ಕನಸಿನ ಸಂಸಾರಕ್ಕೆ ಜಾತಿ ಅಡ್ಡಿ: ಊರು ಬಿಟ್ಟು ಹುಬ್ಬಳ್ಳಿಗೆ ಹಾರಿಬಂದ ಒಂದೇ ಬಡಾವಣೆಯ ಜೋಡಿ ಹಕ್ಕಿ

ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಗೆ ಇದೀಗ ಜೀವ ಭಯ ಶುರುವಾಗಿದೆ. ಹೀಗಾಗಿ ಕೊಪ್ಪಳದಿಂದ ಹುಬ್ಬಳ್ಳಿಗೆ ಪ್ರೇಮಿಗಳು ಓಡಿ ಬಂದಿದ್ದಾರೆ. ಇಬ್ಬರ ಜಾತಿ ಬೇರೆ ಬೇರೆಯಾದ ಕಾರಣ ಯುವತಿ ಕುಟುಂಬಸ್ಥರು ವಿವಾಹಕ್ಕೆ ವಿರೋಧಿಸಿದ್ದಾರೆ. ಹೀಗಾಗಿ ಊರು ಬಿಟ್ಟು ಬಂದಿದ್ದು, ಸೂಕ್ತ ರಕ್ಷಣೆ ಕೋರುತ್ತಿದ್ದಾರೆ.

ಕನಸಿನ ಸಂಸಾರಕ್ಕೆ ಜಾತಿ ಅಡ್ಡಿ: ಊರು ಬಿಟ್ಟು ಹುಬ್ಬಳ್ಳಿಗೆ ಹಾರಿಬಂದ ಒಂದೇ ಬಡಾವಣೆಯ ಜೋಡಿ ಹಕ್ಕಿ
ಪ್ರೇಮಿಗಳು
Image Credit source: tv9 kannada
Edited By:

Updated on: Apr 13, 2026 | 8:44 PM

ಹುಬ್ಬಳ್ಳಿ, ಏಪ್ರಿಲ್​ 13: ಅವರಿಬ್ಬರು ಒಂದೇ ಬಡಾವಣೆಯವರು. ಹೀಗಾಗಿ ಇಬ್ಬರು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರು, ಅವರ ಪ್ರೀತಿಗೆ ಜಾತಿ ಅಡ್ಡಿಯಾಗಿರಲಿಲ್ಲ. ಮದುವೆಯಾಗಿ ಸುಂದರ ಸಂಸಾರ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆದರೆ ಅಂತರ್ಜಾತಿ ವಿವಾಹಕ್ಕೆ (Inter-Caste Love) ಯುವತಿ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದು, ಹೀಗಾಗಿ ತಮಗೆ ರಕ್ಷಣೆಬೇಕು ಅಂತ ಪ್ರೇಮಿಗಳು ಕೊಪ್ಪಳದಿಂದ ಹುಬ್ಬಳ್ಳಿಗೆ (hubballi) ಓಡಿ ಬಂದಿದ್ದಾರೆ.

ಪ್ರೀತಿಗೆ ಹೆತ್ತವರ ವಿರೋಧ

ನಾಗರಾಜ್ ಮತ್ತು ಶೈಲಜಾ ಕೊಪ್ಪಳ ನಗರದ ಮಿಟ್ಟಿಗೇರಿ ಬಡಾವಣೆ ನಿವಾಸಿಗಳು. ಕಳೆದ ರಾತ್ರಿ ಬಸ್ ಹತ್ತಿಕೊಂಡು ಹುಬ್ಬಳ್ಳಿಗೆ ಬಂದಿರುವ ಜೋಡಿ, ಮುಂದೆ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಅನ್ನೋದು ತಿಳಿಯದೇ ಕಂಗಾಲಾಗಿದ್ದಾರೆ. ಮರಳಿ ಕೊಪ್ಪಳಕ್ಕೆ ಹೋದರೆ ಜೀವ ಭಯ, ಹೀಗಾಗಿ ಹುಬ್ಬಳ್ಳಿಯಲ್ಲಿಯೇ ಅಡ್ಡಾಡುತ್ತಿದ್ದಾರೆ. ಇನ್ನು ಈ ಜೋಡಿ ಕೊಪ್ಪಳದಿಂದ ಹುಬ್ಬಳ್ಳಿಗೆ ಬರಲು ಕಾರಣ ಇವರ ಪ್ರೀತಿಗೆ ಹೆತ್ತವರ ವಿರೋಧ.

ಇದನ್ನೂ ಓದಿ: ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್

ಕೊಪ್ಪಳ ನಗರದ ಮಿಟ್ಟಿಗೇರಿಯ ನಿವಾಸಿಯಾಗಿರುವ ನಾಗರಾಜ್ ಹಡಪದ ಮತ್ತು ಶೈಲಜಾ ವಾಲೀಕಾರ ಒಂದೇ ಬಡಾವಣೆ ನಿವಾಸಿಗಳು. ನಾಗರಾಜ್, ಕಟ್ಟಡ ನಿರ್ಮಾಣ ಕೆಲಸ ಮಾಡಿದರೆ, ಶೈಲಜಾ ಪಿಯುಸಿ ನಂತರ ಮನೆಯಲ್ಲಿಯೇ ಇದ್ದಾಳಂತೆ. ಇನ್ನು ಇಬ್ಬರು ಒಂದೇ ಬಡಾವಣೆಯಲ್ಲಿಯೇ ಮನೆ ಇದ್ದಿದ್ದರಿಂದ ಇಬ್ಬರ ನಡುವೆ ಎಂಟು ವರ್ಷಗಳ ಹಿಂದೆಯೇ ಪ್ರೀತಿಯಾಗಿತ್ತಂತೆ. ಆದರೆ ಕಳೆದ ಒಂದುವರೆ ವರ್ಷದಿಂದ  ಬಿಟ್ಟಿರಲಾರದಷ್ಟು ಪ್ರೀತಿ ಗಾಢವಾಗಿದೆ. ಹೀಗಾಗಿ ಇಬ್ಬರು ಮದುವೆಯಾಗಿ ಒಟ್ಟಿಗೆ ಬದುಕು ಕಟ್ಟಿಕೊಳ್ಳಬೇಕು ಅಂತ ಕನಸು ಕಂಡಿದ್ದಾರೆ. ಆದರೆ ಐದು ತಿಂಗಳ ಹಿಂದೆ ಯುವತಿ ಮನೆಯವರಿಗೆ ಪ್ರೀತಿ ವಿಚಾರ ಗೊತ್ತಾಗಿದ್ದು, ನಾಗರಾಜ್​​ನನ್ನು ಮಾತನಾಡುವುದಾಗಿ ಕರೆದು ಥಳಿಸಿದ್ದರಂತೆ.

ಊರು ಬಿಟ್ಟು ಓಡಿಬಂದ ಪ್ರೇಮಿಗಳು 

ನಮ್ಮ ಯುವತಿ ತಂಟೆಗೆ ಬಂದರೆ ಜೀವ ಸಮೇತ ಉಳಿಸಲ್ಲ ಅಂತ ಬೆದರಿಕೆ ಹಾಕಿದ್ದರಂತೆ. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದ ನಾಗರಾಜ್​​ಗೆ​​ ಕಳೆದ ರಾತ್ರಿ ಕರೆ ಮಾಡಿದ ಶೈಲಜಾ, ಮದುವೆಯಾದರೆ ನಿನ್ನ ಜೊತೆಯೇ. ನಾವು ಊರು ಬಿಟ್ಟು ಓಡಿ ಹೋಗೋಣ ಅಂತ ಹೇಳಿ, ನಾಗರಾಜ್​ನನ್ನು ಕರೆದುಕೊಂಡು ಹುಬ್ಬಳ್ಳಿಗೆ ಬಂದಿದ್ದಾಳೆ.

ಇನ್ನು ನಾಗರಾಜ್ ಮನಯಲ್ಲಿ ಶೈಲಜಾ ಜೊತೆ ವಿವಾಹಕ್ಕೆ ಒಪ್ಪಿಗೆ ಇದೆ. ಆದರೆ ಶೈಲಜಾ ಮನೆಯಲ್ಲಿ ಮಾತ್ರ ವಿವಾಹಕ್ಕೆ ಒಪ್ಪಿಗೆ ಇಲ್ಲ. ಇದಕ್ಕೆ ಕಾರಣ ಅಂತರ್ಜಾತಿ. ನಾಗರಾಜ್​​ ಹಡಪದ ಸಮುದಾಯದವರಾಗಿದ್ದರೆ, ಶೈಲಜಾ ಗೊಲ್ಲ ಸಮುದಾಯಕ್ಕೆ ಸೇರಿದ್ದಾಳೆ. ಹೀಗಾಗಿ ಜಾತಿ ಬೇರೆ ಬೇರೆಯಾಗಿದ್ದು, ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪಿಗೆಯಿಲ್ಲ ಅಂತ ಶೈಲಜಾ ಕುಟುಂಬ ಪಟ್ಟುಹಿಡಿದಿದೆ.

ನಮ್ಮ ಪಾಡಿಗೆ ಇರಲು ಬಿಡಿ: ಹೆತ್ತವರಿಗೆ ಮನವಿ

ಇನ್ನು ಶೈಲಜಾಗೆ ಬೇರೆ ಯುವಕನ ಜೊತೆ ವಿವಾಹಕ್ಕೆ ಹೆತ್ತವರು ಮುಂದಾಗಿದ್ದರಂತೆ. ಅದಕ್ಕಾಗಿ ಹುಡುಗನ ಹುಟುಕಾಟ ಕೂಡ ನಡೆಸಿದ್ದರಂತೆ. ಬೇರೆ ಯುವಕನ ಜೊತೆ ವಿವಾಹಕ್ಕೆ ಇಷ್ಟ ಇಲ್ಲದೇ ಇದ್ದಿದ್ದರಿಂದ, ಶೈಲಜಾ, ನಾಗರಾಜ್ ಜೊತೆ ಓಡಿ ಬಂದಿದ್ದಾಳೆ. ನಾವು ನಮ್ಮ ಜೀವನ ಕಟ್ಟಿಕೊಳ್ಳುತ್ತೇವೆ. ದಯವಿಟ್ಟು ನಮಗೆ ಅಡ್ಡಿ ಮಾಡಬೇಡಿ, ನಮ್ಮ ಪಾಡಿಗೆ ಇರಲು ಬಿಡಿ ಅಂತ ಶೈಲಜಾ ಹೆತ್ತವರಿಗೆ ಮನವಿ ಮಾಡಿದ್ದಾಳೆ.

ಇದನ್ನೂ ಓದಿ: ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರು ನೀಡಿದ ಯುವತಿ; ಮುಸ್ತಫಾ ವಿರುದ್ಧವೂ ಕೇಸ್​​!

ಇನ್ನು ಈ ಬಗ್ಗೆ ಈ ಹಿಂದೆ ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಪ್ರೇಮಿಗಳು ದಿಕ್ಕು ತೋಚದಂತಾಗಿ, ಕೊಪ್ಪಳದಿಂದ ಹುಬ್ಬಳ್ಳಿಗೆ ಬಂದಿದ್ದಾರೆ. ಇಬ್ಬರು ಪ್ರಾಪ್ತ ವಯಸ್ಕರರು ಆಗಿದ್ದರಿಂದ ಪೊಲೀಸರು ಅಂತರ್ಜಾತಿ ವಿವಾಹವಾಗಲು ಮುಂದಾಗಿರುವ ಜೋಡಿಗೆ ಸೂಕ್ತ ರಕ್ಷಣೆ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us