AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಸಮಾವೇಶದಲ್ಲಿ ಗೋಲ್​ಮಾಲ್?; ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು

ರಾಜ್ಯ ಕಾಂಗ್ರೆಸ್ ಸರ್ಕಾರ, ಲೋಕಸಭೆ ಚುನಾವಣೆಗೂ ಮುಂಚೆ ರಾಜ್ಯಾದ್ಯಂತ ತನ್ನ ಪ್ರಸಿದ್ಧ ಗ್ಯಾರಂಟಿ ಯೋಜನೆಗಳ ಬಗ್ಗೆ ಫಲಾನುಭವಿಗಳ ಸಮಾವೇಶ ನಡೆಸಿತ್ತು. ಕಳೆದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ಫಲಾನುಭವಿಗಳ ಸಮಾವೇಶ ಧಾರವಾಡ ಜಿಲ್ಲೆಯ ಐದು ಕಡೆಗಳಲ್ಲಿ ಆಗಿತ್ತು. ಆಗ ಗ್ಯಾರಂಟಿ ಸಮಾವೇಶಕ್ಕೆ ಬಳಕೆಯಾದ ಅನುದಾನ ಹಾಗೂ ಖರ್ಚಿನ ಲೆಕ್ಕದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಇದೀಗ ಲೋಕಾಯುಕ್ತಕ್ಕೆ ದೂರೊಂದು ದಾಖಲಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಗ್ಯಾರಂಟಿ ಸಮಾವೇಶದಲ್ಲಿ ಗೋಲ್​ಮಾಲ್?; ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು
ದೂರುದಾರ ಮಾಬುಸಾಬ್ ಯರಗುಪ್ಪಿ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Sep 27, 2024 | 5:42 PM

Share

ಧಾರವಾಡ, ಸೆ.27: ಕಳೆದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡ(Dharwad)ದ ಕೆಸಿಡಿ ಮೈದಾನ, ಹುಬ್ಬಳ್ಳಿಯ ರೈಲ್ವೆ ಮೈದಾನ, ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನ ಹಾಗೂ ಕುಂದಗೋಳ, ಕಲಘಟಗಿಯಲ್ಲಿ ಗ್ಯಾರಂಟಿ ಸಮಾವೇಶ (Guarantee convention)ನಡೆದಿತ್ತು. ನವಲಗುಂದದಲ್ಲಿ ಫೆಬ್ರುವರಿ 24ರಂದು ನಡೆದ ಸಮಾವೇಶದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಆದರೆ, ಸಿಎಂ ಭಾವಹಿಸಿದ್ದ ಸಮಾವೇಶ ಲೆಕ್ಕಪತ್ರದಲ್ಲಿಯೇ ಏರುಪೇರಾಗಿದ್ದು, ಅನೇಕ ಸಂಶಯಗಳು ಬರುತ್ತಿವೆ ಎಂದು ನವಲಗುಂದದ ಸಾಮಾಜಿಕ ಹೋರಾಟಗಾರ ಮಾಬುಸಾಬ್ ಯರಗುಪ್ಪಿ ಆರೋಪಿಸಿದ್ದಾರೆ.

ಐದು ಸಮಾವೇಶಗಳ ಖರ್ಚು ವೆಚ್ಚದ ಬಗ್ಗೆ ಆರ್.ಟಿ.ಐ ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡಿರುವ ಅವರು, ನವಲಗುಂದ ಸಮಾವೇಶ ಮುಗಿದ ಒಂದು ತಿಂಗಳ ಬಳಿಕ ಕೆಟರಿಂಗ್ ಕೊಟೇಶನ್ ಪಡೆದಿದ್ದಾರೆ. ಕುಂದಗೋಳದಲ್ಲಿ ನಡೆದಿದ್ದ ಸಮಾವೇಶದ ಊಟದ ಕೊಟೇಶನ್​ನಲ್ಲಿ ಕೆಟರಿಂಗ್ ಗುತ್ತಿಗೆ ಪಡೆದವರ ಸಹಿಯೂ ಇಲ್ಲ ಎನ್ನುವುದು ಗೋಲ್​ಮಾಲ್ ನಡೆದಿರುವ ಸಾಕಷ್ಟು ಅನುಮಾನ ಹುಟ್ಟುಹಾಕಿವೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿ ಮಾಬುಸಾಬ್, ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯಗೆ ಲೋಕಾಯುಕ್ತ ವ್ಯೂಹ: ಸಿಎಂ ಮುಂದಿರುವ ಮೂರು ಆಯ್ಕೆಗಳು ಇಲ್ಲಿವೆ

ಗ್ಯಾರಂಟಿ ನಿರ್ವಹಣಾ ಸಮಿತಿಯಲ್ಲಿದ್ದ ಅಧಿಕಾರಿಗಳ ಹೆಸರು ನಮೂದಿಸಿ ದೂರು

ಸಮಾವೇಶ ನಡೆದ ದಿನಾಂಕ ಹಾಗೂ ಅದಕ್ಕಾಗಿ ಖರ್ಚು ಮಾಡಿದ ಅನೇಕ ಬಿಲ್​ಗಳಲ್ಲಿ ನಮೂದಿಸಿರುವ ದಿನಾಂಕಕ್ಕೂ ತಾಳೆಯಾಗುತ್ತಿಲ್ಲ. ಎಲ್ಲ ಸಮಾವೇಶಗಳ ಉಪಹಾರದ ಟೆಂಡರ್ ಒಂದೇ ಏಜೆನ್ಸಿಗೆ ಕೊಟ್ಟಿದ್ದಾರೆ. ಒಂದು ಲಕ್ಷ ರೂಪಾಯಿ ಮೇಲಿನ ಮೊತ್ತವಿದ್ದರೂ ಟೆಂಡರ್ ಕರೆದಿಲ್ಲ. ಹೀಗಾಗಿ ಇಡೀ ಅನುದಾನ ಬಳಕೆ ಬಗ್ಗೆ ಅನುಮಾನಗಳು ಬರುತ್ತಿವೆ ಎಂದು ಆರೋಪಿಸಿರುವ ಮಾಬುಸಾಬ, ಗ್ಯಾರಂಟಿ ನಿರ್ವಹಣಾ ಸಮಿತಿಯಲ್ಲಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಲೋಕೋಪಯೋಗಿ ಇಲಾಖೆಯ ಎಇ ವಿಜಯಕುಮಾರ, ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ಎಂಬುವವರ ಹೆಸರನ್ನು ನಮೂದಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಹಲವಾರು ಹಗರಣಗಳು ಹೊರಗೆ ಬಂದಿವೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಮುಡಾ ಹಗರಣದಲ್ಲಿ ಆರೋಪಿಯಾಗಿ, ಇದೀಗ ಲೋಕಾಯುಕ್ತ ತನಿಖೆ ಎದುರಿಸಲಿದ್ದಾರೆ. ಇದೇ ವೇಳೆ ಅವರೇ ಭಾಗವಹಿಸಿದ್ದ ಸಮಾವೇಶದ ಖರ್ಚು-ವೆಚ್ಚದ ತನಿಖೆಯೂ ಈಗ ಲೋಕಾಯುಕ್ತ ಅಂಗಳಕ್ಕೆ ಹೋಗಿರುವುದು ಕಾಕತಾಳೀಯವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More