
ವಿಧಾನಸಭೆ ಚುನಾವಣೆ ಇನ್ನೆನು ಕೆಲವು ತಿಂಗಳುಗಳು ಬಾಕಿ ಇದ್ದು, ಚುನಾವಣಾ ಕಾವು ಶುರುವಾಗಿದೆ. ಕೆಲವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದ್ದರೆ, ಇನ್ನೂ ಕೆಲವರು ಈ ಬಾರಿಯಾದರೂ ನಮಗೆ ಟಿಕೆಟ್ ಸಿಗಬಹುದೆಂಬ ಆಶಾಭಾವನೆಯಿಂದ ಎದುರು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಹತ್ತಿರ ಬರುತ್ತಿದ್ದಂತೆ ಟಕೆಟ್ ಆಕಾಂಕ್ಷಿಗಳಿಗೆ ಭಯ ಶುರುವಾಗಿರುವುದಂತೂ ಸುಳ್ಳಲ್ಲ. ಅದರಂತೆ ವಿವಿಧ ಕಾರಣ ನೀಡಿ ಈ ನಾಲ್ವರು ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ವಯಸ್ಸಿನ ಕಾರಣದಿಂದ ಅಫ್ಜಲ್ಪುರ ಶಾಸಕ ಎಂ.ವೈ.ಪಾಟೀಲ್ ಹಾಗೂ ಪಾವಗಡದಿಂದ ವೆಂಕಟರಮಣಪ್ಪ, ಕ್ಷೇತ್ರದಲ್ಲಿ ಅನುಕಂಪದ ಅಲೆ ಇಲ್ಲದ ಕಾರಣ ಕುಂದಗೋಳದಿಂದ ಕುಸುಮಾ ಶಿವಳ್ಳಿ, ಇನ್ನು ಸರ್ವೆ ವರದಿ ಇರದ ಹಿನ್ನೆಲೆ ಲಿಂಗಸುಗೂರಿನ ಡಿ.ಎಸ್.ಹುಲಗೇರಿ ಅವರಿಗೆ ಟಿಕೆಟ್ ಕೈ ತಪ್ಪುವ ಭಯ ಶುರುವಾಗಿದೆ.
ಈ ನಾಲ್ವರ ಪೈಕಿ ಇಬ್ಬರು ಶಾಸಕರಿಂದ ಮಕ್ಕಳ ಪರ ಲಾಬಿ ಶುರುವಾಗಿದೆ. ಎಮ್ ವೈ ಪಾಟೀಲ್ ರಾಜಕೀಯ ನಿವೃತ್ತಿ ಹಿನ್ನೆಲೆ ತಮ್ಮ ಪುತ್ರ ಅರುಣ್ ಪಾಟೀಲ್ಗೆ ಟಿಕೆಟ್ ಕೇಳಿದ್ದಾರೆ. ಇತ್ತ ಸಿದ್ದರಾಮಯ್ಯ ಬೆಂಬಲಿಗ ಜೆ ಎಂ ಕೊರಬು ಕೂಡಾ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆ ಪಾವಗಡದ ಶಾಸಕ ವೆಂಕಟರಮಣಪ್ಪ ಕೂಡ ತಮ್ಮ ಮಗನಿಗೆ ಟಿಕೆಟ್ ನೀಡಿ ಎಂದು ಕೇಳಿದ್ದಾರೆ. ಈ ಎಲ್ಲಾ ಸರ್ವೆ ವರದಿ ಆಧರಿಸಿಯೇ ಹಾಲಿ ಶಾಸಕರ ಟಿಕೇಟ್ ಹಣೆಬರಹವನ್ನೂ ಕೈ ನಾಯಕರು ನಿರ್ಧರಿಸುತ್ತಿದ್ದಾರೆ. ಈ ನಾಲ್ವರನ್ನೂ ಸೇರಿಸಿ 8-10 ಹಾಲಿ ಶಾಸಕರಿಗೆ ಒಂದು ತಿಂಗಳೊಳಗೆ ಕ್ಷೇತ್ರ ಸರಿ ಮಾಡಿಕೊಳ್ಳಿ. ಇಲ್ಲವಾದರೆ ಟಿಕೆಟ್ ಸಿಗುವುದು ಡೌಟ್ ಎಂದು ಈಗಾಗಲೇ ಕಾಂಗ್ರೆಸ್ ವರಿಷ್ಠರು ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಮೂರು ಸರ್ವೆ ವರದಿಯಲ್ಲೂ ಯಾರಿಗೆ ಹಿನ್ನಡೆ ಇದೆಯೋ ಅವರಿಗೆ ಟಿಕೇಟ್ ಸಿಗುವುದು ಡೌಟ್ ಎಂದು 22 ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಆಂತರಿಕ ಸಮೀಕ್ಷೆಯ ಮೇರೆಗೆ ಎಚ್ಚರಿಕೆ ಕೊಟ್ಟಿದ್ದ ಎಐಸಿಸಿ, ಇದರ ಬೆನ್ನಲ್ಲೆ ಸುಮಾರು 12 ಕ್ಷೇತ್ರಗಳಲ್ಲಿ ಅಲರ್ಟ್ ಆದ ಹಾಲಿ ಶಾಸಕರು ತಮ್ಮ ತಮ್ಮ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಈಗಲೂ ಸೋಲಿನ ಭೀತಿ ಇರುವ ಶಾಸಕರಿಗೆ ಒಂದು ತಿಂಗಳ ಡೆಡ್ ಲೈನ್ ನೀಡಿದ್ದು, ಗೆಲುವಿನ ವಾತಾವರಣ ಸೃಷ್ಟಿ ಆಗಿಲ್ಲ ಎಂದ್ರೆ ಟಿಕೆಟ್ ಇಲ್ಲ ಎಂದು ಪದೇ ಪದೇ ಸುರ್ಜೆವಾಲಾ, ಡಿಕೆಶಿ, ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ, ಯಾರಿಗೆ ಕೈ ತಪ್ಪಲಿದೆ ಕಾದು ನೋಡಬೇಕು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:38 am, Sat, 4 February 23