ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ: ಜೀವ ಉಳಿಸೆಂದು ಬೇಡಿಕೊಂಡರೂ ಕರಗಲಿಲ್ಲ ಕ್ರೂರಿಯ ಮನ

ಸಾಲದ ವಿಚಾರದಲ್ಲಿ ಜಗಳವಾಗಿ ಪತಿಯೇ ಪತ್ನಿ ಕತ್ತು ಸೀಳಿ ಕೊಲೆ ಮಾಡಿದ ಭೀಕರ ಘಟನೆಗೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರ ಸಾಕ್ಷಿಯಾಗಿದೆ. ಪತಿ ಕತ್ತು ಸೀಳಿದಾಗ ಪ್ರಾಣ ಉಳಿಸಿಕೊಳ್ಳಲು ಪತ್ನಿ ಹೊರಗೋಡಿ ಅಂಗಲಾಚಿಕೊಂಡಿದ್ದರೂ ಬಿಡದೆ ಮತ್ತೊಮ್ಮೆ ಆಕೆಯ ಕತ್ತು ಸೀಳಿದ ಆರೋಪಿ ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆಯಿಂದ ರಾಮಲಿಂಗೇಶ್ವರ ನಗರ ಜನತೆ ಬೆಚ್ಚಿಬಿದ್ದಿದ್ದಾರೆ.

ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ: ಜೀವ ಉಳಿಸೆಂದು ಬೇಡಿಕೊಂಡರೂ ಕರಗಲಿಲ್ಲ ಕ್ರೂರಿಯ ಮನ
ಮಾಸಬ್ಬಿ ಹಾಗೂ ಇರ್ಫಾನ್
Image Credit source: tv9
Edited By:

Updated on: Feb 03, 2026 | 7:43 AM

ಹುಬ್ಬಳ್ಳಿ, ಫೆಬ್ರವರಿ 3: ಸಾಲದ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯ ಕತ್ತು ಸೀಳಿ ಕೊಂದ ಅಮಾನುಷ ಘಟನೆ ಹುಬ್ಬಳ್ಳಿಯ (Hubballi) ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಎಂಬಾತ ಪತ್ನಿ ಮಾಸಬ್ಬಿಯನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಭೀಕರ ಕೃತ್ಯದಿಂದ ಇಡೀ ಏರಿಯಾವೇ ಬೆಚ್ಚಿಬಿದ್ದಿದೆ. ಮಾಸಬ್ಬಿ ಮತ್ತು ಇರ್ಫಾನ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಆದರೂ, ಮನೆಯೊಳಗಿನ ಸಾಲದ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಸಾಲದ ಸುಳಿಯಲ್ಲಿ ಸಿಲುಕಿದ್ದು, ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟಿದ್ದ. ಇದೇ ವಿಚಾರಕ್ಕೆ ದಂಪತಿಯ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಎಲ್ಲಿಂದಾದರೂ ಹಣ ತರಬೇಕು ಎಂದು ಪತ್ನಿಗೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ಇರ್ಫಾನ್, ಸೋಮವಾರ ಮತ್ತೆ ಜಗಳಕ್ಕೆ ಇಳಿದಿದ್ದಾನೆ. ಮಾಸಬ್ಬಿಯ ಸಹೋದರ ಇತ್ತೀಚೆಗೆ 20 ಸಾವಿರ ರೂಪಾಯಿ ಹಣ ನೀಡಿ ಹೋಗಿದ್ದರೂ ಸಹ ತೃಪ್ತನಾಗದೆ ಮತ್ತಷ್ಟು ಹಣಕ್ಕೆ ಪೀಡಿಸಿದ್ದಾನೆ. ಈ ಜಗಳ ತಾರಕಕ್ಕೆ ಏರಿದ್ದು, ಆಕ್ರೋಶಗೊಂಡ ಇರ್ಫಾನ್ ಚಾಕುವಿನಿಂದ ಪತ್ನಿಯ ಕತ್ತು ಸೀಳಿದ್ದಾನೆ.

ರಕ್ತ ಮಡುವಿನಲ್ಲಿ ಹೊರಗೋಡಿ ಅಂಗಲಾಚಿದರೂ ಬಿಡದ ರಾಕ್ಷಸ

ರಕ್ತದ ಮಡುವಿನಲ್ಲೇ ಪ್ರಾಣ ಉಳಿಸಿಕೊಳ್ಳಲು ಮಾಸಬ್ಬಿ ಮನೆಯ ಹೊರಗೆ ಓಡಿ ಬಂದಿದ್ದಾಳೆ. ಮನೆಯ ಎದುರಲ್ಲೇ ಬಿದ್ದು ಒದ್ದಾಡುತ್ತಿದ್ದ ಮಾಸಬ್ಬಿಯನ್ನು ಹಿಂಬಾಲಿಸಿದ ಪಾಪಿ, ಮತ್ತೆ ಕತ್ತಿಗೆ ಚಾಕು ಇರಿದು ಸ್ಥಳದಲ್ಲೇ ಕೊಂದಿದ್ದಾನೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮೃತದೇಹದ ಎದುರು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ದೃಶ್ಯಗಳು ಮನಕಲಕುವಂತಿದ್ದವು. ಮನೆ ಮಗಳನ್ನು ಕಳೆದುಕೊಂಡ ಕುಟುಂಬ ಕಣ್ಣೀರು ಸುರಿಸುತ್ತಿತ್ತು.

ಕ್ರೌರ್ಯ ಮೆರೆದು ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ

ಪತ್ನಿಯನ್ನು ಕೊಂದು ಕ್ರೌರ್ಯ ಮೆರೆದ ಇರ್ಫಾನ್ ನಂತರ ಹುಬ್ಬಳ್ಳಿ ನಗರದ ಕೇಶ್ವಾಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಬಳಿಕ ಆತನನ್ನು ಗೋಕುಲ್ ರೋಡ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬೀಸಿ 31 ಕ್ಷ ರೂ. ದರೋಡೆ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ

ಒಂದೆಡೆ ಅಪ್ಪ ಜೈಲು ಪಾಲಾದರೆ, ಅಮ್ಮ ಶವವಾಗಿ ಮಲಗಿದ್ದಾಳೆ. ಪ್ರಪಂಚವೇ ಅರಿಯದ ಇಬ್ಬರು ಮುದ್ದಾದ ಮಕ್ಕಳು ಅನಾಥರಾಗಿದ್ದು, ಅವರ ಭವಿಷ್ಯ ಪ್ರಶ್ನಾರ್ಥಕವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us