
ಗದಗ, (ಫೆಬ್ರವರಿ 19): ಜಿಲ್ಲೆಯಲ್ಲಿ ಹಿಂದೂ ದೇವರಗಳ (Hindu God) ಮೇಲಿನ ದಾಳಿ ಮುಂದುವರೆದಿದೆ. ಮೊನ್ನೇ ಶಿವರಾತ್ರಿ ಸಂಭ್ರಮದ ಮಧ್ಯೆ ದುಷ್ಕರ್ಮಿಗಳು ಶಿವಲಿಂಗ, ಅದರ ಪಾಣಿಪೀಠ ಮತ್ತು ನಂದಿ ವಿಗ್ರಹವನ್ನು ಭಗ್ನಗೊಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ದೇವರು ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳು ಹಿಂದೂ ದೇವರುಗಳನ್ನು ಟಾರ್ಗೆಟ್ ಮಾಡಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಮಲ್ಲಿಕಾರ್ಜುನಪುರದ ಗಾಳಿ ಬಸವೇಶ್ವರ ದೇವಸ್ಥಾನ ಶಿವಲಿಂಗ, ಪಾಣಿಪೀಠ ಹಾಗೂ ಆದರಳ್ಳಿ ಸಮೀಪದ ದಂಡೇರಿ ಮರಿಯಮ್ಮ ದೇವರುಗಳ ಮೂರ್ತಿ ಭಗ್ನಗೊಳಿಸಿದ್ದಾರೆ. ಇನ್ನು ಮರಿಯಮ್ಮ ದೇವಿ ಮುಖಕ್ಕೆ ಕೀಚಕರು ಮಸಿ ಬಳಿದು ಮುಖ ಧ್ವಂಸಗೊಳಿಸಿದ್ದಾರೆ. ದುಷ್ಟರ ದುಷ್ಕೃತ್ಯಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾತನ ಕಾಲದ ಐತಿಹಾಸಿಕ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕೃತ್ಯ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿರುವ ಐತಿಹಾಸಿಕ ದೇವಸ್ಥಾನಗಳಲ್ಲಿ ಧ್ವಂಸ ಕೃತ್ಯಗಳು ನಡೆದಿವೆ. ಈವರೆಗೂ ಶಿಂಗಟಾಲೂರು ಘಟನೆಗೆ ಕಾರಣರಾದ ಆರೋಪಿಗಳ ಪತ್ತೆ ಆಗಿಲ್ಲ. ಇದೀಗ ಮತ್ತೆ ಎರಡು ಕಡೆಗಳಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಾಗಿದ್ದು, ಪೊಲೀಸರು ಈ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ.