ಕೊಲೆ ಆರೋಪಿಗಳಿಂದ ಸರಳವಾಸ್ತು ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 10, 2024 | 3:05 PM

2022 ಜುಲೈ 5 ರಂದು ಸರಳವಾಸ್ತು ಚಂದ್ರಶೇಖರ್​ ಗುರೂಜಿ‌ ಅವರನ್ನು ಹುಬ್ಬಳ್ಳಿಯ ಉಣಕಲ್ ಕರೆಯ ಬಳಿ ಇರುವ ಪ್ರತಿಷ್ಠಿತ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಇಬ್ಬರು ಸೇರಿಕೊಂಡು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದರು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದೇ ಆರೋಪಿಗಳು ಗುರೂಜಿ ಕುಟುಂಬಕ್ಕೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

ಕೊಲೆ ಆರೋಪಿಗಳಿಂದ ಸರಳವಾಸ್ತು ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ
ಕೊಲೆ ಆರೋಪಿಗಳಿಂದ ಸರಳವಾಸ್ತು ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ
Follow us on

ಹುಬ್ಬಳ್ಳಿ, ಸೆ.10: ಹುಬ್ಬಳ್ಳಿಯಲ್ಲಿ ನಡೆದಿದ್ದ  ಸರಳವಾಸ್ತು ಚಂದ್ರಶೇಖರ​ ಗುರೂಜಿ ಕೊಲೆ(Chandrashekhar Guruji Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಆರೋಪಿಗಳಿಂದ ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದ್ದು, ಈ ಹಿನ್ನಲೆ ಆರೋಪಿಗಳ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2022 ಜುಲೈ 5 ರಂದು ನಡೆದಿದ್ದ ಸರಳವಾಸ್ತು ಚಂದ್ರಶೇಖರ್​ ಗುರೂಜಿ‌ ಭೀಕರ ಹತ್ಯೆ, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದೇ ಆರೋಪಿಗಳಿಂದ ಗುರೂಜಿ ಕುಟುಂಬಕ್ಕೆ ಬೆದರಿಕೆ ಕೇಳಿಬಂದಿದೆ.

ಹೌದು, ಹುಬ್ಬಳ್ಳಿಯ ಉಣಕಲ್ ಕರೆಯ ಬಳಿ ಇರುವ ಪ್ರತಿಷ್ಠಿತ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಸರಳವಾಸ್ತು ತಜ್ಞ ಚಂದ್ರಶೇಖರ​ ಗುರೂಜಿ ಅವರನ್ನು ಇಬ್ಬರು ಸೇರಿಕೊಂಡು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದರು. ಈ ಹತ್ಯೆ ಪ್ರಕರಣದ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಗೂರೂಜಿ ಅವರ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮೆರೇವಾಡ ವಿರುದ್ಧ ಗುರೂಜಿ ಸಂಬಂಧಿಕರಾದ ಉದ್ಯಮಿ ಸಂಜಯ್​ ಅಂಗಡಿ ಅವರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳು ಅರೆಸ್ಟ್

ನಿಮ್ಮನ್ನು ಗುರೂಜಿ ತರಹ ಎತ್ತಿ ಬಿಡುತ್ತೀವಿ

ಗುರೂಜಿ ಹತ್ಯೆ ಪ್ರಕರಣದ ವಿಚಾರಣೆ ಮಾಹಿತಿ ಪಡೆಯಲು, 2024ರ ಫೆ. 14ರಂದು ಸಂಜಯ್​ ಅವರು ತಂಗಿ ಜೊತೆ ಹುಬ್ಬಳ್ಳಿ ಕೋರ್ಟ್‌ಗೆ ಬಂದಿದ್ದರು. ಇದೇ ವೇಳೆ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ವಿಚಾರಣೆಗೆ ಕರೆದುಕೊಂಡು ಬಂದಿದ್ದರು. ವಾಪಾಸ್ಸು ಅವರನ್ನು ಕರೆದೊಯ್ಯುವಾಗ ಗುರೂಜಿ ಸಂಬಂಧಿಕರಿಗೆ ‘ನೀವು ಕೋರ್ಟ್‌ನಲ್ಲಿ ಕಂಡರೆ ಗುರೂಜಿ ತರಹ ಎತ್ತಿ ಬಿಡುತ್ತೀವಿ. ಒಂದೇ ದಿನ ಹೊರಗೆ ಬಂದರೂ ನಿಮ್ಮ ಯಾರನ್ನೂ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದೂ ಅಲ್ಲದೆ, ಹತ್ಯೆ ಪ್ರಕರಣವನ್ನ ರಾಜೀ ಮಾಡಿ ಎಂದಿದ್ದಾರಂತೆ. ಸುರೇಶ್​ ಪಲ್ಲೇದ ಮೂಲಕ ಪ್ರಕರಣ ರಾಜೀ ಮಾಡಿಕೊಳ್ಳುವಂತೆ ತಿಳಿಸಿದ್ದಾರೆಂದು ಸಂಜಯ್ ದೂರಿನಲ್ಲಿ ದಾಖಲಿಸಿದ್ದಾರೆ.

ಅಗತ್ಯ ಬಿದ್ದರೆ ಇಬ್ಬರು ಆರೋಪಿಗಳನ್ನ ಕಸ್ಟ್​ಡಿಗೆ ತೆಗದುಕೊಳ್ಳುವೆ- ಪೊಲೀಸ್ ಆಯುಕ್ತ ಶಶಿಕುಮಾರ್

ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ‘ಚಂದ್ರಶೇಖರ್ ಗುರೂಜಿ ಕುಟುಂಬಸ್ಥರಿಗೆ ಬೆದರಿಕೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಚಂದ್ರಶೇಖರ್ ಗುರೂಜಿ ಆರೋಪಿಗಳು ಬೆದರಿಕೆ ಹಾಕಿರೋ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಗುರೂಜಿ ಕುಟುಂಬಸ್ಥರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕೋರ್ಟ್​ನಲ್ಲಿ ಟ್ರಯಲ್ ನಡೆಯುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿ ಕೊಲೆ, ಅಟ್ರಾಸಿಟಿ, ಪೋಕ್ಸೋ, ವರದಕ್ಷಿಣೆ ಪ್ರಕರಣಗಳ ಸಂತ್ರಸ್ತರನ್ನು ಕರೆಸಲಾಗಿತ್ತು. ಆ ಸಂದರ್ಭದಲ್ಲಿ ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳು ಬೆದರಿಕೆ ಹಾಕಿರೋ ಅಂಶ ಬೆಳಕಿಗೆ ಬಂದಿದೆ.

ಪ್ರಕರಣ ಯಾವ ಸ್ಟೇಜ್​ನಲ್ಲಿದೆ, ಅವರಿಗೇನಾದರೂ ತೊಂದರೆ ಆಗಿದ್ಯಾ ಎಂದು ಕೇಳಿದ್ದೇವೆ. ಆರೋಪಿಗಳು ಕೋರ್ಟ್​ಗೆ ಬಂದ ವೇಳೆ ಗುರಾಯಿಸೋದು, ಬೆದರಿಕೆ ಹಾಕಿರೋದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ. ಅದರ ಹಿನ್ನೆಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಗತ್ಯ ಬಿದ್ದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತದೆ.
ಪ್ರಕರಣದ ಕುರಿತು ಸಂಬಂಧ ಪಟ್ಟ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಲಾಗುತ್ತೆ. ಇಬ್ಬರೇ ಈ ಬೆದರಿಕೆ ಪ್ರಕರಣದಲ್ಲಿದ್ದಾರಾ?, ಮತ್ಯಾರಾದರೂ ಇದ್ದಾರಾ ಪರಿಶೀಲನೆ ಮಾಡೋಕೆ ಸೂಚಿಸಿದ್ದೇನೆ. ಜೊತೆಗೆ ಅಗತ್ಯ ಬಿದ್ದರೆ ಕಸ್ಟ್​ಡಿಗೆ ತೆಗದುಕೊಳ್ಳುವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ