
ಹುಬ್ಬಳ್ಳಿ, ಅಕ್ಟೋಬರ್ 28: ಕಲಿತ ಶಾಲೆ, ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಗೌರವಿಸುವ ಪ್ರವೃತ್ತಿಯೇ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಮರೆಯುವವರೇ ಹೆಚ್ಚಾಗಿದ್ದಾರೆ. ಆದರೆ, ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ (Sudha Murty) ಇದಕ್ಕೆ ಅಪವಾದವಾಗಿದ್ದಾರೆ. ತಾವು ಕಲಿತ ಶಾಲೆ ದುಸ್ಥಿತಿಗೆ ತಲುಪಿದ್ದನ್ನು ನೋಡಿ ಅದರ ಪುನರುತ್ಥಾನಕ್ಕೆ ಕ್ರಮ ಕೈಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಶಾಲೆಯ ನವೀಕರಣವನ್ನೂ ಮಾಡಿಸಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆಯನ್ನೂ ಮಾಡಿ, ತಾವು ಕಲಿತ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನಕೂಲ ಕಲ್ಪಿಸಿದ್ದಾರೆ.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಇನ್ಫೋಸಿಸ್ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ಸಾಮಾಜಿಕ ಕಳಕಳಿಯ ಮೂಲಕ ಜನ ಮಾನಸದಲ್ಲಿ ಉಳಿದವರು. ಸುಧಾ ಮೂರ್ತಿ ಅವರು ಇದೀಗ ಮತ್ತೊಂದು ವಿಚಾರದಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾವು ಕಲಿತ ಶಾಲೆಯ ನವೀಕರಣ ಮಾಡಿಸಿರುವ ಸುಧಾ ಮೂರ್ತಿ, ಸಾವಿರಾರು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ನ್ಯೂ ಎಜ್ಯುಕೇಶನ್ ಸೊಸೈಟಿಯ ಜ್ಞಾನ ಭಾರತಿ ಶಾಲೆಯನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ. 115 ವರ್ಷ ಇತಿಹಾಸ ಹೊಂದಿರುವ ಜ್ಞಾನ ಭಾರತಿ ಶಾಲೆಯಲ್ಲಿ ಸುಧಾ ಮೂರ್ತಿ 5 ನೇ ತರಗತಿಯಿಂದ 11 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಜೊತೆಗೆ ಅವರ ಸಹೋದರಿ ಸುನಂದಾ ಕುಲಕರ್ಣಿ ಕೂಡಾ ಇದೇ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಸುಧಾ ಮೂರ್ತಿ ತಾಯಿ ಕೂಡಾ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರಂತೆ!
ಒಂದು ಸಮಯದಲ್ಲಿ ಇಡೀ ಹುಬ್ಬಳ್ಳಿಯಲ್ಲಿ ಸುಪ್ರಸಿದ್ದವಾಗಿದ್ದ ಜ್ಞಾನ ಭಾರತಿ ಕನ್ನಡ ಮಾಧ್ಯಮ ಶಾಲೆ ನಂತರದ ದಿನದಲ್ಲಿ ತನ್ನ ವೈಭವವನ್ನು ಕಳೆದುಕೊಂಡಿತ್ತು. ನಗರದಲ್ಲಿ ಹುಟ್ಟಿಕೊಂಡ ಅನೇಕ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಹಿಂದೆ ಬಿದ್ದಿತ್ತು. ಜೊತೆಗೆ ಶಾಲೆಯ ಕಟ್ಟಡ ಬೀಳುವ ಹಂತ ತಲುಪಿತ್ತು. ಕೆಲ ವರ್ಷಗಳ ಹಿಂದೆ ಸುಧಾ ಮೂರ್ತಿಯವರು, ತಾವು ಕಲಿತ ಶಾಲೆ ಹೇಗಿದೆ ಎಂದು ನೋಡಲು ಆಗಮಿಸಿದ್ದರು. ಬೀಳುವ ಹಂತಕ್ಕೆ ಬಂದ ಕಟ್ಟಡವನ್ನು ಗಮನಿಸಿದ್ದಾರೆ. ಮೂಲಸೌರ್ಕಯಗಳೂ ಇಲ್ಲದಿರುವುದನ್ನು ಗಮನಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಗಣನೀಯವಾಗಿ ಕಡಿಮೆಯಾಗಿರುವುದು ಗೊತ್ತಾಗಿತ್ತು. ಇದನ್ನು ನೋಡಿದ ಸುಧಾ ಮೂರ್ತಿ ಅವರು ಶಾಲೆಯ ಜವಬ್ದಾರಿಯನ್ನು ತಾವೇ ವಹಿಸಿಕೊಂಡು ನವೀಕರಣ ಮಾಡಿಸಿದ್ದಾರೆ.
ಆರಂಭದಲ್ಲಿ ಕನ್ನಡ ಮಾಧ್ಯಮಲ್ಲಿದ್ದ ಶಾಲೆ ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತನೆ ಹೊಂದಿತ್ತು. ಇದೀಗ ಸ್ಟೇಟ್ ಬೋರ್ಡ್ನಿಂದ ಸಿಬಿಎಸ್ಇ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಸೋಮವಾರ (ಅಕ್ಟೋಬರ್ 28) ಆಗಮಿಸಿದ್ದ ಸುಧಾ ಮೂರ್ತಿ, ನವೀಕರಣ ಕಟ್ಟಡ ಉದ್ಘಾಟನೆ, ಸಿಬಿಎಸ್ಇ ಮಾನ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ.
‘ನಾನು ಇಲ್ಲಿ ಏಳು ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ. ಶಾಲೆ ಶಿಥಿಲಗೊಂಡಿರುವುದು ಕಂಡು ಬೇಜಾರಾಯಿತು. ನಾನು ಓದಿದ ಶಾಲೆ ಉಳಿಸಿಕೊಳ್ಳಬೇಕೆಂದು ನವೀಕರಣ ಮಾಡಿಸಿದ್ದೇನೆ. ನಾನು ದುಡ್ಡಿನ ಮುಖ ನೋಡಲಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇನೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಈ ಶಾಲೆಯಲ್ಲಿ ಒಂದು ಕಾಲಕ್ಕೆ 1400 ಮಕ್ಕಳ ಸಂಖ್ಯೆ ಇತ್ತು. ಆದರೆ, ಈಗ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ಸಿಬಿಎಸ್ಇ ಮಾನ್ಯತೆ ಒದಗಿಸಿಕೊಟ್ಟು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನವೀಕೃತ ಶಾಲೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೆಮಿಸ್ಟ್ರಿ ಲ್ಯಾಬ್, ಅತ್ಯಾಧುನಿಕ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಕನ್ನಡ ಮಾಧ್ಯಮದ ಕಾರಣದಿಂದಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಿಬಿಎಸ್ ಮಾನ್ಯತೆ ಪಡೆದು ಕೇಂದ್ರ ಪಠ್ಯ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ. ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ನೇತೃತ್ವದಲ್ಲಿ ಮಾರ್ಗದರ್ಶಕ ಮಂಡಳಿಯನ್ನೂ ರಚಿಸಲಾಗಿದೆ. ಶಿಕ್ಷಕರಿಗೆ ತಿಂಗಳಿಗೆ ಎರಡು ದಿನಗಳ ಕಾಲ ತರಬೇತಿ ಹಮ್ಮಕೊಳ್ಳುವ ಮೂಲಕ ಕಲಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳು ಪದ್ಧತಿ ಜಾರಿಗೆ ತರಲಾಗಿದೆ.
ಇದನ್ನೂ ಓದಿ: ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕುಸಿತ ಕಂಡಿದೆ: ಸುಧಾಮೂರ್ತಿ ವಿಷಾದ
ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಶಾಲೆ ಮೇಲ್ದರ್ಜೆಗೆ ಏರಿಸಲಾಗಿದೆ ಎಂದಿರುವ ಗುರುರಾಜ ಕರ್ಜಗಿ, ನವೀಕೃತ ಕಟ್ಟಡದಲ್ಲಿ ಲ್ಯಾಬ್ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ನಮ್ಮ ಮಕ್ಕಳಿಗೆ ಜಗತ್ತಿನ ಜ್ಞಾನ ಕೊಡಬೇಕು. ಅದಕ್ಕೆ ಪೂರಕವಾಗಿ ಶಿಕ್ಷಕರನ್ನು ತಯಾರಿ ಮಾಡುತ್ತಿದ್ದೇವೆ. ಮಕ್ಕಳು ಶಿಕ್ಷಕರನ್ನು ಇಷ್ಟಪಟ್ಟರೆ ಶಿಕ್ಷಣವನ್ನು ಇಷ್ಟಪಡುತ್ತಾರೆ. ಅನ್ನ ಮತ್ತು ಜ್ಞಾನ ಎಂದು ಸಹ ಮಾರಾಟ ಆಗಬಾರದು ಎಂದು ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ