ಲಾಕ್​ಡೌನ್​ನಿಂದ ಬಾಡುತ್ತಿದೆ ರೈತರ ಬದುಕು; 80 ಸಾವಿರ ಖರ್ಚು ಮಾಡಿ ಬೆಳೆದ ಬೀಟ್ರೂಟ್​ನಿಂದ 80 ರೂ. ಲಾಭವಿಲ್ಲ

ಲಾಕ್​ಡೌನ್​ನಿಂದ ಸದ್ಯ ಮಾರ್ಕೆಟ್​ನಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ದರ ಸಂಪೂರ್ಣವಾಗಿ ಬಿದ್ದು ಹೋಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ 1 ಕೆಜಿ ಬೀಟ್ರೂಟ್​ ಒಂದು, ಎರಡು ರೂಪಾಯಿಗೆ ಮಾರಾಟವಾಗುತ್ತಿದೆ.

ಲಾಕ್​ಡೌನ್​ನಿಂದ ಬಾಡುತ್ತಿದೆ ರೈತರ ಬದುಕು; 80 ಸಾವಿರ ಖರ್ಚು ಮಾಡಿ ಬೆಳೆದ ಬೀಟ್ರೂಟ್​ನಿಂದ 80 ರೂ. ಲಾಭವಿಲ್ಲ
ಬೀಟ್ರೂಟ್
Follow us
|

Updated on: May 19, 2021 | 1:02 PM

ಬೆಳಗಾವಿ: ಕೊರೊನಾ ಎರಡನೇ ಅಲೆಯನ್ನು ತಡೆಯಲು ರಾಜ್ಯ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ಆದರೆ ಈ ಲಾಕ್​ಡೌನ್​ನಿಂದಾಗಿ ದಿನಗೂಲಿ ಮಾಡುವವರು, ವ್ಯಾಪರಿಗಳು ಮತ್ತು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬೆಳಗಾವಿ ರೈತರ ಪರಿಸ್ಥಿರಿ ಕೂಡ ಭಿನ್ನವಾಗಿಲ್ಲ. ಬೀಟ್ರೂಟ್, ಸೇವಂತಿಗೆ ಹೂ, ಚೆಂಡು ಹೂ ಬೆಳೆದ ಬೆಳೆಗಾರರ ಪರಿಸ್ಥಿತಿ ಅಯೋಮಯವಾಗಿದೆ. ಹೀಗಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿ ತಾಲೂಕಿನ ಮಜಗಾವ ಗ್ರಾಮದಲ್ಲಿ ಹೆಚ್ಚಾಗಿ ತರಕಾರಿಯನ್ನ ಬೆಳೆಯಲಾಗುತ್ತದೆ. ಈಗ ಸೀಜನ್ ಕೂಡ ಇರುವ ಕಾರಣಕ್ಕೆ 200 ಎಕರೆ ಪ್ರದೇಶದಲ್ಲಿ ಈ ಭಾಗದಲ್ಲಿ ಬೀಟ್ರೂಟ್ ಬೆಳೆಯಲಾಗಿದೆ. ಲಾಕ್​ಡೌನ್​ನಿಂದ ಸದ್ಯ ಮಾರ್ಕೆಟ್​ನಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ದರ ಸಂಪೂರ್ಣವಾಗಿ ಬಿದ್ದು ಹೋಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ 1 ಕೆಜಿ ಬೀಟ್ರೂಟ್​ ಒಂದು, ಎರಡು ರೂಪಾಯಿಗೆ ಮಾರಾಟವಾಗುತ್ತಿದೆ.

ಒಂದು ಎಕರೆ ಪ್ರದೇಶದಲ್ಲಿ ಬೀಟ್ರೂಟ್ ಬೆಳೆಯಲು ಎಂಬತ್ತು ಸಾವಿರದ ವರೆಗೆ ಖರ್ಚಾಗುತ್ತದೆ. ಆದರೆ ಇದೀಗ ಎಂಬತ್ತು ರೂಪಾಯಿ ಲಾಭ ಬರುತ್ತಿಲ್ಲ. ಸರ್ಕಾರ ಲಾಕ್​ಡೌನ್ ಮಾಡಿ ಸುಮ್ಮನೆ ಕುಳಿತರೆ ಆಗಲ್ಲಾ ನಮಗೆ ಪರಿಹಾರ ನೀಡಲಿ ರೈತ ಮಹಿಳೆ ಸುಮಂಗಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ತರಕಾರಿ ಬೆಳೆ ಬೆಳೆಯುತ್ತಿರುವವರ ಪರಿಸ್ಥಿತಿ ಇದಾದರೆ, ಇನ್ನು ಹೂ ಬೆಳೆದ ರೈತರ ಪರಿಸ್ಥಿತಿಯಂತೂ ಯಾರು ಕೇಳಲೇಬಾರದು ಹಾಗಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 500 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಸೇವಂತಿ ಹಾಗೂ ಚೆಂಡು ಹೂ ಬೆಳೆಯಲಾಗಿದೆ. ಇದೀಗ ಹೂವಿಗೂ ಬೆಲೆ ಸಿಗದೇ ಜಮೀನಿನಲ್ಲೇ ಬಿಡುವ ಪರಿಸ್ಥಿತಿ ರೈತರಿಗೆ ಬಂದಿದೆ.

flower

ಗಿಡದಲ್ಲೇ ಬಾಡುತ್ತಿರುವ ಸೇವಂತಿ ಹೂ

ಎಷ್ಟಾದರೂ ಬೆಲೆ ಸಿಗಲಿ ಎಂದು ಮಾರುಕಟ್ಟೆಗೆ ಹೋದರೆ ಅಲ್ಲಿ ಸರ್ಕಾರ ನಿಗದಿ ಪಡಿಸಿದ ಸಮಯದಲ್ಲೇ ವ್ಯಾಪಾರ ಮಾಡಲು ಪೊಲೀಸರು ಬಿಡುತ್ತಿಲ್ಲ. ಒಂದೇರಡು ಗಂಟೆಯಲ್ಲಿ ಮಾರಾಟ ಮಾಡಿ ಬರಬೇಕು ಅಂದರೆ ಕೊಳ್ಳುವವರೂ ಕೂಡ ಇರುವುದಿಲ್ಲ, ಕೆಲವೊಮ್ಮೆ ತೆಗೆದುಕೊಂಡು ಹೋದ ಹೂವನ್ನ ಹಾಗೇ ಮನೆಗೆ ತಂದು ತಿಪ್ಪೆಗೆ ಎಸೆದಿದ್ದೇವೆ. ಸರ್ಕಾರ ಕಳೆದ ವರ್ಷ ಪರಿಹಾರ ಕೊಡುತ್ತೇವೆ ಎಂದು ಕೊಡಲಿಲ್ಲ. ಈ ಬಾರಿಯಾದರೂ ಪರಿಹಾರ ನೀಡಬೇಕು. ಕುಟುಂಬ ನಿರ್ವಹಣೆ ಮಾಡುವುದು ಕೂಡ ಕಷ್ಟವಾಗಿದೆ. ಈ ಬಾರಿಯಾದರೂ ರೈತರನ್ನ ಉಳಿಸುವ ಕೆಲಸ ಸರ್ಕಾರ ಮಾಡಲಿ ಎಂದು ರೈತ ಮಹಿಳೆ ಭಾರತಿ ತಿಳಿಸಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹೂವಿನ ಬೆಲೆ ಸಂಪೂರ್ಣವಾಗಿ ಬಿದ್ದು ಹೋಗಿದ್ದು, ರೈತರು ವೆಚ್ಚ ಮಾಡಿದರ ಅರ್ಧದಷ್ಟು ಕೂಡ ಹಣ ಸಿಗುತ್ತಿಲ್ಲ. ಒಟ್ಟಾರೆ ಸರ್ಕಾರ ಜನರ ಜೀವ ರಕ್ಷಣೆ ಎಂದು ಲಾಕ್​ಡೌನ್ ಮಾಡಿದೆ. ಆದರೆ ಹಸಿವು ನೀಗಿಸುವ ರೈತರೇ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕಿದೆ. ಆದಷ್ಟು ಬೇಗ ರೈತರಿಗೆ ಸಾಧ್ಯವಾದಷ್ಟು ಪರಿಹಾರ ಘೋಷಣೆ ಮಾಡಿ ರೈತರ ಜೀವ ಉಳಿಸುವ ಕೆಲಸ ಮಾಡಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ:

ಲಾಕ್​ಡೌನ್​ ಎಫೆಕ್ಟ್: ಬೆಳೆದ ಬೆಳೆಗೆ ಬೆಲೆ ಇಲ್ಲ; ಕಟಾವು ಮಾಡದೆ ಬೆಳೆಯನ್ನು ಜಮೀನಿನಲ್ಲೇ ಬಿಟ್ಟ ಮಂಡ್ಯದ ರೈತ

ಲಾಕ್​ಡೌನ್​ ಎಫೆಕ್ಟ್: ಐನೂರು ಎಕರೆ ಕಲ್ಲಂಗಡಿ ಬೆಳೆದ ಬಾಗಲಕೋಟೆ ರೈತರಿಗೆ ಸಂಕಷ್ಟ