Explainer: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸುವಂತೆ ಅಭಿಯಾನ ತೀವ್ರಗೊಳ್ಳುತ್ತಿರುವಂತೆಯೇ ಅದರ ಇತಿಹಾಸದೆಡೆ ಒಂದು ಇಣುಕು ನೋಟ

ತುಳು ಮೂಲತಃ ಒಂದು ದ್ರಾವಿಡ ಭಾಷೆಯಾಗಿದೆ ಮತ್ತು ಮುಖ್ಯವಾಗಿ ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಾಗೂ ಕೇರಳದ ಕಾಸರಗೋಡಿನಲ್ಲಿ ಬಳಸಲಾಗುತ್ತದೆ.

Explainer: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸುವಂತೆ ಅಭಿಯಾನ ತೀವ್ರಗೊಳ್ಳುತ್ತಿರುವಂತೆಯೇ ಅದರ ಇತಿಹಾಸದೆಡೆ ಒಂದು ಇಣುಕು ನೋಟ
ತುಳುನಾಡಿನ ಧ್ವಜ
Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jun 15, 2021 | 5:23 PM

ಭಾಷೆ ಒಂದು ಸಂಸ್ಕೃತಿಯನ್ನು ಮತ್ತು ಜನಾಂಗವನ್ನು ಮಾತ್ರ ಪ್ರತಿನಿಧಿಸುವುದಿಲ್ಲ ಅದು ಪ್ರಾದೇಶಿಕವಾಗಿರಲಿ, ಅಥವಾ ಅಧಿಕೃತ ಸ್ಥಾನಮಾನ ಪಡೆದದ್ದಾಗಿರಲಿ, ಅದಕ್ಕೆ ತನ್ನದೇ ಆದ ಸೊಗಡಿನ ಜೊತೆ ಹತ್ತಾರು ಆಯಾಮಗಳಿವೆ. ಭಾರತದಲ್ಲಿ ಅಧಿಕೃತ ಭಾಷೆಗಳು 23 ಆದರೂ, 122 ಪ್ರಮುಖ ಭಾಷೆಗಳು ಮತ್ತು 1,599 ಇತರ ಭಾಷೆಗಳು ಬಳಕೆಯಲ್ಲಿವೆ. ನಮ್ಮ ಕರಾವಳಿ ಜನ ಮಾತಾಡುವ ತುಳು ಭಾಷೆ ನಿಮಗೆ ಗೊತ್ತಲ್ಲ? ಈ ಭಾಷೆಯನ್ನು ಬಹಳಷ್ಟು ಜನ ಬಳಸುತ್ತಿದ್ದರೂ ಇನ್ನೂ ಅಧಿಕೃತ ಭಾಷೆಯೆಂಬ ಸ್ಥಾನಮಾನ ಸಿಕ್ಕಿಲ್ಲ. ಆದರೆ ಈ ದಿಶೆಯಲ್ಲಿ ಹೋರಾಟ ಬಹಳ ವರ್ಷಗಳಿಂದ ಜಾರಿಯಲ್ಲಿದೆ, ಮೊನ್ನೆಯಷ್ಟೇ ಹಲವಾರು ಸಂಘಟನೆಗಳು ಜೊತೆಗೂಡಿ ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಟ್ವಿಟ್ಟರ್ ಅಭಿಯಾನವನ್ನು ಆರಂಭಿಸಿದ್ದು ಇದಕ್ಕೆ ಭಾರೀ ಬೆಂಬಲ ಸಿಕ್ಕಿದೆ, ಲಭ್ಯವಿರುವ ಮಾಹಿತಿಯ ಪ್ರಕಾರ ರವಿವಾರದವರೆಗೆ 2.5 ಲಕ್ಷಕ್ಕೂ ಹೆಚ್ಚು ಜನ ಅಭಿಯಾನಕ್ಕೆ ಸ್ಪಂದಿಸಿದ್ದಾರೆ.

ತುಳು ಬಾಷೆಯನ್ನು ಭಾರತದ ಯಾವ್ಯಾವ ಭಾಗದಲ್ಲಿ ಮಾತಾಡಲಾಗುತ್ತದೆ ಅದರ ಇತಿಹಾಸವೇನು?

ತುಳು ಮೂಲತಃ ಒಂದು ದ್ರಾವಿಡ ಭಾಷೆಯಾಗಿದೆ ಮತ್ತು ಮುಖ್ಯವಾಗಿ ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಾಗೂ ಕೇರಳದ ಕಾಸರಗೋಡಿನಲ್ಲಿ ಬಳಸಲಾಗುತ್ತದೆ. 2011 ರ ಜನಗಣತಿ ಪ್ರಕಾರ ಪ್ರಕಾರ ಭಾರತದಲ್ಲಿ ಸುಮಾರು 18. 5 ಲಕ್ಷ ಜನ ಈ ಭಾಷೆಯನ್ನು ಮಾತಾಡುತ್ತಾರೆ. ವಿದ್ವಾಂಸರು ಹೇಳುವ ಪ್ರಕಾರ, ತುಳು ಪ್ರಾಚೀನ ದ್ರಾವಿಡ ಭಾಷೆಯಾಗಿದ್ದು 2,000 ವರ್ಷಗಳ ಇತಿಹಾಸ ಹೊಂದಿದೆ.

ರಾಬರ್ಟ್​ ಕಾಲ್ಡ್​ವೆಲ್ (1814-1891) ಹೆಸರಿನ ಒಬ್ಬ ಕ್ರಿಶ್ಚಿಯನ್ ಧರ್ಮ ಪ್ರಚಾರಕ ತನ್ನ ‘ಎ ಕಂಪ್ಯಾರೇಟಿವ್ ಗ್ರಾಮರ್ ಆಫ್​ ದಿ ಸೌತ್-ಇಂಡಿಯನ್ ಫ್ಯಾಮಿಲಿ ಆಫ್​ ಲ್ಯಾಂಗ್ವೇಜಸ್’ ಪುಸ್ತಕದಲ್ಲಿ, ತುಳು ದ್ರಾವಿಡ ಭಾಷೆಗಳ ಕುಟುಂಬದಲ್ಲಿ ಅತಿಹೆಚ್ಚು ಅಭಿವೃದ್ಧಿ ಹೊಂದಿದ ಭಾಷೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾನೆ.

ತುಳು ಮಾತಾಡುವ ಜನ ಏನನ್ನು ಬಯಸುತ್ತಿದ್ದಾರೆ?

ತುಳುಗೆ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸಬೇಕು ಮತ್ತು ಅದನ್ನು ಭಾರತ ಸಂವಿಧಾನದ ಎಂಟನೇ ಶೆಡ್ಯೂಲ್​ನಲ್ಲಿ ಸೇರಿಸಬೇಕೆನ್ನುವುದು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಭಾಷೆಯನ್ನು ಮಾತಾಡುವ ಜನರ ಬೇಡಿಕೆಯಾಗಿದೆ. ಕನ್ನಡವು ಸೇರಿದಂತೆ, ಅಸ್ಸಾಮೀಸ್, ಬೆಂಗಾಲಿ, ಗುಜರಾತಿ, ಹಿಂದಿ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬೀ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೊಡೊ, ಸಂಥಲಿ, ಮೈಥಿಲಿ ಮತ್ತು ಡೋಗ್ರಿ ಮೊದಲಾದ22 ಭಾಷೆಗಳು ಸಂವಿಧಾನ 8ನೇ ಶೆಡ್ಯೂಲ್​ನಲ್ಲಿದ್ದು ಇವುಗಳ ಜೊತೆಗೆ ಇಂಗ್ಲಿಷ್​ ಭಾಷೆಯನ್ನು ಸೇರಿಸಲಾಗಿದೆ.

ಅಭಿಯಾನಕ್ಕೆ ಯಾರೆಲ್ಲ ಬೆಂಬಲ ಸೂಚಿಸುತ್ತಿದ್ದಾರೆ?

ದಕ್ಷಿಣ ಕನ್ನಡದ ಸಂಸದ ಮತ್ತು ಭಾರತೀಯ ಜನತಾ ಪಕ್ಷ ಕರ್ನಾಟಕ ಘಟಕದ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಅಭಿಯಾನಕ್ಕೆ ಬೆಂಬಲ ಸೂಚಿಸಿ, ‘ತುಳು ಭಾಷೆಯನ್ನು 8ನೇ ಶೆಡ್ಯೂಲ್​ ಸೇರಿಸಲು ಪ್ರಯತ್ನಗಳ ಜೊತೆಗೆ ಮಾತುತೆಗಳೂ ನಡೆದಿವೆ. ಕೆಲವು ತಾಂತ್ರಿಕ ಅಂಶಗಳನ್ನು ಬಗೆಹರಿಸಬೇಕಿದೆ. ನಮ್ಮ ಅಧಿಕಾರಾವಧಿಯಲ್ಲೇ, ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು,’ ಎಂದು ಟ್ವೀಟ್​ ಮಾಡಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು,‘ತುಳು ಕೇವಲ ಬಾಷೆಯಾಗಿರದೆ, ತನ್ನದೇ ಆದ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ,’ ಎಂದು ಹೇಳಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ವೇದವ್ಯಾಸ ಕಾಮತ್, ತುಳು ನಮ್ಮ ಮಾತೃಭಾಷೆ, ಅದಕ್ಕೆ ಅಧಿಕೃತ ಭಾಷೆಯ ಸ್ಥಾನಮಾನ ಸಿಗಬೇಕೆನ್ನುವುದು ನಮ್ಮೆಲ್ಲರ ಮಹದಾಸೆಯಾಗಿದೆ,’ ಎಂದಿದ್ದಾರೆ.

ರಾಜಕಾರಣಿಗಳಲ್ಲದೆ, ತುಳು ಬಾಷೆ ಮಾತಾಡುವ ಸಿನಿಮಾ ನಟರಾದ ರಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬಾರ್ ಸಹ ಟ್ವೀಟ್​ಗಳ ಮೂಲಕ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ತುಳು ಭಾಷೆಯ ಪ್ರಸಕ್ತ ಸ್ಥಾನಮಾನ ಏನು?

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕಥಾಲ್ಸರ್ ಅವರ ಹೇಳುವ ಹಾಗೆ, ‘ತುಳು ಮಾತಾಡುವ ಜನ ಕೇವಲ ಅನಧಿಕೃತವಾಗಿ ತುಳುನಾಡು ಎಂದು ಕರೆಸಿಕೊಳ್ಳುವ ಕರ್ನಾಟಕ ಮತ್ತು ಕೇರಳದ ಒಂದೆರಡು ಪ್ರಾಂತ್ಯಗಳಿಗಷ್ಟೇ ಸೀಮಿತಗಿದ್ದಾರೆ. ಪ್ರಸಕ್ತವಾಗಿ ಭಾರತದಲ್ಲಿ ತುಳು ಒಂದು ಅಧಿಕೃತ ಭಾಷೆಯಲ್ಲ. ಅದನ್ನು ಸಂವಿಧಾನದ 8ನೇ ಶೆಡ್ಯೂಲ್​ನಲ್ಲಿ ಸೇರಿಸುವ ಪ್ರಯತ್ನಗಳು ಜಾರಿಯಲ್ಲಿವೆ, ಹಾಗಾದಲ್ಲಿ ತುಳು ಭಾಷೆಯು ಸಾಹಿತ್ಯ ಅಕಾಡಮಿಯಿಂದ ಮಾನ್ಯತೆ ಪಡೆಯುತ್ತದೆ.’

ಶಿಕ್ಷಣದಲ್ಲಿ ತುಳು

ಕೆಲ ವರ್ಷಗಳ ಹಿಂದೆ ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ತುಳು ಭಾಷೆಯನ್ನು ಒಂದು ಭಾಷೆಯಾಗಿ ಸೇರಿಸಿತು. ಸಾರ್ವಜನಿಕ ಶಿಕ್ಷಣ ಇಲಾಖೆಯು 2020ರಲ್ಲಿ ನೀಡಿದ ಮಾಹಿತಿಯನ್ವಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಎಸ್​ ಎಸ್​ ಎಲ್​ ಸಿ ಪರೀಕ್ಷೆಯಲ್ಲಿ ತುಳುವನ್ನು ಮೂರನೇ ಆದ್ಯತೆ ಭಾಷೆಯಾಗಿ ಒಟ್ಟು 956 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ತುಳುವನ್ನು ಭಾಷೆಯಾಗಿ ಪರಿಚಯಿಸಿದ 2014-15 ರ ಸಾಲಿನಲ್ಲಿ 18 ವಿದ್ಯಾರ್ಥಿಗಳು ಅದನ್ನು ಮೂರನೇ ಭಾಷೆಯಾಗಿ ತೆಗೆದುಕೊಂಡಿದ್ದರು. ಕಳೆದ ವರ್ಷ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿಯಲ್ಲಿ (ಎನ್​ಈಪಿ) ಇದನ್ನು ಸೇರಿಸಿಕೊಳ್ಳುವಂತೆ ‘ಜೈ ತುಳ್ನಾಡ್’ ಅನ್​ಲೈನ್ ಅಭಿಯಾನವನ್ನು ನಡೆಸಲಾಗಿತ್ತು.

ಭಾರತೀಯ ಚುನಾವಣಾ ಆಯೋಗದಿಂದ ಒಂದು ಪಕ್ಷವಾಗಿ ಅಂಗೀಕರಿಸಲ್ಪಟ್ಟಿರುವ ತುಳುವೆರೆ ಪಕ್ಷ ತುಳು ಮಾತಾಡುವ ಜನರಿಗಾಗಿಯೇ ‘ತುಳು ನಾಡು’ ಹೆಸರಲ್ಲಿ ಪ್ರತ್ಯೇಕ ರಾಜ್ಯ ಬೇಕೆಂದು ಪ್ರತಿಪಾದಿಸಿತ್ತು. ಪ್ರತಿ ಭಾಷೆಗಳಿಗೆ ಒಂದೊಂದು ರಾಜ್ಯವಿದೆ, ಹಾಗೆಯೇ, ತುಳು ಭಾಷಿಕರಿಗೂ ಒಂದು ಬೇರೆ ರಾಜ್ಯ ಬೇಕೆಂದು ಅದು ಹೇಳಿತ್ತು.

ಕಲೆ ಸಂಸ್ಕೃತಿ ಮತ್ತು ಸಿನಿಮಾದಲ್ಲಿ ತುಳು

‘ಪದನ್ನ’ದಂಥ ಜಾನಪದ ಹಾಡು-ನೃತ್ಯ, ಯಕ್ಷಗಾನ ಮೊದಲಾದವುಗಳನ್ನೊಳಗೊಂಡ ಮೌಖಿಕವಾದ ಒಂದು ಶ್ರೀಮಂತ ಸಾಹಿತ್ಯಿಕ ಪರಂಪರೆ ತುಳು ಭಾಷೆಗಿದೆ. ಸಿನಿಮಾರಂಗದಲ್ಲೂ ಈ ಭಾಷೆ ಸಕ್ರಿಯವಾಗಿದ್ದು ಪ್ರತಿವರ್ಷ 6-7 ತುಳು ಚಲನಚಿತ್ರಗಳು ಬಿಡುಗಡೆಯಾಗುತ್ತಿವೆ. ತುಳು ಚಿತ್ರಗಳು ಮಂಗಳೂರು ಅಥವಾ ಉಡುಪಿಯಲ್ಲಿನ ಕನಿಷ್ಟ ಒಂದು ಚಿತ್ರಮಂದಿರದಲ್ಲಿ ಪ್ರತಿದಿನ ಪ್ರದರ್ಶನ ಕಾಣುತ್ತಿರುತ್ತವೆ.

ಇದನ್ನೂ ಓದಿ: Tulu Language: ತುಳು ಭಾಷೆಗೆ ಸೂಕ್ತ ಸ್ಥಾನಮಾನ; ಟ್ವಿಟರ್​ನಲ್ಲಿ ಜೋರಾಯ್ತು ತುಳು ಭಾಷಿಕರ ಹೋರಾಟ

Web contact

TV9 Kannada

Read More
Follow Us