‘ನಮ್ಮನ್ನು ಬ್ಯಾನ್ ಮಾಡಬೇಡಿ’: ರಾಹುಲ್ ಗಾಂಧಿ, ಸಿದ್ದರಾಮಯ್ಯಗೆ ಪತ್ರ ಬರೆದ ಬೈಕ್ ಟ್ಯಾಕ್ಸಿ ಅಸೋಸಿಯೇಷನ್
ಬೆಂಗಳೂರಿನ ಬೈಕ್ ಟ್ಯಾಕ್ಸಿ ನಿಷೇಧದಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ, ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಬ್ಯಾನ್ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆ ಮೂಲಕ ಜೀವನೋಪಾಯಕ್ಕೆ ಒಂದು ದಾರಿ ಮಾಡಿಕೊಂಡುವಂತೆ ಕೋರಲಾಗಿದೆ.

ಬೆಂಗಳೂರು, ಜೂನ್ 16: ಬೈಕ್ ಟ್ಯಾಕ್ಸಿ (Bike Taxi) ಸೇವೆಯನ್ನು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಆದರೆ ಬೈಕ್ ಟ್ಯಾಕ್ಸಿ ಕಂಪನಿಗಳು ಆರು ವಾರಗಳ ಕಾಲಾವಕಾಶ ಕೇಳಿದ್ದು, ಆ ಗಡುವು ಕೂಡ ಭಾನುವಾರ (ಜೂನ್ 15)ದಂದು ಮುಕ್ತಾಯಗೊಂಡಿದೆ. ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಮಧ್ಯಂತರ ಅನುಮತಿ ನೀಡಲು ಕೂಡ ನಿರಾಕರಿಸಲಾಗಿದೆ. ಈ ಮಧ್ಯೆ ‘ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಷನ್’ ಅಧ್ಯಕ್ಷ ಮೊಹಮ್ಮದ್ ಸಲೀಂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆಯಲಾಗಿದೆ. ಆ ಮೂಲಕ ಬ್ಯಾನ್ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲೇನಿದೆ?
ಬೈಕ್ ಟ್ಯಾಕ್ಸಿ ಸೇವೆ ಬ್ಯಾನ್ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದು, ತಮ್ಮ ಕುಟುಂಬಗಳನ್ನು ಪೋಷಿಸುವಲ್ಲಿ ಕಷ್ಟಪಡುತ್ತಿದ್ದಾರೆ. ಅವರ ಸಾಮೂಹಿಕ ಧ್ವನಿಯಾಗಿ ಈ ಪತ್ರ ಬರೆಯಲಾಗುತ್ತಿದ್ದು, ಬ್ಯಾನ್ ಹಿಂಪಡೆಯುವ ಮೂಲಕ ದಿನ ನಿತ್ಯದ ಸಂಪಾದನೆಗೆ ದಾರಿ ಮಾಡುಕೊಡುವಂತೆ ವಿನಂತಿಸುತ್ತಿದ್ದೇವೆ.
ಇದನ್ನೂ ಓದಿ: ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಶಾಕ್: ಹೈಕೋರ್ಟ್ ಹೇಳಿದ್ದೇನು?
ಮಾಹಿತಿ ಪ್ರಕಾರ, ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿಗಳಿಗೆ ನಿಯಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆಯನ್ನು ಹೊಂದಿಲ್ಲ, ಆದರೆ ಕಾನೂನುಬಾಹಿರವೆಂದು ನಮ್ಮ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.
ವಿದ್ಯಾರ್ಥಿಗಳು, ದಿನಗೂಲಿ ಮಾಡುವವರು, ಪೋಷಕರು ಹೀಗೆ ನಮ್ಮಲ್ಲಿ ಅನೇಕರು ಯಾವುದೇ ಕೆಲಸ ಸಿಗದಿದ್ದಾಗ ಅಥವಾ ತಮ್ಮ ಫ್ರೀ ಸಮಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಿರುತ್ತಾರೆ. ವಿಶೇಷವಾಗಿ ಕೋವಿಡ್ ನಂತರ ಈ ಕೆಲಸಕ್ಕೆ ಹೆಚ್ಚಾಗಿ ಜನರು ಬರಲಾರಂಭಿಸಿದರು. ನಮ್ಮ ಕುಟುಂಬಗಳನ್ನು ಪೋಷಿಸಲು ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ನಾವು ಬಿಸಿಲು, ಮಳೆ ಮತ್ತು ಟ್ರಾಫಿಕ್ನಲ್ಲಿ ಸಂಚಾರ ಮಾಡುತ್ತೇವೆ. ಬಾಡಿಗೆ, ಶಾಲಾ ಶುಲ್ಕ ಮತ್ತು ವೈದ್ಯಕೀಯ ಬಿಲ್ಗಳನ್ನು ನಾವು ಹೀಗೆಯೇ ಪಾವತಿಸುತ್ತೇವೆ. ಬೈಕ್ ಟ್ಯಾಕ್ಸಿಗಳು ಒಂದು ಅಡ್ಡ ಆದಾಯವಲ್ಲ, ಆದರೆ ನಾವು ಬದುಕುವುದು ಅವುಗಳಿಂದಲೇ ಎಂದು ಉಲ್ಲೇಖಿಸಲಾಗಿದೆ.
ಬೈಕ್ ಟ್ಯಾಕ್ಸಿಗಳ ವಿರುದ್ಧದ ವಾದಗಳು ಸಾಮಾನ್ಯವಾಗಿ ಸುರಕ್ಷತೆ, ಹೆಲ್ಮೆಟ್ ಗುಣಮಟ್ಟ ಮತ್ತು ಅಪಘಾತದ ಅಪಾಯಗಳನ್ನು ಉಲ್ಲೇಖಿಸುತ್ತವೆ. ಆದರೆ ಪರವಾನಗಿ, ತರಬೇತಿ ಮತ್ತು ವಿಮೆಗಾಗಿ ಸ್ಪಷ್ಟ ನಿಯಮಗಳನ್ನು ತರುವ ಬದಲು, ಸಾರಿಗೆ ಇಲಾಖೆಯು ಚಾಲಕರ ಮೇಲೆ ಬೀರುವ ಪರಿಣಾಮವನ್ನು ಪರಿಗಣಿಸದೆ ನಮ್ಮ ಆದಾಯದ ಮೂಲಕ್ಕೆ ಕೈಹಾಕಿದೆ. ಈ ಹಿಂದೆ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ರೂಪಿಸಿ ನಮ್ಮೊಂದಿಗೆ ಸಮಾಲೋಚಿಸದೆ ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಪರಿಗಣಿಸದೆ ಇಂತಹ ಹಠಾತ್ ನಿರ್ಧಾರಗಳು ಸಾವಿರಾರು ಚಾಲಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಾಗುತ್ತಿದೆ.
ನಿಮ್ಮ ನಾಯಕತ್ವದಲ್ಲಿ, ಕರ್ನಾಟಕವು ಗಿಗ್ ಕೆಲಸಗಾರರಿಗೆ ಪ್ರಮುಖ ಕ್ರಮಗಳನ್ನು ತರಲಾಗಿದೆ. ಸಾಮಾಜಿಕ ಭದ್ರತಾ ನಿಯಮಗಳು, ಕಲ್ಯಾಣ ಮಂಡಳಿಗಳು, ವಿಮೆ ಇವು ನಮಗೆ ಭರವಸೆ ನೀಡಿವೆ. ಆದರೆ ಇಂದು, ಈ ಭರವಸೆಯನ್ನು ಮುರಿಯುತ್ತಿದೆ. ನಮಗೆ ಕೆಲಸ ಮಾಡಲು ಕೂಡ ಅವಕಾಶ ನೀಡದಿದ್ದರೆ ಪ್ರಯೋಜನವೇನು?
ಇದನ್ನೂ ಓದಿ: ಕರ್ನಾಟಕದಲ್ಲಿ ಉಬರ್, ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಜೂನ್ 15 ರವರೆಗೆ ವಿಸ್ತರಿಸಿದ ಹೈಕೋರ್ಟ್
ಪ್ರಯಾಣಿಕರು ಸಹ ಬಳಲುತ್ತಿದ್ದಾರೆ. ಅನೇಕರು ತ್ವರಿತ, ಕಡಿಮೆ ವೆಚ್ಚದ ಸಂಚರಕ್ಕಾಗಿ ಬೈಕ್ ಟ್ಯಾಕ್ಸಿಗಳನ್ನು ಬಳಸುತ್ತಾರೆ. ವಿಶೇಷವಾಗಿ ಬಸ್ಸುಗಳು ಕಡಿಮೆ ಇರುವ ಸ್ಥಳಗಳಲ್ಲಿ ಸಾವಿರಾರು ಜನರಿಗೆ ಕೈಗೆಟುಕುವ ಸೇವೆಯಾಗಿದೆ. ನಾವು ಒಂದು ವರ್ಷದಲ್ಲಿ ಸುಮಾರು 8 ಕೋಟಿ ಟ್ರಿಪ್ಗಳನ್ನು ಮಾಡುತ್ತೇವೆ. ಈಗ ಈ ಸವಾರರಿಗೆ ಯಾರು ಸಹಾಯ ಮಾಡುತ್ತಾರೆ ಎಂದು ಪ್ರಶ್ನೆ ಮಾಡಲಾಗಿದೆ.
ಬ್ಯಾನ್ ಮಾಡಬೇಡಿ
ನಮ್ಮದೊಂದು ಸರಳ ವಿನಂತಿ ಏನೆಂದರೆ ರಾತ್ರೋರಾತ್ರಿ ನಮ್ಮನ್ನು ಬ್ಯಾನ್ ಮಾಡಬೇಡಿ, ನಮ್ಮೊಂದಿಗೆ ಮಾತನಾಡಿ. ಪ್ರಯಾಣಿಕರ ಸುರಕ್ಷಿತೆ, ನಿಯಮಗಳನ್ನು ಪಾಲಿಸಲು ಮತ್ತು ನಮ್ಮ ಕುಟುಂಬಗಳ ಬದುಕಿಗೆ ಒಂದು ದಾರಿ ಮಾಡಿಕೊಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Mon, 16 June 25








