
ಗದಗ, ಫೆಬ್ರವರಿ 21: ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಕೆರಳಿದ್ದಾರೆ. ಕಮಿಷನ್ ದಂಧೆ ಜೋರಾಗಿದೆ ಅಂತ ಆರೋಪ ಮಾಡುತ್ತಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಅಸ್ತ್ರ ಮಾಡ್ಕೊಂಡು ವಾಗ್ದಾಳಿ ಮಾಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಗದಗ ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani), ಗುತ್ತಿಗೆದಾರನಿಂದ ಕಮಿಷನ್ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಸದ್ಯ ಇದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಫೆ 18ರಂದೇ ಲೋಕಾಯುಕ್ತಕ್ಕೆ ಗುತ್ತಿಗೆದಾರ ವಿಜಯರಾಜ ಎಸ್ ಪೂಜಾರ ದೂರು ನೀಡಿದ್ದರು. ಜೊತೆಗೆ ಚಂದ್ರು ಲಮಾಣಿ ಧಮ್ಕಿ ಹಾಕಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫೆಬ್ರವರಿ 18ರಂದು ಗದಗ ಜಿಲ್ಲೆಯ ಗದಗ ತಾಲೂಕಿನ ಚಿಂಚಲಿ ಗ್ರಾಮದ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ವಿಜಯರಾಜ ಎಸ್ ಪೂಜಾರ ಗದಗ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದಾರೆ. ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳನ್ನು ಮಾಡುತ್ತಿದ್ದು, 2025ರ ಜುಲೈ ತಿಂಗಳಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಲಕ್ಷ್ಮೀಶ್ವರ ತಾಲೂಕಿ ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳನ್ನು ಮಾಡಲು ಆದೇಶ ಪಡೆದಿರುತ್ತಾರೆ.
ಇದನ್ನೂ ಓದಿ: ಗದಗ: 11 ಲಕ್ಷ ರೂ ಲಂಚಕ್ಕೆ ಬೇಡಿಕೆ; ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ
ಈ ಕಾಮಗಾರಿಗಳನ್ನು ಮಾಡಲು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಎಂಎಲ್ಎ ಚಂದ್ರು ಲಮಾಣಿ ತೊಂದರೆ ಮಾಡುತ್ತಿದ್ದು, ಫಿರ್ಯಾದಿದಾರರು ಅವರನ್ನು ಬೇಟಿಯಾದಾಗ ಶಾಸಕರು ಹಾಗೂ ಅವರ ಪಿ.ಎ ಮಂಜುನಾಥ್ ವಾಲ್ಮೀಕಿ ಮತ್ತು ಶಾಸಕರ ಸಂಬಂಧಿ ಗುರು ಲಮಾಣಿ ಗುತ್ತಿಗೆದಾರರಿಗೆ ಈ ಎರಡು ಕಾಮಗಾರಿಗಳನ್ನು ತಮಗೆ ತಿಳಿಸದೇ ಏಕೆ ಮಾಡುತ್ತಿದ್ದೀರಾ, ಈ ಟೆಂಡರ್ ರದ್ದು ಮಾಡಿಸುತ್ತೇವೆ. 12% ಕಮಿಷನ್ ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತೇವೆ. ಇಲ್ಲದಿದ್ದರೆ ರೌಡಿಗಳನ್ನು ಕಳುಹಿಸಿ ಬುದ್ದಿ ಕಲಿಸುತ್ತೇವೆ ಎಂದು ಧಮಕಿ ಹಾಕಿರುತ್ತಾರೆ ಹಾಗೂ ಎರಡು ಕಾಮಗಾರಿಗಳಿಗೆ ಒಟ್ಟು 11 ಲಕ್ಷ ರೂ ಹಣವನ್ನು ಲಂಚವಾಗಿ ಕಮಿಷನ್ ರೂಪದಲ್ಲಿ ಕೊಡಲು ಒತ್ತಾಯ ಮಾಡಿರುತ್ತಾರೆ.
ಈ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರಿನನ್ವಯ ಇಂದು ಮಧ್ಯಾಹ್ನ 02 ಗಂಟೆಯ ಸುಮಾರಿಗೆ ಫಿರ್ಯಾದಿದಾರರಿಂದ ಮೇಲ್ಕಂಡ ಮೂರು ಜನ ಆಪಾದಿತರು ಲಂಚದ ಹಣವಾಗಿ 5 ಲಕ್ಷ ರೂಗಳನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ದಸ್ತಗಿರಿ ಆಗಿರುತ್ತಾರೆ.
ಇದನ್ನೂ ಓದಿ: ಸರ್ 12 ಬೇಡ.. 11 ಪರ್ಸೆಂಟ್ ಸಾಕು: ಕಮಿಷನ್ ಪಡೆಯುವಾಗಲೇ ಬಿಜೆಪಿ ಶಾಸಕ ಲಾಕ್, ಇಲ್ಲಿದೆ ಎಕ್ಸ್ಕ್ಲೂಸಿವ್ ವಿಡಿಯೋ
ಈ ಪ್ರಕರಣದಲ್ಲಿ ಎಡಿಜಿಪಿ ಮನೀಷ ಕರ್ಬಿಕರ್, ಐಜಿಪಿ ಸುಬ್ರಹ್ಮಣೇಶ್ವರ ರಾವ್, ಎಸ್.ಟಿ.ಸಿದ್ದಲಿಂಗಪ್ಪ, ಎಸ್.ಪಿ ಕರ್ನಾಟಕ ಲೋಕಾಯುಕ್ತ ಧಾರವಾಡ ರವರ ಮಾರ್ಗದರ್ಶನದಲ್ಲಿ ಗದಗ ಮತ್ತು ಧಾರವಾಡ ಲೋಕಾಯುಕ್ತ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಕಾರ್ಯಚರಣೆ ಮಾಡಿದ್ದು, ಸದ್ಯ ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.