ಮಳೆಗಾಗಿ ಕಠಿಣ ನಿರ್ಧಾರ ಕೈಗೊಂಡ ಅನ್ನದಾತ: ಕೃಪೆ ತೋರುವನೇ ವರುಣ ದೇವ?

ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಎಲ್ಲೆಡೆ ಬರದ ಛಾಯೆ ಆವರಿಸುತ್ತಿದೆ. ಮಳೆಗಾಗಿ ಜನರು ಪೂಜೆ, ಪುರಸ್ಕಾರ ಅಂತಾ ದೇವರ ಮೊರೆ ಹೋಗುತ್ತಿದ್ದಾರೆ. ಈ ಮಧ್ಯೆ ಗದಗ ಜಿಲ್ಲೆಯ ಓರ್ವ ರೈತರ ಅದೊಂದು ಕಠಿಣ ನಿರ್ಧಾರ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹಾಗಾದರೆ ಮಳೆಗಾಗಿ ಆ ರೈತ ಕೈಗೊಂಡಿರುವ ಆ ನಿರ್ಧಾರವಾದರೂ ಏನು ಎಂಬ ಮಾಹಿತಿ ಇಲ್ಲಿದೆ.

ಮಳೆಗಾಗಿ ಕಠಿಣ ನಿರ್ಧಾರ ಕೈಗೊಂಡ ಅನ್ನದಾತ: ಕೃಪೆ ತೋರುವನೇ ವರುಣ ದೇವ?
ಮೌನಾನುಷ್ಠಾನಕ್ಕೆ ಕುಳಿತ ರೈತ
Image Credit source: tv9 kannada
Edited By:

Updated on: Jul 01, 2026 | 4:20 PM

ಗದಗ, ಜುಲೈ 01: ಮುಂಗಾರು ಮಳೆ (Rain) ಕೈ ಕೊಟ್ಟಿದೆ. ಸಾಲ-ಸೋಲ ಮಾಡಿ‌ ಬೆಳೆದ ಬೆಳೆ ನಾಶವಾಗುತ್ತಿದ್ದು, ರೈತರು (farmer) ಕಣ್ಣೀರು ಹಾಕುವಂತಾಗಿದೆ. ಹೀಗಾಗಿ ಮಳೆಗಾಗಿ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಹೀಗಿರುವಾಗ ಓರ್ವ ರೈತ ಊಟ, ನಿದ್ದೆ, ಇಲ್ಲದೆ ಹಗಲು-ರಾತ್ರಿ ಎನ್ನದೆ ಮೌನ ಅನುಷ್ಠಾನಕ್ಕೆ ಕುಳಿತ್ತಿದ್ದಾರೆ. ಮಳೆ ಆಗುವವರಿಗೆ ಮೌನ ಅನುಷ್ಠಾನ ಮಾಡಲು ಮುಂದಾಗಿದ್ದಾರೆ. ರೈತನಿಗೆ ಗ್ರಾಮದ ನೂರಾರು ಜನರು ಸಾಥ್ ನೀಡಿದ್ದು, ವರುಣನಿಗಾಗಿ ಪ್ರಾರ್ಥನೆ ನಡೆಸಿದ್ದಾರೆ.

ಮೌನ ಅನುಷ್ಠಾನಕ್ಕೆ ಕುಳಿತ ರೈತ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮದ ಹೊರವಲಯದ ಜಮೀನಿನ ಮರದ ಕೆಳಗೆ ರೈತ ಭೀಮಪ್ಪ ಚಳ್ಳಿಕೇರಿ ಮೌನ ಅನುಷ್ಠಾನಕ್ಕೆ ಕುಳಿತ್ತಿದ್ದಾರೆ. ಮೈಲಾರ ದೇವರ ಆರಾಧಕರಾಗಿರುವ ಭೀಮಪ್ಪ ಚಳ್ಳಿಕೇರಿ ರೈತ ಕೂಡ ಹೌದು. ಸದ್ಯ ಭೀಮಪ್ಪ ಚಳ್ಳಿಕೇರಿ ಅವರು ಮಳೆ ಆಗುವವರಿಗೆ ಮೌನ ಅನುಷ್ಠಾನದ ನಿರ್ಧಾರ ಕೈಗೊಂಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಮಾಯವಾಯ್ತು ಮುಂಗಾರು, ಹೇಳತೀರದಾಯ್ತು ಅನ್ನದಾತರ ಸ್ಥಿತಿ

ಸಾಲ-ಸೋಲ ಮಾಡಿ ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಮಾತ್ರ ಆಗುತ್ತಿಲ್ಲ. ಬೆಳೆಗಳು ಒಣಗುತ್ತಿವೆ. ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಭೀಮಪ್ಪ ಚಳ್ಳಿಕೇರಿ ದೇವರ ಮೊರೆ ಹೋಗಿದ್ದಾರೆ. ಕೆಲವು ರೈತರೊಂದಿಗೆ ಚರ್ಚೆ ಮಾಡಿ, ನಂತರ ಮೌನ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಮಳೆ ಆಗುವವರಿಗೆ ಮೌನ ಅನುಷ್ಠಾನ ಮಾಡುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಮಳೆ ಆಗದಿರುವುದರಿಂದ ಜಿಲ್ಲೆಯಲ್ಲಿ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಾನಪದ ಹಾಡು ಹೇಳುವ ಮೂಲಕ ಮಳೆರಾಯನ ಸ್ಮರಣೆ

ಇನ್ನು ಯಾರೊಂದಿಗೂ ಮಾತನಾಡದೆ ದೇವರ ನಾಮಸ್ಮರಣೆಯಲ್ಲಿ ನಿರತರಾಗಿರುವ ಭೀಮಪ್ಪ ಅವರ ಈ ವಿಶಿಷ್ಟ ಅನುಷ್ಠಾನವನ್ನು ನೋಡಲು, ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಮಹಿಳೆಯರು ಮಳೆರಾಯ ಕೃಪೆ ತೋರಲಿ ಎಂದು ಜಾನಪದ ಹಾಡು ಹಾಡುವ ಮೂಲಕ ಮಳೆರಾಯನ ಸ್ಮರಣೆ ಮಾಡುತ್ತಿದ್ದಾರೆ.

ಮಳೆ ಆಗುತ್ತದೆ ಎಂದ ರೈತರು 

ಜಿಲ್ಲೆಯಲ್ಲಿ ಶೇಕಡ 50 ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಆಗದಿರುವುದರಿಂದ ಹೆಸರು, ಮೆಕ್ಕೆಜೋಳ ಒಣಗಿ ಹೋಗುತ್ತಿದೆ. ಹೀಗಾಗಿ ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಮಳೆ ಬರಲಿ ಎಂದು ಜಿಲ್ಲೆಯಾದ್ಯಂತ ವಿಶೇಷ ಪೂಜೆ, ಪುರಸ್ಕಾರ ಮಾಡಲಾಗುತ್ತಿದೆ. ಈ ಮಧ್ಯೆ ರೈತ ಹಾಗೂ ದೇವರ ಆರಾಧಕರಾದ ಭೀಮಪ್ಪ ಅವರು ದೇವರ ಸ್ಮರಣೆ ಮಾಡುತ್ತಿದ್ದಾರೆ. ಮಳೆ ಆಗುತ್ತದೆ ಎನ್ನುವ ನಂಬಿಕೆಯಿದೆ ಎಂದು ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ:  ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಮಳೆ ಕೈಕೊಟ್ಟಿರುವುದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಈ ಹಿಂದೆ ಕೂಡ ಭೀಮಪ್ಪ ಅವರು ಮೌನ ಅನುಷ್ಠಾನ ಮಾಡಿದ್ದರು. ಇದೀಗ ಮತ್ತೆ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಈಗಲಾದರೂ ಮಳೆರಾಯ ಕೃಪೆ ತೋರಿಸುತ್ತಾನೆ ಕಾದು ನೋಡ್ಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us