ಕಪ್ಪಗಿದ್ದೀಯಾ ಅಂತ ಅತ್ತೆ, ಭಾವನಿಂದ ಸೂಸೆಗೆ ಕಿರುಕುಳ: ಮನನೊಂದು ನವವಿವಾಹಿತೆ ಆತ್ಮಹತ್ಯೆ
ಗದಗಿನಲ್ಲಿ ನವವಿವಾಹಿತೆಯೊಬ್ಬರು ತನ್ನ ಅತ್ತೆ ಮತ್ತು ಭಾವನ ವರ್ಣಭೇದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರುವಂತಹ ಘಟನೆ ನಡೆದಿದೆ. ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಸದ್ಯ ಅತ್ತೆ ಮತ್ತು ಭಾವನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳ ಕುಟುಂಬಸ್ಥರು ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.

ಗದಗ, ಏಪ್ರಿಲ್ 19: ಅವಳು ಸುಂದರ ಕನಸುಗಳನ್ನು ಕಟ್ಟಿಕೊಂಡು ಹೊಸದಾಗಿ ಮದುವೆಯಾಗಿದ್ದಳು. ಆದರೆ ಮದುವೆಯಾಗಿ ಕೇವಲ ನಾಲ್ಕು ತಿಂಗಳಲ್ಲಿ ಸಾವಿನ (death) ಮನೆ ಸೇರಿದ್ದಾಳೆ. ನವ ವಿವಾಹಿತೆ ಕಪ್ಪಾಗಿದ್ದಾಳೆ ಎಂದು ಅತ್ತೆ ಹಾಗೂ ಭಾವ ಪದೇ ಪದೇ ಕಿರುಕುಳ ನೀಡುತ್ತಿದ್ದರಂತೆ. ವರ್ಣಭೇದಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಅತ್ತೆ ಹಾಗೂ ಭಾವನೇ ಕಾರಣ ಅಂತ ಡೆತ್ ನೋಟ್ (Death note) ಬರೆದಿಟ್ಟಿದ್ದು, ಇದೀಗ ಕಿರುಕುಳ ನೀಡದ ಅತ್ತೆ ಹಾಗೂ ಭಾವ ಜೈಲು ಸೇರಿದ್ದಾರೆ.
ವರ್ಣಭೇದ ಕಿರುಕುಳಕ್ಕೆ ನವ ವಿವಾಹಿತೆ ಆತ್ಮಹತ್ಯೆ
ಕನ್ಯೆ ಸಿಗುತ್ತಿಲ್ಲವೆಂದು ಅದೆಷ್ಟೋ ಹುಡುಗರು ಪರದಾಡುತ್ತಿದ್ದಾರೆ. ಅದೆಷ್ಟೋ ಕುಟುಂಬಸ್ಥರು ಕನ್ಯೆ ಸಿಗಲಿ ಎಂದು ದೇವರ ಮೊರೆ ಕೂಡ ಹೋಗ್ತಾಯಿದ್ದಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಗನಿಗೆ ಕಂಡ ಕಂಡಲ್ಲಿ ಕನ್ಯೆ ಹುಡುಕಿದ ತಾಯಿಯೇ, ಇದೀಗ ಆತನ ಬಾಳಿಗೆ ವಿಲನ್ ಆಗಿದ್ದಾರೆ. ಹೊಸದಾಗಿ ಮದುವೆ ಮಾಡಿದ ಮಗನ ಹೆಂಡತಿ ಕಪ್ಪಾಗಿದ್ದಾಳೆ ಎಂದು ಕಿರುಕುಳ ನೀಡಿದ್ದಾರೆ. ಅತ್ತೆಯ ವರ್ಣಭೇದ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತೆ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಮಂಗನ ಕಾಯಿಲೆಗೆ 8 ವರ್ಷದ ಬಾಲಕ ಸಾವು, ವರದಿ ನೀಡಲು ಆರೋಗ್ಯ ಇಲಾಖೆಗೆ ಸೂಚನೆ
ಗದಗನ ಬೆಟಗೇರಿಯ ಶರಣಬಸವೇಶ್ವರ ನಗರದ ನಿವಾಸಿಯಾದ ಅಮರೇಶ್ ಹಾಗೂ ಬಳ್ಳಾರಿ ಮೂಲದ ಪೂಜಾ ಜೊತೆಗೆ ನಾಲ್ಕು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆಯಾಗಿತ್ತು. ಆದರೆ ಮದುವೆಯಾದ ಹೊಸದರಲ್ಲಿ ಅತ್ತೆ ಶಶಿಕಲಾ ಹಾಗೂ ಭಾವ ವೀರನಗೌಡ ನೀನು ಕಪ್ಪಾಗಿದ್ದಿಯಾ, ನಮ್ಮ ಅಮರೇಶನಿಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗುತ್ತಿದ್ದಳು ಎಂದು ಕಿರುಕುಳ ನೀಡಿದ್ರಂತೆ. ಹೀಗಾಗಿ ಪದೇ ಪದೇ ಈ ರೀತಿಯ ವರ್ಣಭೇದ ಹಿಂಸೆ ತಾಳದೇ ಮನನೊಂದ ಪೂಜಾ ಏಪ್ರಿಲ್ 15 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅತ್ತೆ ಶಶಿಕಲಾ ಹಾಗೂ ಭಾವ ವೀರನಗೌಡರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ.
ಇನ್ನೂ ಅತ್ತೆ ಹಾಗೂ ಭಾವ ಮೃತ ಪೂಜಾಳಿಗೆ ನೀನು ನೋಡಲು ಚೆನ್ನಾಗಿ ಇಲ್ಲ, ಅಡುಗೆ ಮಾಡಲು ಬರೋದಿಲ್ಲ ಎಂದು ನಿತ್ಯ ಕಿರುಕುಳ ನೀಡ್ತಾಯಿದ್ರಂತೆ. ಈ ವಿಚಾರವನ್ನು ಪೂಜಾ ತನ್ನ ಕುಟುಂಬಸ್ಥರಿ ಎಲ್ಲವನ್ನೂ ಕೇಳಿಕೊಂಡಿದ್ದಳು. ಅವರು ಕೂಡ ಸಮಾಧಾನ ಮಾಡಿದ್ರಂತೆ. ಆದರೆ ಪುನಃ ಕಿರುಕುಳ ನೀಡಿದಾಗ ನನ್ನ ಸಾವಿಗೆ ಅತ್ತೆ ಶಶಿಕಲಾ ಹಾಗೂ ಭಾವ ವೀರನಗೌಡ ಕಾರಣ. ಇವರಿಗೆ ಕಠಿಣ ಶಿಕ್ಷೆ ಆಗಬೇಕು. ಅಪ್ಪ ಅಮ್ಮ ಕ್ಷಮಿಸಿ ಎಂದು ಡೆತ್ ನೋಟ್ ಬರೆದು ಸಾವನ್ನಪ್ಪಿದ್ದಾರೆ. ಹೀಗಾಗಿ ಪೂಜಾಳ ಕುಟುಂಬಸ್ಥರು ಅತ್ತೆ ಹಾಗೂ ಭಾವನ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಪೂಜಾಳ ಗಂಡ ಅಮರೇಶ್ ಶಹಾಪುರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಅಮರೇಶ್ಗೆ ಬೇರೆ ಕಡೆ ವರ್ಗಾವಣೆಯಾಗಿದ್ದು, ಸ್ವಲ್ಪ ದಿನ ತಮ್ಮ ಮನೆಯಲ್ಲಿ ಇರುವಂತೆ ಹೇಳಿದ್ದನಂತೆ. ಇದೇ ಸಮಯದಲ್ಲಿ ಅತ್ತೆ ಭಾವನ ಕಿರುಕುಳ ಹೆಚ್ಚಾಗಿದ್ದು, ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅತ್ತೆ ಹಾಗೂ ಭಾವನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೃತಳ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಫೈರಿಂಗ್: ನಾಲ್ವರ ವಿರುದ್ಧ FIR ದಾಖಲು
ಮಗನಿಗೆ ಕನ್ಯೆ ಸಿಗುತ್ತಿಲ್ಲ ಎಂದು ಊರು ಅಲೆದಾಡಿದ ತಾಯಿ, ಕೊನೆಗೆ ಪೂಜಾಳ ಜೊತೆಗೆ ಮದುವೆ ಮಾಡಿದ್ದರು. ಆದರೆ ಹೊಸದಾಗಿ ಮದುವೆಯಾಗಿ ಮನೆಗೆ ಬಂದ್ ಪೂಜಾಳಿಗೆ ನೀನು ಕಪ್ಪಾಗಿದ್ಯಾ ಎಂದು ಕಿರುಕುಳ ನೀಡಿದ್ದರಿಂದ, ಪೂಜಾ ಸಾವಿನ ಮನೆ ಸೇರಿದ್ದಾಳೆ. ಮಾಡಿದ ತಪ್ಪಿಗೆ ಅತ್ತೆ ಹಾಗೂ ಭಾವ ಜೈಲು ಸೇರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:39 pm, Sat, 19 April 25