ಗದಗ: ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಎಂಬ ಹೆಗ್ಗಳಿಕೆ ಹೊಂದಿರುವ ಸರ್ಕಾರಿ ಶಾಲೆಗೆ ಇದೆಂಥಾ ದುಸ್ಥಿತಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನ ಸರ್ಕಾರಿ ಶಾಲೆಯಲ್ಲಿ 380 ವಿದ್ಯಾರ್ಥಿಗಳಿದ್ದರೂ, ಮೂಲಸೌಕರ್ಯದ ಕೊರತೆ ತೀವ್ರವಾಗಿದೆ. ನಾಲ್ಕು ಕೊಠಡಿಗಳು ಮಾತ್ರ ಇದ್ದು, ಅವು ಸೋರುತ್ತಿವೆ. ಮಕ್ಕಳು ಜೀವಭಯದಲ್ಲಿ ಪಾಠ ಕೇಳುವಂತಾಗಿದೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಣ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

ಗದಗ: ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಎಂಬ ಹೆಗ್ಗಳಿಕೆ ಹೊಂದಿರುವ ಸರ್ಕಾರಿ ಶಾಲೆಗೆ ಇದೆಂಥಾ ದುಸ್ಥಿತಿ
ಗದಗ ಸರ್ಕಾರಿ ಶಾಲೆ
Edited By:

Updated on: Sep 03, 2025 | 7:40 PM

ಗದಗ, ಸೆಪ್ಟೆಂಬರ್​ 03: ಸರ್ಕಾರಿ ಶಾಲೆ (government school) ಅಂದರೆ ಸಾಕು ಮೂಗು ಮುರಿಯುವ ಜನರೇ ಜಾಸ್ತಿ. ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೇ ಬೀಗ ಹಾಕುವ ಹಂತಕ್ಕೆ ತಲುಪಿವೆ. ಆದರೆ ಈ ಶಾಲೆಯಲ್ಲಿ ಭರಪೂರ ವಿದ್ಯಾರ್ಥಿಗಳ (students) ಸಂಖ್ಯೆ ಇದೆ. ರಾಜ್ಯದಲ್ಲೇ ಅತೀ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಇಲ್ಲಿ ಕನಿಷ್ಠ ಮೂಲಸೌಕರ್ಯ  ಇಲ್ಲದೇ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಬೀಳುವ ಹಂತದಲ್ಲಿರುವ ಕಟ್ಟಡದ ಕೆಳಗೆ ಜೀವಭಯದಲ್ಲಿ ಮಕ್ಕಳು ಪಾಠ ಕೇಳುವ ದುಸ್ಥಿತಿ ಇದೆ. ಕುರಿ ಹಿಂಡಿನಂತೆ ಮಕ್ಕಳ ತುಂಬಲಾಗಿದೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಣ ಸಚಿವರೇ ಈ ಸರ್ಕಾರಿ ಶಾಲೆ ದುಸ್ತಿತಿ ನೋಡಿ ಅಂತ ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಸರ್ಕಾರಿ ಶಾಲೆಯ ದುಸ್ಥಿತಿಗೆ ಹಿಡಿದ ಕೈಗನ್ನಡಿ. ವಿಚಿತ್ರ ಅಂದರೆ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ತರಗತಿವರೆಗೆ ಬರೊಬ್ಬರಿ 380 ವಿದ್ಯಾರ್ಥಿಗಳು ಇದ್ದಾರೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮಕ್ಕಳ ಸಂಖ್ಯೆ ಇರುವ ಸರ್ಕಾರಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ ರಾಜ್ಯದಲ್ಲೇ ಅತೀ ಹೆಚ್ಚು ಮಕ್ಕಳಿರುವ 4ನೇ ಸ್ಥಾನದಲ್ಲಿದೆ.

ಸದ್ಯ ಇಂತಹ ಶಾಲೆ ಅವ್ಯವಸ್ಥೆ ಆಗರವಾಗಿವೆ. ಕನಿಷ್ಠ ಮೂಲಸೌಕರ್ಯವೂ ಇಲ್ಲದೇ ಬಡ ಮಕ್ಕಳ ಶಿಕ್ಷಣ ಅಧೋಗತಿಗೆ ತಲುಪಿದೆ. 380 ಮಕ್ಕಳಿಗೆ ಈ ಶಾಲೆಯಲ್ಲಿ ಕೇವಲ ನಾಲ್ಕು ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಶಿಕ್ಷಕರು ಕೂಡ ನಾಲ್ವರು ಮಾತ್ರ. ಇರುವ ನಾಲ್ಕು ಕೊಠಡಿಗಳು ಮಳೆ ಬಂದರೆ ಸೋರುತ್ತಿವೆ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ಮಕ್ಕಳ ಶಿಕ್ಷಣ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ ಅಂತ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮಂಡ್ಯ: ಮೊಟ್ಟೆ ಕೊಟ್ಟಿದ್ದಕ್ಕೆ ಆಲಕೆರೆ ಸರ್ಕಾರಿ ಶಾಲೆ ತೊರೆದ 70 ವಿದ್ಯಾರ್ಥಿಗಳು!

ಒಂದು ಕೊಠಡಿಯಲ್ಲಿ ಮೂರು ಕ್ಲಾಸ್​​ನ ಮಕ್ಕಳು ಕುಳಿತುಕೊಂಡು ಪಾಠ ಕೇಳಬೇಕಾಗಿದ್ದು, ಬಡ ಮಕ್ಕಳ ಶಿಕ್ಷಣದ ವ್ಯವಸ್ಥೆ ಇಷ್ಟೇನಾ ಎನ್ನುವಂತಿದೆ. ಒಂದೊಂದು ಬೆಂಚ್ ಮೇಲೆ ಮೂರು ಮಕ್ಕಳು ಕುಳಿತುಕೊಳ್ಳುತ್ತಾರೆ. ಬೆಂಚ್ ಸಾಲದ್ದಕ್ಕೆ ನೆಲದ ಮೇಲೆ ಕುಳಿತು ಮಕ್ಕಳು ಪಾಠ ಕೇಳುತ್ತಿದ್ದಾರೆ. ಶಿಕ್ಷಕರಿಗೆ ಸರಿಯಾಗಿ ನಿಂತು ಪಾಠ ಮಾಡದ ಸ್ಥಿತಿ ಇದೆ.

ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇಲ್ಲಿನ ಅವ್ಯವಸ್ಥೆ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನೂ ಈಗಲೋ ಆಗಲೋ ಕುಸಿದು ಬೀಳುವ ಸಭಾಮಂಟಪದ ಕೆಳಗಡೆಯೇ ಮಕ್ಕಳ ಆಟ, ಪಾಠ ನಡೆಯುತ್ತೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ದೊಡ್ಡ ದುರಂತವೇ ನಡೆಯುತ್ತೆ. ಇನ್ನೂ ಶಿಥಿಲಗೊಂಡ ಎಂಟು ಕೊಠಡಿಗಳು ಡೆಮಾಲಿಷ್ ಮಾಡಲು ಮಾರ್ಕ್ ಮಾಡಲಾಗಿದೆ. ಆ ಕೆಲಸವೂ ಇನ್ನೂ ಆಗಿಲ್ಲ. ಈ ಡೇಂಜರ್ ಶಾಲೆಯಲ್ಲೇ ಮಕ್ಕಳ ಪಾಠ ನಡೆಯುತ್ತಿದೆ. ಹೀಗಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಶಾಲೆಯತ್ತ ಗಮನ ಹರಿಸಬೇಕು ಎಂದು ಎಸ್ಡಿಎಂಸಿ ಕಮಿಟಿ ಅಧ್ಯಕ್ಷ ಶರಣಪ್ಪ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಸೇರಿದಂತೆ ಹಲವು ಶಿಫಾರಸು ಮಾಡಿದ ಎಸ್​ಇಪಿ

ಇನ್ನೂ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಎರಡು ಕೊಠಡಿಗಳು ವಿವೇಕ ಯೋಜನೆಯಡಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿ ಇನ್ನುಳಿದ ಕಾಮಗಾರಿ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿವೆ ಅಂತ ಕಥೆ ಹೇಳುತ್ತಿದ್ದಾರೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲಿ. ಕಳೆದು ಎರಡ್ಮೂರು ವರ್ಷಗಳ ಸಮಸ್ಯೆ. ಆದರೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಬಡ ಮಕ್ಕಳ ಶಿಕ್ಷಣಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಒಟ್ಟಾರೆಯಾಗಿ ಬಾಲೆಹೊಸುರ ಗ್ರಾಮದ ಸರ್ಕಾರಿ ಶಾಲೆಯ ಅದ್ವಾನ ಸ್ತಿತಿಗೆ ಯಾವಾಗ ಮುಕ್ತಿ ಸಿಗುತ್ತದೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us