ಯೋಗೀಶ್ ಗೌಡ ಕೊಲೆ ಕೇಸ್: ಯಾರಿಗೆ ಜೀವಾವಧಿ? ಯಾರಿಗೆ ರಿಯಾಯಿತಿ? ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಫೈನಲ್

ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ 17 ಜನರನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ಘೋಷಿಸಿದೆ. ಏಪ್ರಿಲ್ 17ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಇಂದು ವಿನಯ್ ಕುಲಕರ್ಣಿ ಸೇರಿ ಎಲ್ಲ ಅಪರಾಧಿಗಳು ನ್ಯಾಯಾಧೀಶರ ಮುಂದೆ ಶಿಕ್ಷೆ ಕಡಿಮೆ ಮಾಡುವಂತೆ ಕಣ್ಣೀರಿಟ್ಟಿದ್ದಾರೆ. ಕೌಟುಂಬಿಕ ಪರಿಸ್ಥಿತಿ, ಅನಾರೋಗ್ಯದ ಕಾರಣ ನೀಡಿ ವಿನಂತಿಸಿದ್ದು, ರಾಜ್ಯ ರಾಜಕಾರಣದಲ್ಲಿ ತೀರ್ಪು ತೀವ್ರ ಕುತೂಹಲ ಮೂಡಿಸಿದೆ.

ಯೋಗೀಶ್ ಗೌಡ ಕೊಲೆ ಕೇಸ್: ಯಾರಿಗೆ ಜೀವಾವಧಿ? ಯಾರಿಗೆ ರಿಯಾಯಿತಿ? ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಫೈನಲ್
ವಿನಯ್ ಕುಲಕರ್ಣಿ ಶಿಕ್ಷೆ
Edited By:

Updated on: Apr 16, 2026 | 2:22 PM

ಬೆಂಗಳೂರು, ಏ.16: ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. 17 ಜನರನ್ನು ಅಪರಾಧಿ ಎಂದು ಕೋರ್ಟ್​​​ ಘೋಷಣೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಏ.16) 17 ಶಿಕ್ಷೆ ಪ್ರಮಾಣ ನಿರ್ಧಾರವಾಗಬೇಕಿತ್ತು, ಆದರೆ ಇದೀಗ ಶಿಕ್ಷೆ ಪ್ರಮಾಣವನ್ನು ನಾಳೆ (ಏ.17) ತಿಳಿಸಲಾಗುವುದು ಎಂದು ಕೋರ್ಟ್​​ ಹೇಳಿದೆ. ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಅಂತಿಮ ಘಟ್ಟ ತಲುಪಿದೆ.

ಇಂದು ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ-ಪ್ರತಿವಾದ ನಡೆಯಿತು. ಈ ವೇಳೆ ಪ್ರತಿಯೊಬ್ಬ ಅಪರಾಧಿಯೂ ತಮಗೆ ಕಡಿಮೆ ಶಿಕ್ಷೆ ನೀಡುವಂತೆ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. “ನಾನು ಕಳೆದ 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ಕೊಟ್ಟಿಲ್ಲ. ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾದ ನಾನು ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ರಾಜಕೀಯ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಲಾಗಿದೆ” ಎಂದು ವಿನಯ್ ಕುಲಕರ್ಣಿ ಕೋರ್ಟ್‌ ಮುಂದೆ ಹೇಳಿದ್ದಾರೆ.

ಅಪರಾಧಿಗಳ ಅಳಲು: ಯಾರ‍್ಯಾರು ಶಿಕ್ಷೆ ಕಡಿಮೆ ಮಾಡಲು ಏನೆಂದು ವಾದಿಸಿದರು?

ಶಾಸಕ ವಿನಯ್ ಕುಲಕರ್ಣಿ (ಎ-15):

  • ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ನೀಡಿಲ್ಲ.
  • ಮದುವೆ ವಯಸ್ಸಿಗೆ ಬಂದಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ; ರಾಜಕೀಯ ದ್ವೇಷಕ್ಕಾಗಿ ಕೇಸ್ ಹಾಕಲಾಗಿದೆ.
  • ನಾನೊಬ್ಬ ಕೃಷಿಕ, ಸುಮಾರು ಮೂರೂವರೆ ಸಾವಿರ ಹಸುಗಳನ್ನು ಸಾಕುತ್ತಿದ್ದೇನೆ, ನನ್ನ ಮೇಲೆ ಅವಲಂಬಿತರಾದವರಿದ್ದಾರೆ.
  1. ಎ-4, ಎ-14: ಆಟೋ ಮತ್ತು ಕಾರ್ ಚಾಲಕರು; ವಯಸ್ಸಾದ ತಂದೆ-ತಾಯಿಯನ್ನು ಸಾಕುವ ಜವಾಬ್ದಾರಿ ನಮ್ಮ ಮೇಲಿದೆ.
  2. ಎ-5: ರಿಯಲ್ ಎಸ್ಟೇಟ್ ಉದ್ಯೋಗಿ; ಅನಾರೋಗ್ಯದಿಂದ ಬಳಲುತ್ತಿರುವ ತಂದೆ-ತಾಯಿಯನ್ನು ನೋಡಿಕೊಳ್ಳಬೇಕು.
  3. ಎ-9, ಎ-10, ಎ-11: ಪೋಷಕರಿಲ್ಲದ ಅನಾಥರು ಅಥವಾ ವಯಸ್ಸಾದ ತಾಯಿ ಮಾತ್ರ ಇರುವವರು; ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷೆ ಕಡಿಮೆ ಮಾಡಿ.
  4. ಎ-6, ಎ-12, ಎ-18: ಕೃಷಿಕರು, ಟೈಲರ್ ಮತ್ತು ಗುತ್ತಿಗೆದಾರರು; ಇವರಿಗೆ 4 ರಿಂದ 7 ವರ್ಷದ ಪುಟ್ಟ ಮಕ್ಕಳಿದ್ದಾರೆ ಹಾಗೂ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯಿದೆ.
  5. ಎ-13: ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ; ತೀವ್ರ ಅನಾರೋಗ್ಯವಿದೆ.
  6. ಎ-16: ದಂಪತಿಗಳಿಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ; ಇತ್ತೀಚೆಗಷ್ಟೇ ಮೊಮ್ಮಗನ ಸಾವಿನ ನೋವಿನಲ್ಲಿದ್ದಾರೆ.
  7. ಎ-7: ಆಟೋ ಚಾಲಕ; ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
  8. ಎ-19 (ಟಿಂಗರಿಕರ್): ಈವರೆಗೆ ಯಾವುದೇ ಕೆಟ್ಟ ದಾಖಲೆಗಳಿಲ್ಲ (Black Mark); ಈ ಹಿಂದೆ ನಗದು ಪ್ರಶಸ್ತಿ ಕೂಡ ಲಭಿಸಿದೆ.
  9. ಎ-8: ತಂದೆ-ತಾಯಿ ಯಾರೂ ಇಲ್ಲ, ನಾನೊಬ್ಬನೇ ದುಡಿಯುವವನು.
  10. ಎ-17: ಈತ ಮಾಫಿ ಸಾಕ್ಷಿಯಾಗಿದ್ದು, ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ.

ಇದನ್ನೂ ಓದಿ: ಕೊಲೆ ಅಪರಾಧಿಯ ಶಾಸಕ ಸ್ಥಾನಕ್ಕೂ ಕುತ್ತು: ವಿನಯ್ ಕುಲಕರ್ಣಿ ಮುಂದಿರುವ ಕಾನೂನು ಆಯ್ಕೆಗಳೇನು?

ಮುಂದಿರುವ ಸಾಧ್ಯತೆಗಳೇನು?

ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಅಥವಾ ಕ್ಷಮೆಯಿಲ್ಲದ ಜೀವಿತಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಗಳ ಬಗ್ಗೆ ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ. ನಾಳೆ ಮಧ್ಯಾಹ್ನದ ವೇಳೆಗೆ ನ್ಯಾಯಾಧೀಶರು ಪ್ರತಿಯೊಬ್ಬರ ಪಾತ್ರಕ್ಕೆ ಅನುಗುಣವಾಗಿ ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us