ಇತ್ಯರ್ಥ ಮಾಡದ ಸರ್ಕಾರ: ಸಮಸ್ಯೆಯಲ್ಲಿ ಸಿಲುಕಿದ ಧಾರವಾಡ ಕನ್ನಡ ಸಾಹಿತ್ಯ ಪರಿಷತ್, ಏನದು?
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದ ಲೀಸ್ ಅವಧಿ 1994ರಲ್ಲಿ ಮುಕ್ತಾಯಗೊಂಡಿದೆ. ಪರಿಷತ್ತು 30 ವರ್ಷಗಳ ಲೀಸ್ ವಿಸ್ತರಣೆಗೆ ಮನವಿ ಮಾಡಿದ್ದರೂ, ಇದುವರೆಗೂ ಸರ್ಕಾರದಿಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಲೀಸ್ ವಿಸ್ತರಣೆ ಇಲ್ಲದೆ ಸಾಂಸ್ಕೃತಿಕ ಬಯಲು ರಂಗಮಂದಿರ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ಯೆ ಎದುರಿಸುತ್ತಿದೆ.

ಧಾರವಾಡ, ಆಗಸ್ಟ್ 03: ರಾಜ್ಯ ಸರಕಾರ (Government) ಕನ್ನಡ ಉಳಿಸಲು ಏನೆಲ್ಲಾ ಸಾಧ್ಯವೋ ಅದನ್ನು ಮಾಡುವುದಾಗಿ ಹೇಳುತ್ತಲೇ ಇರುತ್ತೆ. ಇನ್ನೊಂದೆಡೆ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishad) ಸರಿಯಾದ ಅನುದಾನ ಮತ್ತು ಸಹಕಾರ ಕೊಡೋದೇ ಇಲ್ಲ ಅನ್ನೋ ಆರೋಪವೂ ಇದೆ. ಇದೀಗ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಜಾಗದ ವಿಚಾರವನ್ನು ಗಮನಿಸಿದರೆ ಈ ಆರೋಪಕ್ಕೆ ಪುಷ್ಠಿ ಸಿಗುತ್ತಿದೆ.
ನಗರದ ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದದಲ್ಲಿರು ಕನ್ನಡ ಸಾಹಿತ್ಯ ಭವನ ಮೂಲತಃ ಜಿಲ್ಲಾಡಳಿತಕ್ಕೆ ಸೇರಿದೆ. ಸುಮಾರು 1 ಎಕರೆ 11 ಗುಂಟೆಯಲ್ಲಿರುವ ಈ ಕಟ್ಟಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಭವನ, ಸಭಾಂಗಣ ಕಟ್ಟಡ ನಿರ್ಮಿಸಲಾಗಿದೆ. ಭವನದಲ್ಲಿ ಗ್ರಂಥಾಲಯ ಮತ್ತು ಪರಿಷತ್ತಿನ ಜಿಲ್ಲಾಧ್ಯಕ್ಷರ ಕಚೇರಿಗಳೂ ಇವೆ. ಇದನ್ನು ಜಿಲ್ಲಾಡಳಿತ ಕನ್ನಡ ಸಾಹಿತ್ಯ ಪರಿಷತ್ಗೆ ಲೀಸ್ ಮೇಲೆ ನೀಡಿದೆ. ಆದರೆ ಈ ಸಾಹಿತ್ಯ ಭವನದ ಜಾಗದ ಲೀಸ್ ಅವಧಿ 1994 ಕ್ಕೆ ಮುಗಿದಿದೆ.
ಇದನ್ನೂ ಓದಿ: ಡಿಮ್ಹಾನ್ಸ್ ಸಂಸ್ಥೆಯಲ್ಲಿ ಟೆಲಿ ಮಾನಸ್ ಸಾಧನೆ: 300 ಕ್ಕೂ ಹೆಚ್ಚು ಆತ್ಮಹತ್ಯೆಗಳಿಗೆ ತಡೆ
2021ರಲ್ಲಿ ಆಗಿನ ಜಿಲ್ಲಾಧಿಕಾರಿ ಜಿಲ್ಲಾ ಸಾಹಿತ್ ಪರಿಷತ್ಗೆ ಈ ಹಿನ್ನೆಲೆಯಲ್ಲಿ ನೋಟಿಸ್ ಕೂಡ ನೀಡಿದ್ದರು. ಆದರೆ ಸಾಹಿತ್ಯ ಪರಿಷತ್ 2022-23ನೇ ಸಾಲಿನವರೆಗೂ ಜಾಗದ ವಾರ್ಷಿಕ ಬಾಡಿಗೆಯನ್ನು ಪಾವತಿಸಲಾಗಿತ್ತು. ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕವು ಲೀಸ್ ಅವಧಿಯನ್ನು 30 ವರ್ಷಗಳವರೆಗೆ ವಿಸ್ತರಿಸುವಂತೆ ಮನವಿ ಮಾಡಿಕೊಂಡಿತ್ತು. ಆದರೆ ಇದುವರೆಗೂ ಈ ಮನವಿಯನ್ನು ಸರಕಾರ ಇತ್ಯರ್ಥಗೊಳಿಸಿಯೇ ಇಲ್ಲ. ಇದರಿಂದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮಸ್ಯೆಗೆ ಸಿಲುಕಿದೆ.
ಈ ಜಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಾಂಸ್ಕೃತಿಕ ಬಯಲು ರಂಗಮಂದಿರವನ್ನು ನಿರ್ಮಿಸಲು ಉದ್ಧೇಶಿಸಿದೆ. ಈ ಹಿನ್ನೆಲೆಯಲ್ಲಿ ಜಾಗದ ಲೀಸ್ ಅವಧಿಯನ್ನು ಮುಂದಿನ 30 ವರ್ಷಗಳಿಗೆ ಹೆಚ್ಚಿಸಿದರೆ ಈ ಕೆಲಸವನ್ನು ಮಾಡಬಹುದಾಗಿದೆ ಅನ್ನೋದು ಪರಿಷತ್ನ ಉದ್ದೇಶ. ಧಾರವಾಡದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ಸುಮಾರು 25 ಲಕ್ಷ ರೂಪಾಯಿ ಹಣ ಉಳಿದಿದೆ. ಅದನ್ನು ಉಪಯೋಗಿಸಿಕೊಳ್ಳಬೇಕೆಂದರೆ ಇದರ ಲೀಸ್ ಅವಧಿಯನ್ನು ಮುಂದುವರೆಸಬೇಕಿದೆ. ಆದರೆ ಅದು ಇದೀಗ ಸಾಧ್ಯವೇ ಆಗುತ್ತಿಲ್ಲ.
ಇದೇ ವೇಳೆ ಇದೇ ಆವರಣದಲ್ಲಿದ್ದ ಸರಕಾರಿ ಪದವಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಅಲ್ಲಿನ ಕೆಲ ತರಗತಿಗಳನ್ನು ಇದೇ ಭವನದ ಎರಡು ಕೊಠಡಿಗಳಿಗೆ ಶಿಫ್ಟ್ ಮಾಡಲಾಗಿದೆ. ಇದೆಲ್ಲವುಗಳಿಂದ ಜಿಲ್ಲಾಡಳಿತ ಲೀಸ್ ಅವಧಿಯನ್ನು ಮುಂದುವರೆಸುತ್ತಿಲ್ಲ ಎನ್ನಲಾಗಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಕೇಳಿದರೆ, ಈ ಬಗ್ಗೆ ಧಾರವಾಡ ತಹಸೀಲ್ದಾರ್ ಅವರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಅನ್ನುತ್ತಾರೆ.
ಇದನ್ನೂ ಓದಿ: ವೆಜ್ ಬದಲಿಗೆ ನಾನ್ ವೆಜ್ ಡೆಲಿವರಿ: ಡೊಮಿನೊಸ್ ಸಂಸ್ಥೆಗೆ 50 ಸಾವಿರ ರೂ. ದಂಡ
ಕನ್ನಡ ಭಾಷೆ, ಕನ್ನಡದ ನೆಲವನ್ನು ಉಳಿಸುವ ಕೆಲಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಂಚೂಣಿಯಲ್ಲಿರುತ್ತೆ. ಆದರೆ ಅದೇ ಪರಿಷತ್ಗೆ ಜಿಲ್ಲೆಯಲ್ಲಿ ಒಂದು ಸ್ವಂತ ಜಾಗವೂ ಇಲ್ಲ, ಕಟ್ಟಡವೂ ಇಲ್ಲ ಅನ್ನುವಂಥ ಪರಿಸ್ಥಿತಿ ಬಂದೊದಗಿದೆ. ಈ ಸಮಸ್ಯೆಯನ್ನು ಜಿಲ್ಲಾಡಳಿತ ಶೀಘ್ರವೇ ಬಗೆಹರಿಸಿ, ಕನ್ನಡ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು ಅನ್ನೋದು ಕನ್ನಡಿಗರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:05 pm, Sun, 3 August 25




