ಹುಬ್ಬಳ್ಳಿ: ಕಾನೂನು ಸಚಿವರ ವಿರುದ್ಧವೇ ಹೋರಾಡಿ ಸುಪ್ರೀಂಕೋರ್ಟ್​​ನಲ್ಲಿ ಗೆದ್ದ ಅಕ್ಕ ತಂಗಿ

ಹುಬ್ಬಳ್ಳಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಜಯ ಗಳಿಸಿದ್ದಾರೆ. ಜಾಗ ತಮ್ಮದು ಎಂದು ಹೇಳಿಕೊಂಡಿದ್ದ ಸಚಿವರ ಕುಟುಂಬಕ್ಕೆ ಕೋರ್ಟ್​​ ಶಾಕ್​​ ಕೊಟ್ಟಿದ್ದು, 135 ವರ್ಷಗಳ ಬಳಿಕ ಜಾಗ ಮರಳಿ ನಮ್ಮದಾಗಿದೆ ಎಂದು ಸಹೋದರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: ಕಾನೂನು ಸಚಿವರ ವಿರುದ್ಧವೇ ಹೋರಾಡಿ ಸುಪ್ರೀಂಕೋರ್ಟ್​​ನಲ್ಲಿ ಗೆದ್ದ ಅಕ್ಕ ತಂಗಿ
ಹೆಚ್​​.ಕೆ. ಪಾಟೀಲ್ ಕುಟುಂಬಕ್ಕೆ ಹಿನ್ನಡೆ
Updated By: ಪ್ರಸನ್ನ ಹೆಗಡೆ

Updated on: Dec 11, 2025 | 2:45 PM

ಹುಬ್ಬಳ್ಳಿ, ಡಿಸೆಂಬರ್​​ 11: ಜಾಗದ ವಿಚಾರವಾಗಿ ಕರ್ನಾಟಕದ ಕಾನೂನು ಸಚಿವ ಹೆಚ್​​. ಕೆ. ಪಾಟೀಲ್​​ ಅವರ ವಿರುದ್ಧವೇ ಹೋರಾಡಿ ಸುಪ್ರೀಂಕೋರ್ಟ್​​ನಲ್ಲಿ ಅಕ್ಕ-ತಂಗಿ ಗೆದ್ದಿದ್ದಾರೆ. ಹುಬ್ಬಳ್ಳಿ ನಗರದ ಪಿಂಟೋ ಸರ್ಕಲ್ ಬಳಿಯ 15 ಗುಂಟೆ ಜಾಗವನ್ನು ಕಬಳಿಸಲಾಗಿದೆ ಎಂದು ಆರೋಪಿಸಿ ಸಹೋದರಿಯರಾದ ಹುಬ್ಬಳ್ಳಿ ನಗರಗ ಸಾವಕ್ಕ ಸುಳ್ಳದ, ಧಾರವಾಡದ ಜಕ್ಕವ್ವ ಕೋರ್ಟ್​​ ಮೊರೆ ಹೋಗಿದ್ದರು. ಹೆಚ್​​.ಕೆ. ಪಾಟೀಲ್ ಕುಟುಂಬ ಆಸ್ತಿ ಬಿಟ್ಟುಕೊಡ್ತಿಲ್ಲ ಎಂದು ಆರೋಪಿಸಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್ ದ್ವೀಸದಸ್ಯ ಪೀಠ ಡಿಸೆಂಬರ್ 9ರಂದು ಆದೇಶ ನೀಡಿದ್ದು, 15 ಗುಂಟೆ ಜಾಗ ಸಾವಕ್ಕ ಮತ್ತು ಜಕ್ಕವ್ವ ಸಹೋದರಿಯರಿಗೆ ಸೇರಿದ್ದು ಎಂದಿದೆ.

ಪ್ರಕರಣ ಏನು?

ಸಾವಕ್ಕ, ಜಕ್ಕವ್ವ ತಂದೆ ಮರಿತಮ್ಮಪ್ಪ ಅಮರಶೆಟ್ಟಿ 1894ರಲ್ಲಿ ಇಂಡಿಯನ್ ಕಾಟನ್ ಕಂಪನಿಗೆ 5 ಎಕರೆ ಜಾಗವನ್ನು 10 ವರ್ಷಗಳ ಕಾಲ ಲೀಸ್​​ಗೆ ನೀಡಿದ್ದರು. ಬಳಿಕ 1941ರಲ್ಲಿ ಸಿದ್ದಲಿಂಗಪ್ಪ ಬುಳ್ಳಾ ಅನ್ನೋರು ಇಂಡಿಯನ್ ಕಾಟನ್ ಕಂಪನಿಯಿಂದ ಲೀಸ್ ಹೋಲ್ಡ್ ರೈಟ್ಸ್ ಖರೀದಿಸಿದ್ದರು. ಅದಾದಮೇಲೆ 1964ರಲ್ಲಿ ಬುಳ್ಳಾರಿಂದ ಹೆಚ್. ಕೆ.  ಪಾಟೀಲ್​​ರ ತಂದೆ ಕೆ. ಹೆಚ್. ಪಾಟೀಲರು ಆ ಪೈಕಿ 15 ಗುಂಟೆ ಜಾಗವನ್ನು ಸಬ್​​ಲೀಸ್​​ಗೆ ಪಡೆದಿದ್ದರು. ಬಳಿಕ ಲೀಸ್​​ಗೆ ಪಡೆದ ಜಾಗವನ್ನು ಬುಳ್ಳಾ ಕುಟುಂಬ ಮತ್ತು ಹೆಚ್. ಕೆ. ಪಾಟೀಲ್ ಕುಟುಂಬ ಬಿಟ್ಟುಕೊಡದ ಕಾರಣ ಸಹೋದರಿಯರು ಕೋರ್ಟ್​​ ಮೊರೆ ಹೋಗಿದ್ದರು. 2024ರಲ್ಲಿ ಸಾವಕ್ಕ ಮತ್ತು ಜಕ್ಕವ್ವ ಪರ ಸುಪ್ರೀಂಕೋರ್ಟ್​​ ಆದೇಶವಾಗಿತ್ತು.

ಇದನ್ನೂ ಓದಿ: NWKRTCಗೆ ಬಾರದ 940 ಕೋಟಿ ಶಕ್ತಿ ಯೋಜನೆ ಹಣ; ಸಂಕಷ್ಟದಲ್ಲಿ ನಿಗಮ

ಕೋರ್ಟ್​​ ತನ್ನ ಆದೇಶದಲ್ಲಿ ಮೂಲ ಬಾಡಿಗೆದಾರ ಬುಳ್ಳಾ ಜಾಗದ ಮಾಲೀಕರಲ್ಲಎಂದು ಹೇಳಿದ್ದ ಕಾರಣ, ಅವರ ಕುಟುಂಬ ಕಬ್ಜಾ ಮಾಡಿದ್ದ ಜಾಗವನ್ನು ಮಾಲಿಕರಿಗೆ ಬಿಟ್ಟುಕೊಟ್ಟಿತ್ತು. ಆದರೆ ಹೆಚ್. ಕೆ. ಪಾಟೀಲ್ ಕುಟುಂಬ ಮಾತ್ರ ಇದಕ್ಕೆ ತಕರಾರು ತೆಗೆದ ಕಾರಣ ಸಹೋದರಿಯರು ಮತ್ತೆ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು. ಇದೀಗ ಈ ಕಾನೂನು ಹೋರಾಟದಲ್ಲಿಯೂ ಸಾವಕ್ಕ ಮತ್ತು ಜಕ್ಕವ್ವ ಸಹೋದರಿಯರಿಗೆ ಜಯವಾಗಿದೆ. ಸುಪ್ರೀಂಕೋರ್ಟ್ ಆದೇಶದಿಂದ ಸಂತಸಗೊಂಡಿರುವ ಇವರು, 135 ವರ್ಷಗಳ ನಂತರ ನಮ್ಮ ಆಸ್ತಿ ನಮಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:44 pm, Thu, 11 December 25