
ಗದಗ, ಫೆಬ್ರವರಿ 17: ಸೂಕ್ಷ್ಮ ಕೆತ್ತನೆಯ ಸುಂದರ ಶಿಲ್ಪಕಲೆ ಹೊಂದಿರುವ ಮಾಣಿಕ್ಯೇಶ್ವರ ದೇವಸ್ಥಾನ. ಕಲ್ಯಾಣ ಚಾಲುಕ್ಯ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ವಿಹಂಗನೋಟ. ಮುಸುಕಿನ ಬಾವಿಯಲ್ಲಿ 12 ಶಿವಲಿಂಗ ಸ್ಥಾಪನೆಯ ಪುಟ್ಟ ಪುಟ್ಟ ದೇವಸ್ಥಾನಗಳ ಸಂಕೀರ್ಣ. ದೇವಸ್ಥಾನದ ಶಿಲ್ಪಕಲೆ ಹಾಗೂ ಬಾವಿನ ಅದ್ಭುತ ಶೈಲಿ ಸಾರಿ ಸಾರಿ ಹೇಳುತ್ತಿವೆ ಗದಗ (Gadag) ಜಿಲ್ಲೆಯ ಲಕ್ಕುಂಡಿ ಗತವೈಭವ. ಲಕ್ಕುಂಡಿ ಎಂದರೆ ಅದು ಐತಿಹಾಸಿಕ ದೇವಾಲಯಗಳ ಸ್ವರ್ಗ. ಶಿಲ್ಪಕಲೆಗಳ ಬೀಡು. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಂದು ಕಾಲದಲ್ಲಿ ಕಲ್ಯಾಣ ಚಾಲುಕ್ಯರ ವೈಭವದ ಕೇಂದ್ರವಾಗಿದ್ದ ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳು ಹಾಗೂ ಪುರಾತನ ಬಾವಿಗಳು ಗತ ವೈಭವವನ್ನು ಇಂದಿಗೂ ಜೀವಂತವಾಗಿ ಹೇಳುತ್ತಿವೆ. ಲಕ್ಕುಂಡಿ ಗ್ರಾಮದ ಪ್ರಮುಖ ಆಕರ್ಷಣೆಯಾಗಿ ಮಾಣಿಕ್ಯೇಶ್ವರ ದೇವಾಲಯ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಕಲ್ಯಾಣ ಚಾಲುಕ್ಯರು ನಿರ್ಮಾಣ ಮಾಡಿದ ಈ ಅಮೋಘ, ಅದ್ಭುತ, ಸುಂದರ ಕೆತ್ತನೆಯ ದೇವಾಲಯವು ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿದ್ದು, ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಸಾಲಿಗ್ರಾಮ ಶಿಲೆಯಿಂದ ಕೆತ್ತನೆ ಮಾಡಲಾದ ಅಪರೂಪದ ಶಿವಲಿಂಗವು ದೇವಾಲಯದ ವಿಶೇಷತೆಯಾಗಿದೆ. ದೇವಾಲಯದ ಗೋಡೆಗಳ ಮೇಲೆ ಕಂಡುಬರುವ ಸೂಕ್ಷ್ಮ ಕೆತ್ತನೆಗಳು ಮತ್ತು ಶಿಲ್ಪಕಲೆಗಳು ಆ ಕಾಲದ ಶಿಲ್ಪಿಗಳ ಕೈಚಾಣಾಕ್ಷತೆಯನ್ನು ಸಾರುತ್ತವೆ. ದೇವಾಲಯದ ಮುಂಭಾಗದಲ್ಲಿರುವ ಮುಸುಕಿನ ಬಾವಿಯೂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಎರಡು ಅಂತಸ್ತಿನಂತೆ ಕಾಣುವ ಕಂಬಗಳು, ಶಿಲ್ಪಕಲೆಯಿಂದ ಕೆತ್ತನೆ ಮಾಡಲಾದ ವಿನ್ಯಾಸಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಮಾಣಿಕ್ಯೇಶ್ವರ ದೇವಸ್ಥಾನದ ಮುಂದಿನ ಎರಡು ಅಂತಸ್ತಿನ ಮುಸುಕಿನ ಬಾವಿಯ ವಿಹಂಗನೋಟ ಸಾಕಷ್ಟು ಆಕರ್ಷಣೆಯಾಗಿದೆ. 12 ಜ್ಯೋತಿರ್ಲಿಂಗ ಗೋಪುರಗಳು, ಬಾವಿಯೊಳಗೆ ಮೆಟ್ಟಿಲುಗಳು, ಶಿಲ್ಪಕಲೆ ಅಬ್ಬಾ ಅದ್ಭುತ. ಅಷ್ಟೊಂದು ಅಮೋಘವಾಗಿ ನಿರ್ಮಾಣ ಮಾಡಲಾಗಿದೆ.
ಆದರೆ, ಪುರಾತನ ಕಾಲದ ಈ ಬಾವಿಯಲ್ಲಿ ಪಾಚಿ ಬೆಳೆದು, ಕಲುಷಿತ ನೀರು ನಿಂತಿದ್ದು, ನಿರ್ವಹಣೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆಕರ್ಷಣೆಯಾಗಿದ್ದರೂ, ಸುತ್ತಮುತ್ತಲಿನ ಅವ್ಯವಸ್ಥೆ ಪ್ರವಾಸಿಗರನ್ನು ನಿರಾಶೆಗೊಳಿಸುತ್ತಿದೆ. ದೇವಾಲಯ ಮತ್ತು ಬಾವಿಗೆ ತಲುಪುವ ಸರಿಯಾದ ರಸ್ತೆ ಇಲ್ಲದೆ ಸಮಸ್ಯೆ ಎದುರಾಗಿದೆ.
ಸ್ವಚ್ಛತೆಯ ಕೊರತೆ, ಪಾಚಿ ಕಟ್ಟಿದ ನೀರು ಮತ್ತು ನಿರ್ಲಕ್ಷ್ಯ ವಾತಾವರಣ ಇದೆ. ಅಭಿವೃದ್ಧಿ ಮಾಡುವ ಅಗತ್ಯ ಇದೆ. ದೇವಸ್ಥಾನದ ಒಳಗಡೆ ಲೈಟ್ ವ್ಯವಸ್ಥೆ ಇಲ್ಲದೆ ಪ್ರವಾಸಿಗಳು ಮೊಬೈಲ್ ಟಾರ್ಚ್ನಿಂದಲೇ ದೇವಸ್ಥಾನಗಳ ಸೌಂದರ್ಯ ಸವಿಯುವ ದುಃಸ್ಥಿತಿ ಇದೆ.
ಮಾಣಿಕ್ಯೇಶ್ವರ ದೇವಸ್ಥಾನ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಟ್ಟಿದೆ. ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ರಸ್ತೆ ಅಭಿವೃದ್ಧಿ, ಬಾವಿ ಸ್ವಚ್ಛತೆ ಹಾಗೂ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಆಗ ಮಾತ್ರ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.