ಗದಗ, ಮಾರ್ಚ್ 19: ಲಕ್ಷ್ಮೇಶ್ವರ (Lakshmeshwara) ತಾಲೂಕಿನ ಆದರಹಳ್ಳಿ ಗ್ರಾಮದ ಸುತ್ತಮುತ್ತ ಸರ್ಕಾರಿ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮವಾಗಿ ನಡೆಯುವ ನಿತ್ಯ ಬ್ಲಾಸ್ಟಿಂಗ್ ಗ್ರಾಮದ ಜನರಲ್ಲಿ ನಡುಕು ಹುಟ್ಟಿಸಿದೆ. ಇದು ಆ ಗ್ರಾಮದ ಜನರು ಅಕ್ಷರಶಃ ಕಂಗಾಲಾಗುವಂತೆ ಮಾಡಿದೆ. ಭಾರಿ ಪ್ರಮಾಣದ ಅಕ್ರಮ ಬ್ಲಾಸ್ಟಿಂಗ್ಗೆ ಮನೆಗಳ ಗೋಡೆಗಳು ಬಿರುಕು ಬಿಡುತ್ತಿದ್ದು, ಶಬ್ಧಕ್ಕೆ ಮನೆಗಳು ಅದುರುತ್ತಿವೆ. ಈ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿ ಅಂತ ಗಣಿ, ಪೊಲೀಸ್, ಕಂದಾಯ ಇಲಾಖೆ (Revenue Department) ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಡೆ ಜನರಲ್ಲಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದರಹಳ್ಳಿ ಗ್ರಾಮದಲ್ಲಿ ಬಡ ಜನರು ಸಾಲ ಮಾಡಿ ನಿರ್ಮಾಣ ಮಾಡಿದ ಮನೆಗಳು 2-3 ವರ್ಷದಲ್ಲೇ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಡುತ್ತಿವೆ. ಇದರಿಂದ ಮನೆಗಳು ಕುಸಿಯುವ ಹಂತಕ್ಕೆ ತಲುಪಿದ್ದು, ಭಯದಲ್ಲೇ ಗ್ರಾಮಸ್ಥರು ಬದುಕುವಂತಾಗಿದೆ.
ಆದರಹಳ್ಳಿ ಗ್ರಾಮದಲ್ಲಿ ಬರೊಬ್ಬರಿ 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ದೊಡ್ಡ ಪ್ರಮಾಣದ ಬ್ಲಾಸ್ಟಿಂಗ್ ಇಡೀ ಗ್ರಾಮ ಅದುರುತ್ತಿದೆ. ಬ್ಲಾಸ್ಟಿಂಗ್ ವೇಳೆ ಯಾವಾಗ ಮನೆಗಳು ಕುಸಿಯತ್ತವೆ ಗೊತ್ತಿಲ್ಲ. ಬಿರುಕು ಬಿಟ್ಟ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ. ಏನಾದ್ರೂ ದುರಂತ ಆದರೆ, ಜಿಲ್ಲಾಡಳಿತವೇ ಹೊಣೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲ್ಲಂಗಡಿ ಮಾರಾಟಕ್ಕೆ ಮಾರುಕಟ್ಟೆ ಅಖಾಡಕ್ಕಿಳಿದ ರೈತರು, ದಲ್ಲಾಳಿಗಳು ಕಂಗಾಲು
ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೂ, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಬ್ಲಾಸ್ಟ್ಗೆ ಅಧಿಕಾರಿಗಳ ಕುಮ್ಮಕ್ಕು ಇರುವ ಅನುಮಾನವಿದೆ. ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಗಳೇ ನಮ್ಮೂರಿಗೆ ಭೇಟಿ ನೀಡಬೇಕು. ಇಲ್ಲಿನ ಸ್ಥಿತಿಗತಿಯನ್ನು ಗಮನಿಸಿ, ನಮ್ಮ ಸಹಾಯಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
Published On - 2:38 pm, Wed, 19 March 25