ಆತ ಒಬ್ಬ ಮಹಾನ್ ವ್ಯಕ್ತಿಯನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡ ಅಭಿಮಾನಿ. ತನ್ನ ಹುಟ್ಟು ಹಬ್ಬಕ್ಕೆ ತನ್ನ ಆ ಅಭಿಮಾನವನ್ನು ವಿನೂತನವಾಗಿ ವ್ಯಕ್ತಪಡಿಸಿದ್ದಾನೆ. ಆತನ ಕಾರ್ಯ ನಿಜಕ್ಕೂ ಹುಬ್ಬಳ್ಳಿಯ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸುವುದು ಖಂಡಿತ. ಹೌದು. ಹುಬ್ಬಳ್ಳಿಯ (Hubballi) ಯುವಕನೊಬ್ಬ ತನ್ನ ರಕ್ತದಲ್ಲಿ ಪತ್ರ ಬರೆದು ಸುದ್ದಿಯಾಗಿದ್ದಾನೆ. ಅಂದಹಾಗೇ ಭಗತಸಿಂಗ್ ಯುವಕ ಮಂಡಳದ ಅಧ್ಯಕ್ಷರಾದ ಶ್ರೀಧರ ಸಾಂಗ್ಲಿಕರ್ ಎಂಬುವವರೇ ತಮ್ಮ ಜನ್ಮದಿನದ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದು. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹೊಸೂರಿನ ಗಾಳಿ ದುರ್ಗಮ್ಮ ದೇವಿಯ ದೇವಸ್ಥಾನದ ಹತ್ತಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್ ಅವರ (Bhagat Singh) ಪುತ್ಥಳಿಯನ್ನು ನಿರ್ಮಾಣ ಮಾಡಬೇಕು ಎಂಬ ಮಹದಾಸೆಯಿದೆ. ಆದ್ರೆ ಅದು ಇಲ್ಲಿಯತನಕ ಸಾಧ್ಯವಾಗಿಲ್ಲ. ಇಲ್ಲಿನ ಸ್ಥಳೀಯ ಮಹಾನಗರ ಪಾಲಿಕೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಭಗತ್ ಸಿಂಗ್ ಪುತ್ಥಳಿ ನಿರ್ಮಾಣ ಮಾಡಿಲ್ಲವಂತೆ. ಹೀಗಾಗೇ ಇದರಿಂದ ನೊಂದಿರೋ ಈತ ತನ್ನ ನೆಚ್ಚಿನ ಸ್ವಾತಂತ್ರ್ಯ ಯೋಧನ ಪುತ್ಥಳಿಯನ್ನ ನಿರ್ಮಾಣ ಮಾಡಿಕೊಡಿ ಅಂತಾ ಪ್ರಧಾನಿ ಮೋದಿಗೆ ತನ್ನ ರಕ್ತದಲ್ಲಿಯೇ ಪತ್ರ ಬರೆದಿದ್ದಾನೆ (Blood Letter)!
ಇಂದಿನ ಯುವಕರು ಬರ್ಥ್ಡೆ ಸೆಲೆಬ್ರೇಷನ್ ಅಂದ್ರೆ ಕೇಕ್ ಕತ್ತರಿಸುವುದು, ದುಂದು ವೆಚ್ಚ ಮಾಡುವ ಮೂಲಕ ಮೋಜು ಮಸ್ತಿ ಮಾಡುವುದನ್ನು ನೋಡಿದ್ದೇವೆ. ಆದರೆ ಈ ಅಭಿಮಾನಿ ಕ್ರಾಂತಿವೀರ ಭಗತಸಿಂಗ್ ಅವರ ಮೇಲಿನ ಅಪಾರ ಅಭಿಮಾನದಿಂದ ಹಾಗೂ ಮುಂಬರುವ ಪೀಳಿಗೆಗೆ ಭಗತಸಿಂಗ್ ಅವರನ್ನು ಪರಿಚಯಿಸುವ ಸದುದ್ದೇಶದಿಂದ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ ಗಾಳಿ ದುರ್ಗಮ್ಮ ದೇವಿಯ ದೇವಸ್ಥಾನದ ಹತ್ತಿರ, ಪೂರ್ವ ನಿಗದಿಯಂತೆ ಬೃಹತ್ ಗಾತ್ರದ ಭಗತಸಿಂಗ್ ಪುತ್ಥಳಿ ನಿರ್ಮಾಣ ಮಾಡುವಂತೆ ನೆತ್ತರಿನಲ್ಲಿ ಪತ್ರ ಬರೆದು ಗಮನ ಸೆಳೆದಿದ್ದಾನೆ. ಸದ್ಯಕ್ಕೆ ಯುವಕನ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ.
ಒಟ್ಟಿನಲ್ಲಿ ಇಂತಹದೊಂದು ಕಾರ್ಯಕ್ಕೆ ಮುಂದಾಗುವ ಮೂಲಕ ಸ್ವಾತಂತ್ರ್ಯ ಯೋಧ ಭಗತಸಿಂಗ್ ಗೆ ಗೌರವ ಸಲ್ಲಿಸಿದ್ದು, ತನ್ನ ಜನ್ಮದಿನವನ್ನು ವಿನೂತನವಾಗಿ ಆಚರಣೆ ಮಾಡಿಕೊಂಡಿರುವುದು ಸಾರ್ವಜನಿಕ ಪ್ರಶಂಸೆ ಪಾತ್ರವಾಗಿದ್ದಾನೆ. – ದತ್ತಾತ್ರೇಯ ಪಾಟೀಲ್, ಟಿವಿ 9, ಹುಬ್ಬಳ್ಳಿ