ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ; 100ಕ್ಕೂ ಹೆಚ್ಚು ಜನ ವಶ, ಕೋರ್ಟ್‌ಗೆ ಹಾಜರುಪಡಿಸಲಿರುವ ಪೊಲೀಸರು

ಹಳೇ ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 100ಕ್ಕೂ ಹೆಚ್ಚು ಜನರನ್ನ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 18ರ ಬೆಳಗ್ಗೆ 10.30ಕ್ಕೆ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ; 100ಕ್ಕೂ ಹೆಚ್ಚು ಜನ ವಶ, ಕೋರ್ಟ್‌ಗೆ ಹಾಜರುಪಡಿಸಲಿರುವ ಪೊಲೀಸರು
ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ದೃಶ್ಯಗಳು
Edited By: ಆಯೇಷಾ ಬಾನು

Updated on: Apr 18, 2022 | 11:24 AM

ಹುಬ್ಬಳ್ಳಿ: ಏಪ್ರಿಲ್ 17ರ ಭಾನುವಾರ ರಾತ್ರಿ ಹುಬ್ಬಳ್ಳಿ ನಗರದಲ್ಲಿ ದೊಡ್ಡ ಗಲಭೆಯೇ ನಡೆದು ಹೋಗಿದ್ದು, ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಧರ್ಮ ಯುದ್ಧದ ಮಧ್ಯೆ ಹುಬ್ಬಳ್ಳಿ ಗಲಾಟೆಯಾಗಿರೋದು ರಾಜ್ಯವನ್ನ ಮತ್ತಷ್ಟು ಅಪಾಯಕಾರಿ ಪರಿಸ್ಥಿತಿಯತ್ತ ತಳ್ಳಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 100ಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 88 ಆರೋಪಿಗಳನ್ನು ಬಂಧಿಸಿದ್ದಾರೆ. ಗಲಾಟೆ ಪ್ರಕರಣ ಸಂಬಂಧ ಈವರೆಗೆ 10 ಪ್ರಕರಣ ದಾಖಲಾಗಿವೆ. ಏಪ್ರಿಲ್ 18ರ ಬೆಳಗ್ಗೆ 10.30ಕ್ಕೆ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಪರಾರಿಯಾಗಿರುವ ಮತ್ತಷ್ಟು ಆರೋಪಿಗಳಿಗಾಗಿ 2 ಪೊಲೀಸ್ ತಂಡಗಳಿಂದ ಶೋಧಕಾರ್ಯ ನಡೆಯುತ್ತಿದೆ.

ಹುಬ್ಬಳ್ಳಿ ಘಟನೆಗೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಸಾಮ್ಯತೆ
ಡಿಜೆ ಹಳ್ಳಿ, ಕೆಜೆ ಹಳ್ಳಿ ರೀತಿಯಲ್ಲಿಯೇ ಹುಬ್ಬಳ್ಳಿಯಲ್ಲಿ ಗಲಭೆಗೆ ಫ್ಲ್ಯಾನ್ ನಡೆದಿತ್ತು ಎಂಬ ಬಗ್ಗೆ ಸ್ವತಃ ಗೃಹ ಸಚಿವರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಹಳೇ ಹುಬ್ಬಳ್ಳಿ ಗಲಭೆಗೂ ಡಿಜೆ ಹಳ್ಳಿ ಘಟನೆಗೂ ಸಾಮ್ಯತೆ ಇದೆ ಎಂದು ಗೃಹ ಸಚಿವ ಆರಗ ತಿಳಿಸಿದ್ದರು. ಹೀಗಾಗೇ ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಪ್ರಕರಣವನ್ನ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ನಿನ್ನೆ ರಾತ್ರಿಯೇ ಹಳೇ ಹುಬ್ಬಳ್ಳಿ ಠಾಣೆಗೆ ಭೇಟಿ ನೀಡಿ ಎಡಿಜಿಪಿ ಕಮಿಷನರ್ ಲಾಬೂರಾನ್ ರಿಂದ ಮಾಹಿತಿ ಪಡೆದಿದ್ದಾರೆ.

ಕಾಂಗ್ರೆಸ್ ಕಾರ್ಯಧ್ಯಕ್ಷ ಸಲೀಂ ನೇತೃತ್ವದ ನಿಯೋಗ ಪೊಲೀಸ್ ಕಮಿಷನರ್ ಲಾಬೂರಾಮ್ ಭೇಟಿ ಮಾಡಲಿದೆ. ನಿನ್ನೆಯ ಘಟನೆ ಬಗ್ಗೆ ಸಭೆ ನಡೆಸಿರುವ ಕಾಂಗ್ರೆಸ್, ಅಮಾಯಕರ ಬಂಧನವಾಗುತ್ತಿದೆ ಎಂದಿತ್ತು. ಹೀಗಾಗಿ ಅಮಾಯಕರನ್ನ ಬಂಧಿಸಬೇಡಿ, ಘಟನೆಯ ಆರೋಪಿಗಳನ್ನ ಬಂಧಿಸಿ ಎಂದು ಮನವಿ ಮಾಡಲಿದೆ.

8 ತಂಡಗಳನ್ನು ಮಾಡಿ ತನಿಖೆ ನಡೆಸುತ್ತಿರುವ ಪೊಲೀಸರು
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 8 ತಂಡಗಳನ್ನು ಮಾಡಿ ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆಗೆ ಒಂದು ತಂಡ ರಚನೆ ಮಾಡಲಾಗಿದ್ದು ಘಟನಾ ಸ್ಥಳದಲ್ಲಿದ್ದ ವಾಹನಗಳ ಬಗ್ಗೆಯೂ ಶೋಧಕಾರ್ಯ ನಡೆಯುತ್ತಿದೆ. ಸೈಬರ್ ಕ್ರೈಂ ತಂಡದಿಂದ ಸಾಮಾಜಿಕ ಜಾಲತಾಣದಲ್ಲಿ ಶೋಧ ನಡೆಯುತ್ತಿದೆ. ವಾಟ್ಸಾಪ್, ಫೇಸ್‌ಬುಕ್, ಇನ್ಸ್‌ಟಾಗ್ರಾಂ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹುಬ್ಬಳ್ಳಿ ಗಲಾಟೆಯ ಹಿಂದೆ ಮಾಸ್ಟರ್ ಮೈಂಡ್ ಇರುವ ಶಂಕೆ ವ್ಯಕ್ತವಾಗಿದ್ದು ಮಾಸ್ಟರ್ ಮೈಂಡ್ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ವಾಟ್ಸಾಪ್ ಸ್ಟೇಟಸ್ ವಿರುದ್ಧ ಠಾಣೆಗೆ ದೂರು ನೀಡಲು ಬಂದವರು ಠಾಣೆಯ ಬಳಿ ಗಲಾಟೆ ಮಾಡಿದ್ದರು. ಗಲಾಟೆ ಮಾಡುವ ಉದ್ದೇಶದಿಂದಲೇ ಕಲ್ಲು ಸಂಗ್ರಹ ಮಾಡಿದ್ದರು. ಹೀಗಾಗಿ ಇದರ ಹಿಂದೆ ಮಾಸ್ಟರ್ ಮೈಂಡ್ ಇರುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ಮೊಬೈಲ್ ಟವರ್ ಲೊಕೇಷನ್, ಆರೋಪಿಗಳ ಕಾಲ್ ಟ್ರೇಸ್ ಮಾಡುಲಾಗುತ್ತಿದೆ. ಗಲಭೆಗೆ ಅಸಲಿ ಕಾರಣವನ್ನು ಪತ್ತೆಹಚ್ಚುಲು ಪೊಲೀಸರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಹಿಂದೂಗಳ ಗುರಿಯಾಗಿಸಿ ವ್ಯವಸ್ಥಿತವಾಗಿ ದಾಳಿ ಮಾಡಲಾಗಿದೆ
ವಾಟ್ಸಾಪ್ ಸ್ಟೇಟಸ್ ಕೇವಲ ನೆಪ, ಅದು ಪೂರ್ವಯೋಜಿತ ಗಲಭೆ. ಹಿಂದೂಗಳ ಗುರಿಯಾಗಿಸಿ ವ್ಯವಸ್ಥಿತವಾಗಿ ದಾಳಿ ಮಾಡಲಾಗಿದೆ ಎಂದು ಘಟನೆ ಸಂಬಂಧ ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಬೇರೆ ಗಲಭೆಗಳಲ್ಲಿ ಹಿಂದೂಗಳ ಮನೆಮನೆಗೆ ಹೋಗಿ ಬಂಧಿಸಿದ್ರು. ಆಗ ಕಾಂಗ್ರೆಸ್​ನವರಿಗೆ ಅವರು ಅಮಾಯಕರೆಂದು ಕಾಣಿಸಲಿಲ್ಲ. ಮುಸ್ಲಿಮರನ್ನು ಬಂಧಿಸಿದ ಕೂಡಲೇ ಅಮಾಯಕರು ಅಂತಾರೆ. ಪೊಲೀಸರನ್ನು ಅವರಷ್ಟಕ್ಕೆ ಸ್ವತಂತ್ರವಾಗಿ ತನಿಖೆ ಮಾಡಲು ಬಿಡಿ. ಇವರು ಅತ್ಯಂತ ಕ್ರೂರಿಗಳು, ಸಮಾಜಘಾತುಕರು, ಗೂಂಡಾಗಳು, ಇಂತಹವರನ್ನ ಬಂಧನ ಮಾಡಿದರೆ ನಿಮಗ್ಯಾಕೆ ಉರಿಯುತ್ತೆ. ಪೊಲೀಸರನ್ನ ನೈತಿಕವಾಗಿ ಸೋಲಿಸುವ ಪ್ರಯತ್ನ ಮಾಡುತ್ತಿದ್ದೀರಿ. ಪ್ರಕರಣದ ಕುರಿತು ಸಮಗ್ರ ತನಿಖೆಗೆ ನಾನು ಆಗ್ರಹಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪೊಲೀಸರಿಗೆ ತಲೆನೋವಾದ ಆರೋಪಿಗಳ ಪತ್ತೆ ಕಾರ್ಯ
ಈ ಗಲಾಟೆ ಕೇಸ್​ಗೆ ಸಂಬಂಧಿಸಿ ಪೊಲೀಸರಿಗೆ ಆರೋಪಿಗಳ ಪತ್ತೆ ಕಾರ್ಯ ತಲೆನೋವಾಗಿದೆ. ಹೀಗಾಗಿ ಸಿಸಿಟಿವಿ ದೃಶ್ಯ ಮೂಲಕ ಬಂಧನಕ್ಕೆ ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.  ಆದ್ರೆ ಸಿಸಿಟಿವಿ ಕೆಲಸ ಮಾಡದಿರುವುದರಿಂದ ಬಂಧನಕ್ಕೆ ಹಿನ್ನಡೆಯಾಗಿದೆ. 48 ಸಿಸಿಟಿವಿ ಕ್ಯಾಮರಾ ಪೈಕಿ 21 ಮಾತ್ರ ಕಾರ್ಯನಿರ್ವಹಿಸ್ತಿವೆ. ಹಳೇ ಹುಬ್ಬಳ್ಳಿ ಸುತ್ತಮುತ್ತ 48 ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು ಉಳಿದ 27 ಪೈಕಿ 7 ನಾಪತ್ತೆ, 20 ಸಿಸಿಟಿವಿ ಕ್ಯಾಮರಾ ನಿಷ್ಕ್ರಿಯವಾಗಿವೆ. ಸಿಸಿಟಿವಿ ಕ್ಯಾಮರಾ ನಿರ್ವಹಣೆ ಹೊಣೆಹೊತ್ತಿದ್ದ ವರ್ಟಿಕ್ಸ್ ಏಜೆನ್ಸಿಯ ಹೊಣೆಗೇಡಿತನದಿಂದ ಪೊಲೀಸರು ಪೇಚಿಗೆ ಸಿಲುಕಿದ್ದಾರೆ.

ಸ್ಟೇಟಸ್ ಹಾಕಿದ್ದ ಯುವಕನ ಪೋಷಕರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್
ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ ಹಾಕಿ ಹುಬ್ಬಳ್ಳಿಯಲ್ಲಿ ಗಲಾಟೆಗೆ ಕಾರಣನಾದ ಯುವಕನ ಪೋಷಕರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಹುಬ್ಬಳ್ಳಿಯ ಬ್ಯಾಹಟ್ಟಿಯಲ್ಲಿ ಯುವಕ ಅಭಿಷೇಕ್ ಫ್ಲ್ಯಾಟ್ ಇತ್ತು. ಸದ್ಯ ಹುಬ್ಬಳ್ಳಿ ಪೊಲೀಸರು ಅಭಿಷೇಕ್ ಪೋಷಕರನ್ನು ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಿದ್ದಾರೆ. ಆರೋಪಿ ಅಭಿಷೇಕ್ ಹಿರೇಮಠ್ ಮನೆಗೆ ಪೊಲೀಸ್ ಭದ್ರತೆ ನೀಡಿದ್ದಾರೆ.

ರಾತ್ರೋ ರಾತ್ರಿ ಹೊತ್ತಿ ಉರಿದ ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ಒಂದು ಪೋಸ್ಟ್ಗೆ ಗಲಭೆಯಾಗಿದೆ. ನಿನ್ನೆ(ಏಪ್ರಿಲ್ 17) ಸಂಜೆ 7 ಗಂಟೆ ಸುಮಾರಿಗೆ ಯುವಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಪೋಸ್ಟ್ ಒಂದನ್ನ ಹಾಕ್ಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ಸ್ಟೇಟಸ್ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಮುಸ್ಲಿಂ ಸಮುದಾಯದ ಗ್ರೂಪ್ಗಳಲ್ಲಿ ಪೋಸ್ಟ್ ಶೇರ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಕೆರಳಿದ ಉದ್ರಿಕ್ತರು ಮನಬಂದಂಗೆ ಕಲ್ಲೆಸೆದು ಹುಬ್ಬಳ್ಳಿಯಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದ್ರು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಹಳೇ ಹುಬ್ಬಳ್ಳಿ ಠಾಣೆ ಬಳಿ ಜಮಾಯಿಸಿ ಕಲ್ಲು ತೂರಾಟ ಆರಂಭಿಸಿದ್ರು. ಬಸ್ಗಳ ಮೇಲೂ ಕಲ್ಲು ತೂರಾಡಿದ್ರು. ಬಸ್ಗಳ ಗಾಜು ಪುಡಿ ಪುಡಿಯಾದ್ವು. ಅಷ್ಟೇ ಅಲ್ಲ, ಪೊಲೀಸರ ವಾಹನದ ಮೇಲೂ ಕಲ್ಲೆಸೆದ್ರು. ಉದ್ರಿಕ್ತರ ಪುಂಡಾಟಕ್ಕೆ ಪೊಲೀಸ್ ಜೀಪ್ಗಳು ಜಖಂ ಆಗಿವೆ.

ದುಷ್ಕರ್ಮಿಗಳ ಗುಂಪು ಆಸ್ಪತ್ರೆಯನ್ನ ಕೂಡ ಬಿಟ್ಟಿಲ್ಲ. ಹಳೇ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆ ಮೇಲೂ ಕಲ್ಲು ತೂರಿದ್ರು. ಏಕಾಏಕಿ ಆಸ್ಪತ್ರೆ ಬಳಿ ಜಮಾಯಿಸಿ ದಾಳಿ ನಡೆಸಿದ ಕಿಡಿಗೇಡಿಗಳು ಆಸ್ಪತ್ರೆ ಮುಂಭಾಗದ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ರು. ಹುಬ್ಬಳ್ಳಿ ನಗರದ ಆಂಜನೇಯ ದೇಗುಲದ ಮೇಲೂ ಕಲ್ಲು ತೂರಿದ್ದು ಈ ಪರಿಣಾಮ ದೇವಸ್ಥಾನದ ಕಿಟಕಿ ಗಾಜು ಪುಡಿ ಪುಡಿಯಾಗಿದೆ.

ಖಾಕಿ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ
ಇನ್ನು ಉದ್ರಿಕ್ತರ ಅಟ್ಟಹಾಸ ತಾರಕಕ್ಕೇರುತ್ತಲೇ ಪೊಲೀಸರು ಕಾರ್ಯಾಚರಣೆಗೆ ಇಳಿದ್ರು. ಕೈ ಮೀರಿ ಹೋಗಿದ್ದ ಪರಿಸ್ಥಿತಿ ಕಂಟ್ರೋಲ್ಗೆ ತರೋಕೆ, ಗುಂಪನ್ನ ಚದುರಿಸೋಕೆ ಅಶ್ರುವಾಯು ಪ್ರಯೋಗಿಸಿದ್ರು. ಲಾಠಿ ಚಾರ್ಜ್ ಮಾಡಿದ್ರು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಪೊಲೀಸ್ ವಶಕ್ಕೆ 40 ಮಂದಿ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಮೈಸೂರಿನಲ್ಲಿ ಮತ್ತೊಮ್ಮೆ ಮೊಳಗಿದ ಸಿದ್ದರಾಮಯ್ಯ ಮುಂದಿನ ಸಿಎಂ ಘೋಷಣೆ; ಮುಫ್ತಿ ತಾಜುದ್ದೀನ್ ಮೌಲಾನಾರಿಂದ ವಿಶೇಷ ಹಾರೈಕೆ

Published On - 7:20 am, Mon, 18 April 22

Loading...
Unable to load recommendations.
Follow Us