ಕಾಶಿ-ಅಯೋಧ್ಯೆ ಯಾತ್ರೆ ರದ್ದುಗೊಳಿಸಿದ ಸ್ಟಾರ್‌ ಏರ್‌ಲೈನ್ಸ್‌: ಪ್ರಯಾಣಿಕರಿಗೆ ದಂಡ ಸಮೇತ ಪರಿಹಾರಿ ನೀಡುವಂತೆ ಧಾರವಾಡ ಗ್ರಾಹಕರ ಆಯೋಗ ಆದೇಶ

ಸೇವಾ ನ್ಯೂನ್ಯತೆ ಎಂದು ಸ್ಟಾರ್‌ ಏರ್‌ಲೈನ್ಸ್‌ಗೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು 27 ಜನರು ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023ರ ಫೆಬ್ರುವರಿ 1ರಂದು ದೂರನ್ನು ಸಲ್ಲಿಸಿದ್ದರು. ಏಕಾಏಕಿ ವಿಮಾನ ರದ್ದುಪಡಿಸಿ ಪ್ರವಾಸಿಗರಿಗೆ ಬೇರೆ ವ್ಯವಸ್ಥೆ ಮಾಡದಿರುವುದು ಸ್ಟಾರ್‌ ಏರ್‌ಲೈನ್ಸ್‌ನವರ ತಪ್ಪು. ಹಾಗಾಗಿ ಧಾರವಾಡ ಗ್ರಾಹಕರ ಆಯೋಗವು ದಂಡ ಸಮೇತ ಪರಿಹಾರ ನೀಡುವಂತೆ ಆದೇಶಿಸಿದೆ.

ಕಾಶಿ-ಅಯೋಧ್ಯೆ ಯಾತ್ರೆ ರದ್ದುಗೊಳಿಸಿದ ಸ್ಟಾರ್‌ ಏರ್‌ಲೈನ್ಸ್‌: ಪ್ರಯಾಣಿಕರಿಗೆ ದಂಡ ಸಮೇತ ಪರಿಹಾರಿ ನೀಡುವಂತೆ ಧಾರವಾಡ ಗ್ರಾಹಕರ ಆಯೋಗ ಆದೇಶ
ಪ್ರಾತಿನಿಧಿಕ ಚಿತ್ರ
Edited By:

Updated on: Aug 28, 2023 | 11:11 PM

ಧಾರವಾಡ, ಆಗಸ್ಟ್​ 28: ಮಹಿಳಾ ನ್ಯಾಯವಾದಿಯಾಗಿರುವ ಮಹೇಶ್ವರಿ ಉಪ್ಪಿನ್ ಮತ್ತು ಅವರೊಂದಿಗೆ 26 ಸಂಗಡಿಗರು ಹುಬ್ಬಳ್ಳಿ (Hubballi) ಯ ಸುರಕ್ಷಾ ಟೂರ್ಸ್‌ ಮೂಲಕ 2022ರ ಅಕ್ಟೋಬರ್ 9 ರಿಂದ 19ರ ರವರೆಗೆ ದೆಹಲಿ, ಹರಿದ್ವಾರ, ಅಯೋಧ್ಯೆ, ಕಾಶಿ, ಪ್ರಯಾಗರಾಜ, ಮಥುರಾ ಸೇರಿ ಉತ್ತರ ಭಾರತದ ಪ್ರವಾಸ ನಿಗದಿ ಮಾಡಿಕೊಂಡಿದ್ದರು. ದೆಹಲಿಯಿಂದ ಹೊರಟು ಆ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿಕೊಂಡು ವಾಪಸ್ಸು ದೆಹಲಿಗೆ ಕರೆತರುವ ಜವಾಬ್ದಾರಿ ಹುಬ್ಬಳ್ಳಿಯ ಸುರಕ್ಷಾ ಟೂರ್ಸ್ ಮತ್ತು ಟ್ರಾವೆಲ್ಸ್‌ನವರದ್ದಾಗಿತ್ತು.

ಪ್ರವಾಸಿಗರು ಸುರಕ್ಷಾ ಟೂರ್ಸ್ ಮಾಲೀಕ ಸುನೀಲ ತೊಗರಿಯವರಿಗೆ ತಲಾ ರೂ. 21 ಸಾವಿರದಂತೆ ಹಣ ಸಂದಾಯ ಮಾಡಿದ್ದರು. ಹುಬ್ಬಳ್ಳಿಯಿಂದ ದೆಹಲಿಗೆ ತಲುಪಲು ಎಲ್ಲ 27 ಜನ ಪ್ರವಾಸಿಗರು ಸ್ಟಾರ್‌ ಏರ್‌ಲೈನ್ಸ್‌ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಪ್ರಯಾಣಕ್ಕೆ ಸಿದ್ಧತೆ ಸಹ ಮಾಡಿಕೊಂಡಿದ್ದರು. ಆದರೆ, ಏಕಾಏಕಿ ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದ ಸ್ಟಾರ್‌ ಏರ್‌ಲೈನ್ಸ್‌ ರದ್ದಾಗಿರುವುದಾಗಿ ಸಂಗಡಿಗರಿಗೆ ಮಾಹಿತಿ ಬಂತು.

ಇದನ್ನೂ ಓದಿ: ಮಕ್ಕಳ ನಡಿಗೆ ಹಸಿರಿನ ಕಡೆಗೆ: ಶಾಲೆಗಳ ಆವರಣದಲ್ಲಿ 50 ಲಕ್ಷ ಸಸಿ ನೆಡುವ ಯೋಜನೆ

ಸ್ಟಾರ್‌ ಏರ್‌ಲೈನ್ಸ್‌ರವರು ದೆಹಲಿಗೆ ಹೋಗಲು ಬೇರೆ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಸುರಕ್ಷಾ ಟೂರ್ಸ್‌ನ ಮಾಲೀಕ ಸುನೀಲ ತೊಗರಿ ತನ್ನ ಖರ್ಚು ಹಾಕಿ ಬೇರೆ ಬೇರೆ ಮಾರ್ಗಗಳ ಮೂಲಕ 2022ರ ಅಕ್ಟೋಬರ್ 9ರ ರಾತ್ರಿ ಎಲ್ಲ ಪ್ರವಾಸಿಗರಿಗೆ ದೆಹಲಿ ತಲುಪುವ ವ್ಯವಸ್ಥೆ ಮಾಡಿದರು. ನಂತರ ಪ್ರವಾಸವೂ ಸುಗಮವಾಯಿತು.

ತಮ್ಮ ಪ್ರಯಾಣಕ್ಕೆ ಜೂನ್ ತಿಂಗಳಲ್ಲೇ ಟಿಕೇಟ್ ನಿಗದಿಯಾಗಿದ್ದರೂ ಪ್ರಯಾಣದ ಹಿಂದಿನ ದಿನ ಸ್ಟಾರ್ ಏರ್‌ಲೈನ್ಸ್‌ ಒಮ್ಮೆಲೇ ಪ್ರಯಾಣ ರದ್ದುಪಡಿಸಿದ್ದರಿಂದ ಅನಾನುಕೂಲವಾಗಿದ್ದು, ಸೇವಾ ನ್ಯೂನ್ಯತೆ ಎಂದು ಸ್ಟಾರ್‌ ಏರ್‌ಲೈನ್ಸ್‌ಗೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು 27 ಜನರು ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023ರ ಫೆಬ್ರುವರಿ 1ರಂದು ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಧಾರವಾಡದಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ಚಾಂಪಿಯನ್ ಶಿಪ್; ಇಲ್ಲಿವೆ ರೋಮಾಂಚನಕಾರಿ ರೇಸ್​ನ ಫೋಟೋಗಳು

ದೂರಿನ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಹುಬ್ಬಳ್ಳಿಯಿಂದ ದೆಹಲಿಗೆ ಕರೆದೊಯ್ಯುವ ಹೊಣೆಗಾರಿಕೆ ತನ್ನದಲ್ಲದಿದ್ದರೂ ಸುರಕ್ಷಾ ಟೂರ್ಸ್‌ನ ಮಾಲೀಕ ಸುನೀಲ ತೊಗರಿ ತನ್ನ ಗ್ರಾಹಕರಿಗೆ ತೊಂದರೆ ಆಗಬಾರದು ಎಂದು ಪರ್ಯಾಯ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯ.

ಆದರೆ ಏಕಾಏಕಿ ವಿಮಾನ ರದ್ದುಪಡಿಸಿ ಪ್ರವಾಸಿಗರಿಗೆ ಬೇರೆ ವ್ಯವಸ್ಥೆ ಮಾಡದಿರುವುದು ಸ್ಟಾರ್‌ ಏರ್‌ಲೈನ್ಸ್‌ನವರ ತಪ್ಪು. ಆದ್ದರಿಂದ ಸ್ಟಾರ್‌ ಏರ್‌ಲೈನ್ಸ್‌‌ನವರು ಎಲ್ಲ 27 ದೂರುದಾರರಿಗೆ ತಲಾ ರೂ. 25 ಸಾವಿರ ಪರಿಹಾರ ಮತ್ತು ರೂ. 5 ಸಾವಿರ ಪ್ರಕರಣದ ಖರ್ಚು ವೆಚ್ಚವೆಂದು ಒಟ್ಟು ರೂ. 8.10 ಲಕ್ಷಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:39 pm, Mon, 28 August 23

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us