ಗದಗದಲ್ಲಿ ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರ!

ಗದಗ ಜಿಲ್ಲೆಯ ಸಿಂಗಟಾಲೂರ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಸೇವೆ ನಿರಾಕರಿಸಿದ ಹಿನ್ನೆಲೆ, ಜಾತಿ ತಾರತಮ್ಯ ನಿರ್ಮೂಲನೆಗೆ ಸರ್ಕಾರವೇ ಕ್ಷೌರದಂಗಡಿ ಆರಂಭಿಸಿದೆ. ಸಾಮಾಜಿಕ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಆದಾಯ ಇಲಾಖೆ ಸಹಯೋಗದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ವರ್ಷಗಳಿಂದ ಮುಂದುವರಿದಿದ್ದ ಭೇದಭಾವಕ್ಕೆ ತೆರೆ ಎಳೆದು, ಎಲ್ಲ ಸಮುದಾಯದವರಿಗೂ ಸೇವೆ ಒದಗಿಸುವ ಗುರಿ ಹೊಂದಲಾಗಿದೆ

ಗದಗದಲ್ಲಿ ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರ!
ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ
Image Credit source: Google

Updated on: Feb 28, 2026 | 7:18 AM

ಗದಗ, ಫೆಬ್ರವರಿ 28: ದಲಿತರಿಗೆ ಕ್ಷೌರ ಸೇವೆ ನೀಡಲು ನಿರಾಕರಿಸಿದ ಹಿನ್ನೆಲೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ ಮಾಡಲಾಗಿದೆ. ಸಾಮಾಜಿಕ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಆದಾಯ ಇಲಾಖೆ ಅಧಿಕಾರಿಗಳತ್ವದಲ್ಲಿ ಸಲೂನ್​​ ಶುರುವಾಗಿದ್ದು, ಗ್ರಾಮದಲ್ಲಿ ವರ್ಷಗಳಿಂದ ಮುಂದುವರಿದಿದ್ದ ಜಾತಿ ಆಧಾರಿತ ಭೇದಭಾವವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ದೈವವಾದ ವೀರಭದ್ರೇಶ್ವರನ ಭಕ್ತರಾಗಿರುವ ಹಡಪದ ಕುಟುಂಬಗಳು ಪರಂಪರೆ ಹೆಸರಿನಲ್ಲಿ ದಲಿತರಿಗೆ ಕ್ಷೌರ ಸೇವೆ ನೀಡುವುದನ್ನು ನಿರಾಕರಿಸುತ್ತಿದ್ದವು. ಅಚ್ಚರಿ ಎಂಬಂತೆ ಇದಕ್ಕೆ ದಲಿತ ಸಮುದಾಯದವರ ಮೌನದ ಸಮಮತವೂ ಪೀಳಿಗೆಗಳಿಂದಲೂ ಇತ್ತು ಎನ್ನಲಾಗಿದೆ.

ಇನ್ನು ಗ್ರಾಮದಲ್ಲಿದ್ದ ಏಕೈಕ ಕ್ಷೌರದಂಗಡಿಗೆ ದಲಿತ ಯುವಕರು ಭೇಟಿ ನೀಡಲು ಆರಂಭಿಸಿದ್ದರು. ಸಲೂನ್​​ನ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಆರಂಭಿಸಿದ್ದೀರಿ. ಹೀಗಾಗಿ ಎಲ್ಲ ಸಮುದಾಯದವರಿಗೂ ಸೇವೆ ನೀಡಬೇಕು ಎಂದು  ಯುವಕರು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಇತ್ತೀಚೆಗೆ ಶಾಪ್​​ನ ಮುಚ್ಚಲಾಗಿತ್ತು. ಹೀಗಾಗಿ ಜನರು ಹೇರ್​​ ಕಟಿಂಗ್​​, ಶೇವಿಂಗ್​​ ಮಾಡಿಸಿಕೊಳ್ಳಬೇಕಿದ್ದಲ್ಲಿ ನೆರೆಯ ಗ್ರಾಮಗಳಿಗೆ ತೆರಳಬೇಕಾದ ಸ್ಥಿತಿ ಉದ್ಭವಿಸಿತ್ತು. ಸಾಮಾಜಿಕ ಕಲ್ಯಾಣ ಮತ್ತು ಆದಾಯ ಇಲಾಖೆ ಅಧಿಕಾರಿಗಳು ಹಡಪದ ಸಮುದಾಯದವರನ್ನು ಮನವೊಲಿಸಿ ಅಂಗಡಿಗಳನ್ನು ತೆರೆಯಲು ಹಾಗೂ ಎಲ್ಲಾ ಸಮುದಾಯದವರಿಗೆ ಸೇವೆ ನೀಡಲು ಪ್ರಯತ್ನಿಸಿದ್ದರು. ಆದರೆ ಯತ್ನ ಫಲಿಸದ ಹಿನ್ನೆಲೆಯಲ್ಲಿ ಕ್ಷೌರ ಮಾಡಲು ಒಪ್ಪದವರಿಗೆ ನೋಟಿಸ್​​ಗಳನ್ನು ನೀಡಿದರೂ, ಅವರು ತಮ್ಮ ಹಠ ಬಿಟ್ಟಿಲ್ಲ. ಕೊನೆಗೆ ಅನಿವಾರ್ಯವಾಗಿ ಅಧಿಕಾರಿಗಳು ಸರ್ಕಾರಿ ಕ್ಷೌರದಂಗಡಿ ತೆರೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ? ಸ್ವಾಮೀಜಿ ಆಡಿಯೋ ವೈರಲ್

ಫೆಬ್ರವರಿ 26ರಂದು ತಹಶೀಲ್ದಾರ್ ಎರ್ರಿಸ್ವಾಮಿ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿ ಹೊಸ ಕ್ಷೌರ ಅಂಗಡಿಯನ್ನು ಉದ್ಘಾಟಿಸಲಾಗಿದೆ. ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಂಗಡಿ ನೀಡಿ ಕ್ಷೌರ ಮಾಡಲು ಅನುವು ಮಾಡಿಕೊಡಲಾಗಿದೆ. ಆ ಮೂಲಕ ಗ್ರಾಮದಲ್ಲಿ ಎಲ್ಲ ಸಮುದಾಯದವರಿಗೂ ಕ್ಷೌರ ಮಾಡಿಸಕೊಳ್ಳಲು ಅಧಿಕಾರಿಗಳು ನೆರವಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us