ಸರ್ಕಾರದಲ್ಲಿ ಹಣವಿಲ್ಲ ಅಂತಾ ಕೆಲಸ ನೀಡದ ಪಿಡಿಓ: ಬೆಳ್ಳಂಬೆಳಗ್ಗೆ ರೊಚ್ಚಿಗೆದ್ದ ಜನ್ರಿಂದ ಪ್ರತಿಭಟನೆ, ಆಕ್ರೋಶ

ಭೀಕರ ಬರದಿಂದ ಜನರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ನರೇಗಾ ಯೋಜನೆಯಲ್ಲಿ ನೂರು ದಿನ ಕೆಲಸ ನೀಡಬೇಕೆಂಬ ಆದೇಶ ಇದ್ರೂ ಆ ಅಧಿಕಾರಿ ಡೋಂಟ್ ಕೇರ್ ಅಂದಿದ್ದಾರೆ. ಬೇರೆ ಪಂಚಾಯತಗಳಲ್ಲಿ ನೂರು ದಿನ ಕೆಲಸ ನೀಡಿದ್ದಾರೆ. ಆದರೆ ನಮ್ಮ ಪಂಚಾಯತ್​​ನಲ್ಲಿ ಕೆಲಸ ನೀಡುತ್ತಿಲ್ಲ ಅಂತ ಜಂತ್ಲಿ-ಶಿರೂರು ಗ್ರಾಮದಲ್ಲಿ ಕಾರ್ಮಿಕರು ಸೂಚ್ಯವಾಗಿ ತಮ್ಮ ದುಃಖ ಹೊರಹಾಕಿದ್ದಾರೆ.

ಸರ್ಕಾರದಲ್ಲಿ ಹಣವಿಲ್ಲ ಅಂತಾ ಕೆಲಸ ನೀಡದ ಪಿಡಿಓ: ಬೆಳ್ಳಂಬೆಳಗ್ಗೆ ರೊಚ್ಚಿಗೆದ್ದ ಜನ್ರಿಂದ ಪ್ರತಿಭಟನೆ, ಆಕ್ರೋಶ
ಸರ್ಕಾರದಲ್ಲಿ ಹಣವಿಲ್ಲ ಅಂತಾ ಕೆಲಸ ನೀಡದ ಪಿಡಿಓ
Edited By: ಸಾಧು ಶ್ರೀನಾಥ್​

Updated on: May 20, 2024 | 9:46 AM

ಗದಗ, ಮೇ 20: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ MGNREGA (Mahatma Gandhi National Rural Employment Guarantee Act 2005), ಮೊದಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಅಥವಾ NREGA ಎಂದು ಕರೆಯಲಾಗುತ್ತಿತ್ತು. ಈ ಯೋಜನೆಯು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಹಕ್ಕನ್ನು (Rural Employment Guarantee Acts) ಖಾತರಿಪಡಿಸುವ ಗುರಿಯನ್ನು ಹೊಂದಿರುವ ಭಾರತೀಯ ಸಮಾಜ ಕಲ್ಯಾಣ ಕ್ರಮವಾಗಿದೆ. ನರೇಗಾ ಯೋಜನೆ ಅಡಿ ವರ್ಷಕ್ಕೆ ನೂರು ದಿನ ಕೆಲಸ ನೀಡಬೇಕೆಂಬ ಆದೇಶ ಇದೆ. ಆದರೆ ಇದಕ್ಕೂ ಡೋಂಟ್ ಕೇರ್ ಎನ್ನುತ್ತಾರೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಅಧಿಕಾರಿಗಳು. ವಾರಾರಂಭದಲ್ಲಿ ಇಂದು ಬೆಳಗ್ಗೆ ಗದಗ ಜಿಲ್ಲೆಯಲ್ಲೂ ಇಂತಹ ಪ್ರಕರಣ ನಡೆದಿದ್ದು, ನರೇಗಾ ಯೋಜನೆಯಲ್ಲಿ ಕೆಲಸ ನೀಡದ ಗ್ರಾಮ ಪಂಚಾಯತ್​​ ಪಿಡಿಓ ( PDO) ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ರೊಚ್ಚಿಗೆದ್ದ ಜನರು ಗ್ರಾಮ ಪಂಚಾಯತ್​​ಗೆ ಮುತ್ತಿಗೆ ಹಾಕಿದ್ದಾರೆ. ಗ್ರಾಮ ಪಂಚಾಯತ ಪಿಡಿಓ ವಸಂತ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೀಕರ ಬರದಿಂದ ಜನರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ನರೇಗಾ ಯೋಜನೆ ಅಡಿಯಲ್ಲಿ ನೂರು ದಿನ ಕೆಲಸ ನೀಡಬೇಕೆಂಬ ಆದೇಶ ಇದ್ರೂ ಆ ಅಧಿಕಾರಿ ಡೋಂಟ್ ಕೇರ್ ಅಂದಿದ್ದಾರೆ. ಇದಕ್ಕೂ ಮುನ್ನ ಜಂತ್ಲಿ-ಶಿರೂರು ಗ್ರಾಮದಲ್ಲಿ ಸದರಿ ಪಿಡಿಓ ಅಧಿಕಾರಿ ನಾಮ್​ ಕೇ ವಾಸ್ತೆ ಕೇವಲ ಮೂರು ದಿನ ಕೆಲಸ ನೀಡಿ ಕೈ ತೊಳೆದುಕೊಂಡಿದ್ದಾರೆ. ಕೂಲಿ ಕಾರ್ಮಿಕರು ಅಧಿಕಾರಿಯನ್ನು ಭೇಟಿ ಮಾಡಿ ಕೆಲಸ ಕೇಳಿದ್ರೆ ಹಣವಿಲ್ಲ ಅಂತಾಯಿದ್ದಾರಂತೆ.

ಗ್ರಾಮ ಪಂಚಾಯತ ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ಕೂಲಿ ಕಾರ್ಮಿಕರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಸಲಕೆ, ಗುದ್ಲಿ, ಬುಟ್ಟಿಗಳ ಸಮೇತವಾಗಿ ಗ್ರಾಮ ಪಂಚಾಯತ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಿದ್ದಾರೆ. ಮಹಿಳೆಯರು ತಮ್ಮ ತಲೆಯ ಮೇಲೆ ಬುಟ್ಟಿಯನ್ನ ಇಟ್ಟಿಕೊಂಡು ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಲಾಲ್ ಬಾಗ್​ನಲ್ಲಿ ನೀರಿಲ್ಲದೆ ಒಣಗುತ್ತಿವೆ ಗಿಡಗಳು: ತೋಟಗಾರಿಕೆ ಇಲಾಖೆಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ

ಇದುವರಿಗೆ ಮಳೆ ಇಲ್ಲ. ಇತ್ತ ಕೆಲಸವೂ ಕೊಡುತ್ತಿಲ್ಲ ಅಂತ ಗ್ರಾಮದ ಕಾರ್ಮಿಕರು ಕಿಡಿಕಾರಿದ್ದಾರೆ. ಹೊಟ್ಟೆಗೆ ಏನು ಮಾಡೋಣ.. ದುಡಿಮೆ ಇಲ್ಲದೆ ಮಹಿಳೆಯರು ಕಂಗಾಲಾಗಿದ್ದಾರೆ. ಬೇರೆ ಪಂಚಾಯತಗಳಲ್ಲಿ ನೂರು ದಿನ ಕೆಲಸ ನೀಡಿದ್ದಾರೆ. ಆದರೆ ನಮ್ಮ ಪಂಚಾಯತ್​​ನಲ್ಲಿ ಕೆಲಸ ನೀಡುತ್ತಿಲ್ಲ ಅಂತ ಅವರು ಸೂಚ್ಯವಾಗಿ ತಮ್ಮ ದುಃಖ ಹೊರಹಾಕಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us