
ಗದಗ, ಮಾರ್ಚ್ 24: ಇಂದಿಗೂ ಸಮಾಜದಲ್ಲಿ ಜಾತಿಯಲ್ಲಿ ಮೇಲು ಕೀಳು ಎಂಬ ಭಾವನೆ ಜೀವಂತವಾಗಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಕಂಡು ಬಂದಿವೆ. ಈ ಹಿಂದೆಯೂ ಜಾತಿ ವಿಷಯಕ್ಕೆ, ಅಸ್ಪರ್ಷತೆ ವಿಚಾರಕ್ಕೆ ಸವರ್ಣೀಯರು ದಲಿತರನ್ನು ನಿಂದಿಸಿದ, ಅವರೊಂದಿಗೆ ಹೊಡೆದಾಟಕ್ಕಿಳಿದ (caste conflict) ನಿದರ್ಶನಗಳಿವೆ. ಆದರೆ ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದ ಎಂಬ ವಿಚಾರಕ್ಕೆ ಮಾರಾಮಾರಿ ನಡೆದಿದ್ದು, 24 ಜನರು ಗಾಯಗೊಂಡ ಘಟನೆ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ.
ಎಸ್ಟಿ ಸಮುದಾಯದ ಜಮೀನಿನಲ್ಲಿ ಎಸ್ಸಿ ಸಮುದಾಯದ ಯುವಕ ನೀರು ಕುಡಿದ ವಿಚಾರಕ್ಕೆ ಉದ್ಭವಿಸಿದ ವಾಗ್ವಾದ ತೀವ್ರಗೊಂಡು, ಎರಡೂ ಸಮುದಾಯಗಳ ನಡುವೆ ಹೊಡೆದಾಟ ನಡೆದಿದೆ. ಕೊಡ್ಲಿ, ಬಡಿಗೆ ಮತ್ತು ಕಲ್ಲುಗಳನ್ನು ಬಳಸಿಕೊಂಡು ಒಬ್ಬರ ಮೇಲೊಬ್ಬರು ನಡೆಸಿದ ದಾಳಿಯಲ್ಲಿ ಎಸ್ಸಿ ಸಮುದಾಯದ ಮಹಿಳೆಯರು ಸೇರಿ ಒಟ್ಟು 24 ಮಂದಿ ಗಾಯಗೊಂಡಿದ್ದು, ಮೂವರ ತಲೆಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಕೈ-ಕಾಲು ಮುರಿದಿದ್ದು, ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಮೂರು ವಾರ್ಡ್ಗಳಿಗೆ ಪೊಲೀಸರು ಕಟ್ಟು ನಿಟ್ಟಿನ ಭದ್ರತೆ ಒದಗಿಸಿದ್ದಾರೆ.
ಇದನ್ನೂ ಓದಿ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ಲೂಟಿ! ಗುತ್ತಿಗೆ ನೌಕರ ಸೇರಿ ಏಳು ಮಂದಿ ಮೇಲೆ ಎಫ್ಐಆರ್
ಇನ್ನೊಂದೆಡೆ, ಎಸ್ಟಿ ಸಮುದಾಯದ ಒಂಬತ್ತು ಮಂದಿ ಗಾಯಗೊಂಡಿದ್ದು, ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಹಳೆಯ ವೈಷಮ್ಯವೂ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಎಸಿ ಗಂಗಪ್ಪ ಗಾಯಾಳುಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಶಾಂತಿ ಸಭೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.