ಹು-ಧಾ ಪೂರ್ವದಲ್ಲಿ ಮತ್ತಷ್ಟು ಕೊಲೆಗಳಾಗಲಿವೆ: ಮಾಜಿ ಶಾಸಕ ವೀರಭದ್ರ ಹಾಲರವಿ

ಹುಬ್ಬಳ್ಳಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಇಬ್ಬರು ಯುವತಿಯರನ್ನು ಕೊಲೆ ಮಾಡಲಾಯಿತು. ಮೇಲಿಂದ ಮೇಲೆ ಹತ್ಯೆಗಳಾಗಿದ್ದಕ್ಕೆ, ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಕಾರಣ ನೀಡಿ ಡಿಸಿಪಿ ಪಿ. ರಾಜೀವ್​ ಅವರನ್ನು ಅಮಾನತು ಮಾಡಲಾಗಿದೆ. ಇದನ್ನು ಖಂಡಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಹು-ಧಾ ಪೂರ್ವದಲ್ಲಿ ಮತ್ತಷ್ಟು ಕೊಲೆಗಳಾಗಲಿವೆ: ಮಾಜಿ ಶಾಸಕ ವೀರಭದ್ರ ಹಾಲರವಿ
ಡಿಸಿಪಿ ಪಿ ರಾಜೀವ್​ ಅಮಾನತು ಖಂಡಿಸಿ ದಲಿತ ಸಂಘಟನೆ ಪ್ರತಿಭಟನೆ
Edited By: ವಿವೇಕ ಬಿರಾದಾರ

Updated on: May 20, 2024 | 2:50 PM

ಹುಬ್ಬಳ್ಳಿ, ಮೇ 20: ನಗರದಲ್ಲಿ ಕೊಲೆಗಳು ಇಲ್ಲಿಗೆ ನಿಲ್ಲಲ್ಲ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲೇ ಮತ್ತಷ್ಟು ಕೊಲೆಗಳು ನಡೆಯಲಿವೆ. ನೇಹಾ ಹಿರೇಮಠ (Neha Hiremath), ಅಂಜಲಿ ಅಂಬಿಗೇರ (Anjali Ambiger) ಕೊಲೆ ಪ್ರಕರಣಗಳು ಪೂರ್ವ ಕ್ಷೇತ್ರದಲ್ಲೇ ಆಗಿವೆ. ಹು-ಧಾ ಪೂರ್ವ ಕ್ಷೇತ್ರದಲ್ಲಿ ಈವರೆಗೆ 6 ಕೊಲೆಗಳು ನಡೆದಿವೆ. ರವಿವಾರ (ಮೇ 19) ರಂದು ಸಹ ನಾಲ್ವರ ಕೊಲೆ ಆಗಬೇಕಿತ್ತು, ಅದೃಷ್ಟವಶಾತ್ ಆಗಲಿಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.

ನಗರದಲ್ಲಿ ಕಾನೂನು ಸುವ್ಯವಸ್ಯೆ ವೈಪಲ್ಯವಾಗಿದೆ ಎಂಬ ಕಾರಣ ನೀಡಿ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ. ರಾಜೀವ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದ್ದನ್ನು ಖಂಡಿಸಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ನೇತೃತ್ವದಲ್ಲಿ ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದವು. ಈ ಅಮಾನತ್ತನ್ನು ವಾಪಸ್ ಪಡೆದು ತಕ್ಷಣವೇ ಅವರನ್ನು ನಿಯೋಜನೆ ಮಾಡಬೇಕೆಂದು ಆಗ್ರಹಿಸಿದವು.

ಕೊಲೆ ಮಾಡುವವರು ಹುಬ್ಬಳ್ಳಿಯನ್ನೇ ಏಕೆ ಗುರಿ ಮಾಡಿಕೊಂಡಿದ್ದಾರೆ? ಹು-ಧಾ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ. ರಾಜೀವ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಗೃಹಮಂತ್ರಿಗಳು ಕೈಗೊಂಡ ಕ್ರಮ ಸರಿಯಲ್ಲ. ನೇಹಾ ಹಿರೇಮಠ ಹತ್ಯೆಯಾದಾಗ ಸಮಗ್ರ ಜಾಲಾಡಿಸಬೇಕು. ಅಂಜಲಿ ಕೊಲೆ ಬಳಿಕ ಮತ್ತೆ ಆಗುವುದಿಲ್ಲ ಅಂತ ಗೃಹ ಮಂತ್ರಿಗಳು ತಿಳಿಬೇಡಿ? ಆ ಗರ್ಭದಲ್ಲಿ ಇನ್ನೂ ಬಹಳ ಅಡಗಿದೆ. ಅದನ್ನು ಜಾಲಾಡಿಸುವುದು ಬಿಟ್ಟು ಅಧಿಕಾರಿಗಳ ಅಮಾನತು ಮಾಡಿದ್ದೀರಿ. ಪೊಲೀಸ್ ಅಧಿಕಾರಿಗಳಿಗೆ ದಕ್ಷತೆ ತುಂಬಬೇಕಿತ್ತು. ನೈತಿಕ ಬೆಂಬಲ‌ ಕೊಡಬೇಕಿತ್ತು. ಅದು ಬಿಟ್ಟು ಅಮಾನತು ಮಾಡಿರೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಂಜಲಿ ಹತ್ಯೆ ಮುನ್ನ ಅಪ್ರಾಪ್ತ ಬಾಲಕಿಗೆ ವಂಚಿಸಿದ್ದ ವಿಶ್ವ: ದೂರು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದ ಹುಬ್ಬಳ್ಳಿ ಪೊಲೀಸರು

ನೇಹಾ ಕೊಲೆ ಪ್ರಕರಣದಲ್ಲಿ ನೀವು ಕೊಟ್ಟ ಹೇಳಿಕೆ ಜನಮಾನಸದಲ್ಲಿದೆ. ಪೊಲೀಸ್ ಆಯುಕ್ತರ ಹೇಳಿಕೆ ಮೇಲೆ ಗೃಹ ಮಂತ್ರಿಗಳು ಮಾತನಾಡುತ್ತಿದ್ದಾರೆ. ಪ್ರಕರಣಗಳನ್ನು ಗೃಹ ಇಲಾಖೆ ಸರಿಯಾಗಿ ನಿಭಾಯಿಸಬೇಕು. ಬೇಜಾರ ಆಗಿದ್ದರೆ ಗೃಹ ಇಲಾಖೆ ಬೇರೆಯವರಿಗೆ ಕೊಡಿ. ಹುಬ್ಬಳ್ಳಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಎರಡು ಕೊಲೆಗಳಾದವು ಎಂದರು.

ಹೊಸ ಡಿಸಿಪಿ ನೇಮಕ

ಹುಬ್ಬಳ್ಳಿ-ಧಾರವಾಡ ಕಾನೂನು‌ ಸುವ್ಯವಸ್ಥೆಯ ನೂತನ‌ ಡಿಸಿಪಿಯಾಗಿ ಕುಶಾಲ್ ಚೌಕ್ಸೆ ಅವರನ್ನು ನೇಮಕ ಮಾಡಲಾಗಿದೆ. ಕುಶಾಲ್ ಚೌಕ್ಸೆ ಅವರು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ಜಂಟಿ‌ ನಿರ್ದೇಶಕರಾಗಿದ್ದರು. ಇದೀಗ ಹು-ಧಾ ಕಾನೂನು‌ ಸುವ್ಯವಸ್ಥೆ ಡಿಸಿಪಿಯಾಗಿ ನೇಮಕಗೊಂಡಿದ್ದಾರೆ.

ಅಂಜಲಿ ಮನೆಗೆ ಮುನೇನಕೊಪ್ಪ, ವಚನಾನಂದ ಶ್ರೀ ಭೇಟಿ

ಅಂಜಲಿ ಅಂಬಿಗೇರ ಮನೆಗೆ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮತ್ತು ವಚನಾನಂದ ಶ್ರೀಗಳು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us