ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಜ. 27, 28ರಂದು ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಜನವರಿ 27 ಮತ್ತು 28ರಂದು ನಗರದ ಕುಸುಗಲ್ ರಸ್ತೆಯಲ್ಲಿ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 15 ದೇಶದ 23 ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ದೇಸಿ ಕ್ರೀಡೆಗಳಿಗೆ ಆದ್ಯತೆ ನೀಡಲು ಆಯೋಜನೆ ಮಾಡಲಾಗಿದೆ ಎಂದಿದ್ದಾರೆ.

ಹುಬ್ಬಳ್ಳಿ, ಜನವರಿ 23: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಜನವರಿ 27 ಮತ್ತು 28ರಂದು ನಗರದ ಕುಸುಗಲ್ ರಸ್ತೆಯಲ್ಲಿ ಗಾಳಿಪಟ ಉತ್ಸವ (Kite festival) ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಳಿಪಟ ಉತ್ಸವದಲ್ಲಿ 15 ದೇಶದ 23 ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಜೊತೆಗೆ ಕುಸ್ತಿ, ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇಸಿ ಕ್ರೀಡೆಗಳಿಗೆ ಆದ್ಯತೆ ನೀಡಲು ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನವರು ಇಟಲಿ ತಳಿಗಳು: ಅರವಿಂದ ಬೆಲ್ಲದ್
ಕಾಂಗ್ರೆಸ್ನವರು ಇಟಲಿ ತಳಿಗಳು. ಕಾಂಗ್ರೆಸ್ಸಿಗರು ಪೋಪ್, ಚರ್ಚ್ ಬಗ್ಗೆ ಮಾತಾಡಿದರೆ ಖುಷಿಯಾಗುತ್ತಿದ್ದರು. ರಾಮ, ವಿಶ್ವನಾಥ ಬಗ್ಗೆ ಮಾತಾಡಿದರೆ ಇಟಲಿ ತಳಿಗಳಿಗೆ ಎಲ್ಲಿ ತಿಳಿಯುತ್ತೆ. ಕಾಂಗ್ರೆಸ್ಸಿಗರು ಕುಡಿದು ಹೇಗೆ ಜೀವಂತ ಇರ್ತಾರೆ ಅನ್ನೋದೆ ಪವಾಡ. ಕಾಂಗ್ರೆಸ್ನವರ ಪವಾಡವೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ.
ಕಾಂಗ್ರೆಸ್ನವರು ಏನು ಕುಡೀತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇಟಲಿ ತಳಿಗಳಿಂದ ನಾವೇನೂ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ. ರಾಹುಲ್ ಗಾಂಧಿ ಮುತ್ತಜ್ಜ ನಮ್ಮ ದೇಶದ ಮೊದಲ ಪ್ರಧಾನಮಂತ್ರಿ. ನಮ್ಮ ದೇಶದ ಗೌರವ, ಅಭಿಮಾನ, ಧರ್ಮ ಬಗ್ಗೆ ಯಾವ ಕಲ್ಪನೆ ಇಲ್ಲ. ದೇಶದಲ್ಲಿ ರಾಮ ಒಬ್ಬನೇ, ಗಾಂಧಿಗೂ ಅದೇ ರಾಮ, ನಮಗೂ ಅದೇ ರಾಮ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ವ್ರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೀರಪ್ಪ ಮೊಯ್ಲಿಗೆ ತಿವಿದ ಲೆಹರ್ ಸಿಂಗ್
ವೀರಪ್ಪ ಮೊಯ್ಲಿ ಅವರು ಪ್ರಭುದ್ಧ ರಾಜಕಾರಣಿ. ಅವರು ಈ ರೀತಿ ಟೀಕೆ ಮಾಡುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಜಗದೀಶ್ ಶೆಟ್ಟರ್ ಬಿಜೆಪಿಗೆ ಬರೋದು ಗೊತ್ತಿಲ್ಲ. ತಳಬುಡ ಇಲ್ಲದ ಚರ್ಚೆ, ಊಹಾಪೋಹದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.
ಕಾಂಗ್ರೆಸ್ನವರು ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು: ಶಾಸಕ ಮಹೇಶ್ ಟೆಂಗಿನಕಾಯಿ
ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ನವರು ಎಲ್ಲಾ ವಿಷಯದಲ್ಲೂ ರಾಜಕಾರಣ ಬೆರೆಸಬಾರದು. ಕಾಂಗ್ರೆಸ್ನವರು ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು. ನಿನ್ನೆ ಜಗತ್ತಿನಲ್ಲಿ ಎಲ್ಲರೂ ಒಟ್ಟಾಗಿ ದೀಪೋತ್ಸವ ಆಚರಣೆ ಮಾಡಿದ್ದಾರೆ. ಖುಷಿ ಸಮಯದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಜೆಪಿ ಗೂಂಡಾಗಳು ಒಂದು ಕೈಯಲ್ಲಿ ಮಂತ್ರಾಕ್ಷತೆ ಹಿಡಿದರೆ ಮತ್ತೊಂದು ಕೈಯಲ್ಲಿ ದೊಣ್ಣೆ: ಡಿಕೆಶಿ ವಾಗ್ದಾಳಿ
ನವರಾತ್ರಿಯಲ್ಲಿ ಬರೀ ನೀರು ಕುಡಿದು ಉಪವಾಸ ಮಾಡುತ್ತೇನೆ. ಊಟ, ಉಪಹಾರ ಇಲ್ಲದೆ ಉಪವಾಸ ಇರಬಹುದು. ಕಾಂಗ್ರೆಸ್ನವರು ಉಪವಾಸ ಮಾಡುವುದಿಲ್ಲ, ಅವರಿಗೆ ರೂಢಿ ಇಲ್ಲ. ಪ್ರಧಾನಿ ಉಪವಾಸ ಬಗ್ಗೆ ಟೀಕೆ ಮಾಡುವ ಕೆಲಸ ಮಾಡಬಾರದು.
ರಾಮಮಂದಿರದ ವಿಚಾರದಲ್ಲಿ ಬಿಜೆಪಿ, ಪ್ರಧಾನಿ ಪ್ರಚಾರ ಪಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಜನರಿಗೆ ವಿಶ್ವಾಸವಿದೆ. ಮೋದಿ ದೇಶದ ದೇವಸ್ಥಾನಗಳಿಗೆ ಹೋದರೆ ಕಾಂಗ್ರೆಸ್ಗೆ ಏನು ಸಮಸ್ಯೆ? ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಹದ್ದು ಮೀರಿ ಹೋಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.