ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ಸಡಗರ: ಎತ್ತುಗಳ ಸಿಂಗರಿಸಿ ಸಂಭ್ರಮಿಸಿದ ರೈತರು, ಗಮನ ಸೆಳೆದ ಸಿಎಂ ಸಿದ್ದರಾಮಯ್ಯ ಬರಹ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 15, 2022 | 9:29 AM

ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಕರಿ ಹರಿಯುವ ಎತ್ತುಗಳ ಮೇಲೆ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಬರಹ ಎದ್ದು ಕಾಣುತ್ತಿತ್ತು.

ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ಸಡಗರ: ಎತ್ತುಗಳ ಸಿಂಗರಿಸಿ ಸಂಭ್ರಮಿಸಿದ ರೈತರು, ಗಮನ ಸೆಳೆದ ಸಿಎಂ ಸಿದ್ದರಾಮಯ್ಯ ಬರಹ
ಗದಗ ಜಿಲ್ಲೆಯಲ್ಲಿ ಕಾರ ಹುಣ್ಣಿಮೆ ಸಂಭ್ರಮ
Follow us on

ಗದಗ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬುಧವಾರ ಕಾರ ಹುಣ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ವರ್ಷವಿಡೀ ಶ್ರಮವಹಿಸಿ, ರೈತನಿಗೆ ಬೆನ್ನುಕೊಟ್ಟು ದುಡಿಯುವ ಎತ್ತುಗಳನ್ನು ಕರಿ ಹರಿಯುವ ಮೂಲಕ ರೈತರು ಕೃತಜ್ಞತೆ ಸಲ್ಲಿಸಿದರು. ಮುಂಗಾರು ಹಂಗಾಮಿನ ಮೊದಲ ಹಬ್ಬವಾದ ಕಾರ ಹುಣ್ಣಿಮೆಯ ನಂತರ ರೈತರು ಕೃಷಿ ಸಿದ್ಧತೆ ಅರಂಭಿಸುತ್ತಾರೆ. ಕೃಷಿ ಜಗತ್ತಿನ ಆಧಾರ ಸ್ತಂಭವಾಗಿರುವ ಎತ್ತುಗಳಿಗೆ ಸ್ನಾನ ಮಾಡಿಸಿ, ಬಣ್ಣ-ಬಣ್ಣದ ಪೇಂಟು, ಬಲೂನುಗಳಲ್ಲಿ ಅಲಂಕರಿಸಿದರು. ಕಲಬುರಗಿ, ವಿಜಯಪುರ, ಯಾದರಿಗಿ, ರಾಯಚೂರು, ವಿಜಯಪುರ, ಬೆಳಗಾವಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳ ಗ್ರಾಮಗಳಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಬಹುತೇಕ ಗ್ರಾಮಗಳ ಅಗಸಿಯಲ್ಲಿ ಗ್ರಾಮಸ್ಥರು ಮಾವಿನ ತೋರಣ ಕಟ್ಟಿ, ಸಿಂಗಾರಗೊಂಡಿದ್ದ ಎತ್ತುಗಳನ್ನು ಓಡಿಸಲಾಯಿತು. ಕರಿ ಹರಿಯುವ ದೃಶ್ಯ ಎಲ್ಲರ ಗಮನ ಸೆಳೆಯಿತು.

ತಿಮ್ಮಾಪುರ: ಗಮನ ಸೆಳೆದ ಬರಹ

ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಕರಿ ಹರಿಯುವ ಎತ್ತುಗಳ ಮೇಲೆ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಬರಹ ಎದ್ದು ಕಾಣುತ್ತಿತ್ತು. ಒಂದು ಹೋರಿ ಮೇಲೆ, ‘ಮುಂದಿನ 2023ರ ಸಿಎಂ ಸಿದ್ದರಾಮಯ್ಯ’ ಎಂದು ರೈತರು ಬರೆದಿದ್ದರು. ಇನ್ನೊಂದು ಹೋರಿಯ ಮೇಲೆ ‘ರೋಣ ವಿಧಾನಸಭಾ ಕ್ಷೇತ್ರದ ಮುಂದಿನ ಎಂಎಲ್​ಎ ಜಿ.ಎಸ್.ಪಾಟೀಲ’ ಎನ್ನುವ ಬರಹ ಇತ್ತು.

ಇವು ಬಸಪ್ಪ-ಮಾಯಮ್ಮ ಅವರಿಗೆ ಸೇರಿದ ಹೋರಿಗಳು. ಕರಿ ಹರಿಯಲು ನಡೆದ ಸ್ಪರ್ಧೆಯಲ್ಲಿ ಒಟ್ಟು ಐದು ಹೋರಿಗಳು ಭಾಗವಹಿಸಿದ್ದವು. ಅದರಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬರೆದಿದ್ದ ಹೋರಿಯು ಪ್ರಥಮ ಸ್ಥಾನ ಪಡೆದು ಕರಿ ಹರಿಯಿತು. ‘ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ಒಳ್ಳೆಯ ಭವಿಷ್ಯವಿದೆ’ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿ ಬಂತು. ಕರಿ ಹರಿದ ಹೋರಿಗಳಿಗೆ ಪೂಜೆ ಮಾಡಿದ ರೈತರು ಊರ ತುಂಬಾ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಇದನ್ನೂ ಓದಿ: ಎತ್ತುಗಳಿಗೆ ಕೃತಜ್ಞತೆ ಹೇಳುವ ಕಾರ ಹುಣ್ಣಿಮೆ; ಏನಿದರ ವಿಶೇಷತೆ?

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ