಗಳಲ್ಲಿ ಒಟ್ಟು ಐದು ಕಂತುಗಳಾಗಿ ಫೈನಾನ್ಸ್ ನವರು ದೂರುದಾರನಿಗೆ ಸಂದಾಯ ಮಾಡಲು ಒಪ್ಪಂದವಾಗಿತ್ತು.

ಮೊದಲಿನ ಮೂರು ಕಂತುಗಳ ಹಣ ರೂ. 9.50ಗಳನ್ನು ಎದುರುದಾರ ಫೈನಾನ್ಸ್ ನವರು ದೂರುದಾರನಿಗೆ ಕೊಟ್ಟಿದ್ದರು. ಆ ಹಣದಲ್ಲಿ ದೂರುದಾರ ಸೈಟ್ ಖರೀದಿಸಿ ಅದರಲ್ಲಿ ಮನೆ ಕಟ್ಟಿಸುವ ಕೆಲಸ ಪ್ರಾರಂಭಿಸಿದ್ದರು. 4 ಮತ್ತು 5ನೇ ಕಂತಿನ ಸಾಲದ ಹಣವನ್ನು ಎದುರುದಾರರು ಪ್ಲಾಸ್ಟರ್ ಮತ್ತು ಫ್ಲೋರಿಂಗ್‌ಗಾಗಿ ಕೊಡಬೇಕಾಗಿತ್ತು. ಆದರೆ, ಪ್ಲಾಸ್ಟರ್ ಮತ್ತು ಫ್ಲೋರಿಂಗ್ ಮಾಡಿಸಿ, ಆ ಬಗ್ಗೆ ಫೋಟೋ ಸಮೇತ ಸಾಕ್ಷಾಧಾರ ಕೊಟ್ಟಲ್ಲಿ ಮಾತ್ರ 4 ಮತ್ತು 5ನೇ ಕಂತಿನ ಹಣ ನೀಡುವುದಾಗಿ ರೆಪ್ಕೋ ಫೈನಾನ್ಸ್ ನವರು ಆಕ್ಷೇಪಣೆ ಎತ್ತಿದ್ದರು.

ಇದನ್ನು ಪ್ರಶ್ನಿಸಿ 2023ರ ಮೇ 19ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ (Dharwad Consumer Court) ಮಹಾಂತೇಶ ದೂರು ಸಲ್ಲಿಸಿದ್ದರು. ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಸಾಲದ ಒಪ್ಪಂದಂತೆ ಪ್ಲಾಸ್ಟರ್ ಮತ್ತು ಫ್ಲೋರಿಂಗ್ ಮಾಡಲು 4ನೇ ಕಂತಿನ ಸಾಲದ ಹಣ ನೀಡುವುದು ಎಂಬ ಕರಾರು ಇದೆ. ಆದರೆ ಆ ಕರಾರನ್ನು ಎದುರುದಾರ ಫೈನಾನ್ಸ್ ನವರು ತಿರುಚಿ ವಿನಾಕಾರಣ 4ನೇ ಕಂತಿನ ಹಣ ತಡೆ ಹಿಡಿದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಂದು ತೀರ್ಪು ನೀಡಿದೆ.

ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

ಎದುರುದಾರ ಫೈನಾನ್ಸ್ ನವರು ವರ್ಷಗಟ್ಟಲೇ ಕಾನೂನು ಬಾಹಿರವಾಗಿ 4 ಮತ್ತು 5ನೇ ಕಂತಿನ ಹಣ ಬಿಡುಗಡೆ ಮಾಡಲು ತಡೆಹಿಡಿದಿರುವುದರಿಂದ ದೂರುದಾರನ ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ಎದುರುದಾರರ ವರ್ತನೆಯಿಂದ ದೂರುದಾರನಿಗೆ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಣಕಾಸಿನ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟು ಬಾಕಿ ಉಳಿದಿರುವ 4ನೇ ಕಂತಿನ ಹಣವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ದೂರುದಾರನಿಗೆ ಮಾಡಿದ ಪ್ರಮಾದಕ್ಕಾಗಿ ರೂ.1 ಲಕ್ಷ ಪರಿಹಾರ ಮತ್ತು ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಲು ರೆಪ್ಕೋ ಫೈನಾನ್ಸ್ ನವರಿಗೆ ಆಯೋಗ ನಿರ್ದೇಶಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us