‘ವೆರಿ ಸಾರಿ’: ನೇಹಾ ಹಿರೇಮಠ ತಂದೆ ನಿರಂಜನ್ ಜತೆ ದೂರವಾಣಿಯಲ್ಲಿ ಇನ್ನೂ ಏನೇನಂದರು ಸಿಎಂ ಸಿದ್ದರಾಮಯ್ಯ? ಇಲ್ಲಿದೆ ವಿವರ

ಗುರುವಾರ (ಏ.18) ರಂದು ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಕೊಲೆಯಾಗಿತ್ತು. ಇಂದು ಕಾನೂನು ಸಚಿವ ಹೆಚ್​ಕೆ ಪಾಟೀಲ್​ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ದೂರವಾಣಿ ಕರೆ ಮುಖಾಂತರ ನಿರಂಜನ ಹಿರೇಮಠ ಮಾತನಾಡಿದರು.

‘ವೆರಿ ಸಾರಿ’: ನೇಹಾ ಹಿರೇಮಠ ತಂದೆ ನಿರಂಜನ್ ಜತೆ ದೂರವಾಣಿಯಲ್ಲಿ ಇನ್ನೂ ಏನೇನಂದರು ಸಿಎಂ ಸಿದ್ದರಾಮಯ್ಯ? ಇಲ್ಲಿದೆ ವಿವರ
ನಿರಂಜನ್​ ಹಿರೇಮಠ ಜೊತೆ ದೂರವಾಣಿ ಮೂಲಕ ಸಿದ್ದರಾಮಯ್ಯ ಮಾತು
Follow us
| Updated By: ವಿವೇಕ ಬಿರಾದಾರ

Updated on:Apr 23, 2024 | 1:04 PM

ಹುಬ್ಬಳ್ಳಿ ಏಪ್ರಿಲ್​ 23: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್​ ಸದಸ್ಯ ನಿರಂಜನ ಹಿರೇಮಠ (Niranjan Hiremath) ಪುತ್ರಿ, ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣ ರಾಜ್ಯ ಮಾತ್ರವಲ್ಲದೆ ದೇಶದಲ್ಲಿ ಸಾಕಷ್ಟು ಸುದ್ದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಏ.23) ನೇಹಾ ತಂದೆ ನಿರಂಜನ್​ ಹಿರೇಮಠ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ವೆರಿ ಸಾರಿ ಎಂದಿದ್ದಾರೆ. ಕೊಲೆ ನಡೆದು ಆರು ದಿನಗಳು ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ನೇಹಾ ತಂದೆ ನಿರಂಜನ ಹಿರೇಮಠ ಆರೋಪಿಸಿದ್ದರು. ಅಲ್ಲದೆ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು “ವೈಯಕ್ತಿಕ ವಿಚಾರವಾಗಿ” ನಡೆದ ಕೊಲೆ ಎಂದು ಹೇಳುವ ಮೂಲಕ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಇನ್ನು ತಮ್ಮದೇ ಪಕ್ಷದ ಪಾಲಿಕೆ ಸದಸ್ಯನ ಪುತ್ರಿಯ ಕೊಲೆಯಾಗಿದ್ದರೂ ಮುಖ್ಯಮಂತ್ರಿಗಳು ನಿರಂಜನ ಹಿರೇಮಠ ಮನೆಗೆ ಭೇಟಿ ನೀಡದೆ ಇದ್ದಿದ್ದು, ಕೆರಳುವಂತೆ ಮಾಡಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಂಜನ ಹಿರೇಮಠ ಅವರ ಬಳಿ ಕ್ಷಮೆ ಕೇಳಿದ್ದು ಮಾತ್ರ ನಿಗೂಢವಾಗಿದೆ.

ನಿರಂಜನ ಹಿರೇಮಠ ಅವರ ನಿವಾಸಕ್ಕೆ ಮಂಗಳವಾರ ಹೆಚ್​.ಕೆ ಪಾಟೀಲ್ ಭೇಟಿ ನೀಡಿ, ಸಾಂತ್ವನ ಹೇಳಿದರು. ಈ ವೇಳೆ ಹೆಚ್​​.ಕೆ.ಪಾಟೀಲ್​ ಅವರು ಮುಖ್ಯಮಂತ್ರಿಗಳಿಗೆ ಕರೆ ಮಾಡಿದರು. ಆಗ ಸಿಎಂ ಸಿದ್ದರಾಮಯ್ಯ, ನೇಹಾ ತಂದೆ ನಿರಂಜನ ಹಿರೇಮಠ ಜೊತೆ ಮಾತನಾಡಿ, ನಾವು ನಿಮ್ಮ ಜೊತೆ ಇರುತ್ತೇವೆ, ವೆರಿ ಸಾರಿ ಎಂದರು. ಪ್ರಕರಣವನ್ನು ಸಿಐಡಿಗೆ ನೀಡಿದ್ದಕ್ಕೆ ನಿಮಗೆ ಧನ್ಯವಾದ ಅಂತ ನಿರಂಜನ ಹಿರೇಮಠ ಸಿಎಂಗೆ ಹೇಳಿದರು. ಬಳಿಕ ಹೆಚ್​.ಕೆ ಪಾಟೀಲ್​ ಮಾತನಾಡಿ, ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದಕ್ಕೆ ಸಮಾಧಾನ ಇದೆ. ವಿಶೇಷ ನ್ಯಾಯಾಲಯ ಸ್ಥಾಪನೆ ವಿಚಾರಕ್ಕೂ ಸಮಾಧಾನ ಇದೆ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುವತಿ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ ಆರೋಪ: ಬಂಧನ

ನಿರಂಜನ ಹಿರೇಮಠ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್​​.ಕೆ.ಪಾಟೀಲ್, ಅನಿವಾರ್ಯ ಕಾರಣಗಳಿಂದ ಇಂದು ಸಿಎಂ ಬರುವುದಕ್ಕೆ ಆಗಿಲ್ಲ. ನೇಹಾ ತಂದೆ ನಿರಂಜನ ಜತೆ ಸಿಎಂ ಮಾತಾಡಿ ಸಾಂತ್ವನ ಹೇಳಿದ್ದಾರೆ. ನಿರಂಜನ ಹಿರೇಮಠಗೆ ಧೈರ್ಯದಿಂದ ಇರುವಂತೆ ಸಿಎಂ ಹೇಳಿದ್ದಾರೆ. ನೇಹಾ ಸಾವಿಗೆ ನ್ಯಾಯ ಸಿಗಲಿದೆ. ಪ್ರಕರಣದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಹೈಕೋರ್ಟ್​ಗೆ ಪತ್ರ ಬರೆಯುತ್ತೇವೆ. ತಪ್ಪಿಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದರು.

ನಿರಂಜನ್​ ಹಿರೇಮಠ, ಹೆಚ್​ಕೆ ಪಾಟೀಲ್​

ವಿಶೇಷ ನ್ಯಾಯಾಲಯಕ್ಕೆ ನೇಹಾ ಹೆಸರು

ಪ್ರಕರಣ ಸಂಬಂಧ ಸರ್ಕಾರ ತಕ್ಷಣ ಸ್ಪಂದಿಸಿದೆ. ವಿಶೇಷ ನ್ಯಾಯಾಲಯ ಸ್ಥಾಪನೆ ನಿರ್ಣಾಯಕ್ಕೆ ಧನ್ಯವಾದ ಹೇಳುತ್ತೇನೆ. ವಿಶೇಷ ನ್ಯಾಯಾಲಯಕ್ಕೆ ನೇಹಾ ಹಿರೇಮಠ್ ಅಂತ ಹೆಸರಿಡಬೇಕು, ಕಾಯ್ದೆಗೂ ಅವರ ಹೆಸರಿಡಿ. ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ನಿರಂಜನ ಹಿರೇಮಠ ಆಗ್ರಹಿಸಿದರು.

ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳೆಕೆ ಕೊಟ್ಟಿದ್ದೇವೆ. ಕಾನೂನಿನ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬೆನ್ನ ಹಿಂದೆ ಸರ್ಕಾರ ಕೆಲಸ ಮಾಡಿದೆ. ಸಿಎಂ ಸಾಂತ್ವನ ಹೇಳಲು ಬರುವುದಾಗಿ ಹೇಳಿದ್ದಾರೆ. ನಾನು ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ. ಪೊಲೀಸ್ ಆಯುಕ್ತರ ಬಗ್ಗೆ ದುಃಖದಲ್ಲಿ ತಪ್ಪಾಗಿ ಮಾತನಾಡಿದ್ದೇನೆ. ನನ್ನನ್ನು ಎಲ್ಲರೂ ಕ್ಷಮಿಸಿ. ಸ್ಥಳೀಯ ಶಾಸಕರು, ಜಿಲ್ಲಾಧ್ಯಕ್ಷರು ಎಲ್ಲ ಮುಖಂಡರು ನಮ್ಮ ಪರ ನಿಂತಿದ್ದಾರೆ ಎಂದರು.

ಈಗ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಅವರು ಹೇಗೆ ತನಿಖೆ ಮಾಡುತ್ತಾರೆ ಮೊದಲು ಮಾಡಲಿ. ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡುತ್ತಿಲ್ಲ ಅಂತ ಆರೋಪ ಮಾಡಿದ್ದೆ. ನಿಷ್ಪಕ್ಷವಾಗಿ ತನಿಖೆ ನಡೆದಿರುವುದು ನನಗೆ ಗೊತ್ತಾಗಿದೆ. ಮಾಹಿತಿ ಕೊರತೆಯಿಂದ ಮಾತನಾಡಿದ್ದೇನೆ. ಪೊಲೀಸ್ ಇಲಾಖೆ ಬಳಿಯೂ ಕ್ಷಮೆ ಕೇಳುತ್ತೇನೆ. ಆತಂಕದಲ್ಲಿ ನಾನು ಕೆಲ ಹೇಳಿಕೆ ನೀಡಿದೆ. ಕಾಣದ ಕೈ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೆಲ್ಲರಿಗೂ ಧನ್ಯವಾದ ಹೇಳುತ್ತೇನೆ ಹೇಳಿದರು.

ಸಿ.ಇ.ಎನ್ ಕ್ರೈಮ್ ಪೊಲೀಸ್ ಠಾಣೆಗೆ ನೇಹಾ ತಾಯಿ ದೂರು

ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​​ನಲ್ಲಿ (Instagram) ಕಿಡಿಗೇಡಿಗಳು ತೆರದಿದ್ದ “ಫಯಾಜ್​ನೇಹಾ2024” (FayazNeha) ಎಂಬ ಹೆಸರಿನ ಖಾತೆಯನ್ನು ಬ್ಲಾಕ್​ ಮಾಡುವಂತೆ ಕೊಲೆಯಾದ ನೇಹಾ ಹಿರೇಮಠ ತಾಯಿ ಗೀತಾ ಹಿರೇಮಠ ಸಿ.ಇ.ಎನ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಕಿಡಿಗೇಡಿಗಳು ಇನ್​ಸ್ಟಾಗ್ರಾಮ್​​ನಲ್ಲಿ fayazneha2024 ಖಾತೆ ತೆರದು ನನ್ನ ಮಗಳು (ನೇಹಾ) ಹಾಗೂ ಫಯಾಜ್ ಜೊತೆಗೆ ಇರುವ ಸುಳ್ಳು ಭಾವಚಿತ್ರಗಳನ್ನು ಹರಿಬಿಡುತ್ತಿದ್ದಾರೆ. ಹೀಗಾಗಿ ಆ ಖಾತೆಯನ್ನು ಕೂಡಲೆ ಬ್ಲಾಕ್​ ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ” ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:49 pm, Tue, 23 April 24