ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ಲೂಟಿ! ಗುತ್ತಿಗೆ ನೌಕರ ಸೇರಿ ಏಳು ಮಂದಿ ಮೇಲೆ ಎಫ್ಐಆರ್
ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ರೂ.ಗೂ ಹೆಚ್ಚು ಆರ್ಥಿಕ ಅವ್ಯವಹಾರ ಬೆಳಕಿಗೆ ಬಂದಿದೆ. ನಾಲ್ಕು ವರ್ಷದ ಅವಧಿಯಲ್ಲಿ ಅಧಿಕಾರಿಗಳ ನಕಲಿ ಸಹಿ ಬಳಸಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎನ್ನಲಾಗಿದೆ. ಆಂತರಿಕ ಆಡಿಟ್ ಮೂಲಕ ಈ ಹಗರಣ ಪತ್ತೆಯಾಗಿದ್ದು, 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಐಡಿಗೆ ಪ್ರಕರಣ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಬಳ್ಳಾರಿ, ಮಾರ್ಚ್ 24: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳ್ಳಾರಿ ವಲಯ ಕಚೇರಿಯಲ್ಲಿ ಭಾರೀ ಆರ್ಥಿಕ ಅವ್ಯವಹಾರ ಬೆಳಕಿಗೆ ಬಂದಿದೆ. ಈ ವರ್ಷದ ಆಂತರಿಕ ಆಡಿಟ್ ವೇಳೆ ಒಟ್ಟೂ 16 ಕೋಟಿ ರೂ.ಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆ ಮಂಡಳಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದು, ಏಳು ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ.
ಅಧಿಕಾರಿಗಳ ಸಹಿ ಫೋರ್ಜರಿ ಮಾಡಿದ್ದ ಆರೋಪಿ
2022ರಿಂದ 2026ರವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 16 ಕೋಟಿ 17 ಲಕ್ಷ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಕೆಐಎಡಿಬಿ ಗುತ್ತಿಗೆ ನೌಕರ ಸಂತೋಷ್ ಕುಮಾರ್, ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿ ಏಳು ಜನರ ವಿರುದ್ಧ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಸಂತೋಷ್ ಕುಮಾರ್ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಆರೋಪಿಯು ಅಧಿಕಾರಿಗಳ ನಕಲಿ ಸಹಿ ಮಾಡಿ ಚೆಕ್ಗಳ ಮೂಲಕ ಹಣವನ್ನು ಹಲವು ಬಾರಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರತಿ ವರ್ಷವೂ ಆಡಿಟ್ ನಡೆದಿದ್ದರೂ ನಾಲ್ಕು ವರ್ಷಗಳ ಬಳಿಕ ಈ ಅವ್ಯವಹಾರ ಬೆಳಕಿಗೆ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯ ನಂತರವೇ ನಿಜಾಂಶ ಹೊರಬರಲಿದೆ ಎಂದು ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್ ತಿಳಿಸಿದ್ದಾರೆ.
ಎಸ್ಪಿ ಹೇಳಿದ್ದೇನು?
ಎಸ್ಪಿ ಹೇಳುವಂತೆ ಮಾರ್ಚ್ 19ರಂದು ಕೆಐಎಡಿಬಿ ಅಧಿಕಾರಿಗಳು ದೂರು ನೀಡಿದ ಬಳಿಕ ಪ್ರಕರಣ ಬಹಿರಂಗವಾಗಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಆರೋಪಿಗಳ ಪತ್ತೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಂಚನೆಯ ಮೊತ್ತ 15 ಕೋಟಿ ರೂ. ದಾಟಿರುವುದರಿಂದ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಬೇಕಾಗುತ್ತದೆ ಎಂದ ಎಸ್ಪಿ, ಈ ಕುರಿತು ಮುಂದಿನ ಪರಿಶೀಲನೆ ಮಾಡಿ ಟ್ರಾನ್ಸ್ಫರ್ ಮಾಡುತ್ತೇವೆ. ಕೆಐಡಿಬಿ ಆಂತರಿಕ ಆಡಿಟ್ ವೇಳೆ ಈ ಹಗರಣ ಬೆಳಕಿಗೆ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ ರಹಸ್ಯ ಕ್ಯಾಮರಾಗಳು, ಅಧ್ಯಾತ್ಮದ ಹೆಸರಿನಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋ ಮಾಡಿದ್ದ ಜ್ಯೋತಿಷಿ ಅರೆಸ್ಟ್
ಒಟ್ಟೂ ನಾಲ್ಕು ವರ್ಷದ ಅವಧಿಯಲ್ಲಿ 16 ಕೋಟಿ 17 ಲಕ್ಷ ರೂ.ಗಳ ಅಕ್ರಮ ವಹಿವಾಟು ನಡೆದಿದೆ ಎಂದ ಎಸ್ಪಿ, ಅದನ್ನು ಹಾಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ವರದಿ ಮಾಡಿ ದೂರು ದಾಖಲಿಸಿದ್ದಾರೆ. ಅಲ್ಲಿನ ಗುತ್ತಿಗೆ ನೌಕರ ಚೆಕ್ ಬುಕ್ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ. ಇದೇ ವೇಳೆ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಧ್ಯಕ್ಕೆ ಯಾವ ಆರೋಪಿಗಳೂ ಸೆರೆ ಸಿಕ್ಕಿಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:32 am, Tue, 24 March 26