ಜಿಎಸ್​ಟಿ ಅಧಿಕಾರಿಗಳ ಬಂಧನ ಕೇಸ್​: ಮಹಿಳಾ ಅಧಿಕಾರಿ ಮನೆಯಲ್ಲಿ 32 ಮೊಬೈಲ್ ಪತ್ತೆ

ಬುಧವಾರ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ನಾಲ್ವರು ಜಿಎಸ್​ಟಿ ಅಧಿಕಾರಿಗಳನ್ನು ಬಂಧಿಸಿದ್ದರು. ಬಂಧನ ಬಳಿಕ ಅಧಿಕಾರಿಗಳನ್ನು ವಿಚಾರಣೆ ನಡೆಸಿದಾಗ ಹಲವು ವಿಚಾರ ಬಾಯಿ ಬಿಟ್ಟಿದ್ದಾರೆ. ಇನ್ನು ಓರ್ವ ಮಹಿಳಾ ಅಧಿಕಾರಿಯ ಮನೆಯಲ್ಲಿ 32 ಮೊಬೈಲ್​ ಸೇರಿದಂತೆ ಇನ್ನೂ ಅನೇಕ ವಸ್ತುಗಳು ಪತ್ತೆಯಾಗಿವೆ.

ಜಿಎಸ್​ಟಿ ಅಧಿಕಾರಿಗಳ ಬಂಧನ ಕೇಸ್​: ಮಹಿಳಾ ಅಧಿಕಾರಿ ಮನೆಯಲ್ಲಿ 32 ಮೊಬೈಲ್ ಪತ್ತೆ
ಸಿಸಿಬಿ
Follow us
| Updated By: ವಿವೇಕ ಬಿರಾದಾರ

Updated on: Sep 13, 2024 | 8:50 AM

ಬೆಂಗಳೂರು, ಸೆಪ್ಟೆಂಬರ್​​ 13: ನಾಲ್ವರು ಜಿಎಸ್​ಟಿ ಅಧಿಕಾರಿಗಳ (GST Officer) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿಯ ಮನೆಯಲ್ಲಿ 32 ಮೊಬೈಲ್, 50 ಚೆಕ್ ಬುಕ್ ಮತ್ತು ಎರಡು ಲ್ಯಾಪ್ ಟಾಪ್ ಪತ್ತೆಯಾಗಿವೆ. ಆಗಸ್ಟ್ 30 ರಂದು ಉದ್ಯಮಿ ಕೇಶವ್ ಎಂಬುವರ ಮನೆ ಮೇಲೆ ಜಿಎಸ್​ಟಿ ಅಧಿಕಾರಿಗಳು ದಾಳಿ ಮಾಡಿದ್ದರು. “ನಾವು, ಇಡಿ ಮತ್ತು ಜಿಎಸ್​​ಟಿಯವರು ಅಂತ ದಾಳಿ ಮಾಡಿದ ಅಧಿಕಾರಿಗಳು, ಉದ್ಯಮಿ ಕೇಶವ್ ಅವರ ಶೋರೂಂ, ಮನೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ನಡೆಸಿದ ಅಧಿಕಾರಿಗಳು, ಕೇಶವ್ ಸೇರಿದಂತೆ ಅವರ ಮನೆಯಲ್ಲಿದ್ದ ನಾಲ್ವರನ್ನು ಬಲವಂತವಾಗಿ ವಶಕ್ಕೆ ಪಡೆದು ಜೀವನ್ ಭೀಮಾನಗರ, ಇಂದಿರಾನಗರದ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದರು. ರಾತ್ರಿ ಪೂರ್ತಿ ಕೂಡಿ ಹಾಕಿ ಮೂರು ಕೋಟಿ ಹಣ ನೀಡುವಂತೆ ಉದ್ಯಮಿ ಕೇಶವ್​ ಅವರ ಮೇಲೆ ಹಲ್ಲೆ ಮಾಡಿದ್ದರು.

ಈ ವೇಳೆ ಭಯಗೊಂಡ ಉದ್ಯಮಿ ಕೇಶವ್, ರೋಷನ್ ಜೈನ್ ಎಂಬುವರಿಗೆ ವಾಟ್ಸಪ್​​​ ಕಾಲ್ ಮಾಡಿ ಮೂರು ಕೋಟಿ ಹಣ ತರುವಂತೆ ಹೇಳಿದ್ದರು. ಮರುದಿನ ರೋಷನ್ ಜೈನ್ ಅವರು ಮೂರು ಕೋಟಿ ಬದಲಿಗೆ ಒಂದುವರೆ ಕೋಟಿ ಹಣ ತಂದು‌ಕೊಟ್ಟಿದ್ದರು. ಬಳಿಕ ಜಿಎಸ್​ಟಿ ಅಧಿಕಾರಿಗಳು ಉದ್ಯಮಿ ಕೇಶವ್​ ಮತ್ತು ಅವರ ಕಡೆಯವರನ್ನು ಬಿಟ್ಟು ಕಳುಹಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹರಿಯಾಣ ಮೂಲದ ನಕ್ಸಲ್ ಬಂಧನ ಕೇಸ್​: ಅನಿರುದ್ಧ ರಾಜನ್​ ಪ್ರೇಯಸಿಗೆ ಸಿಸಿಬಿ ನೋಟಿಸ್​​

ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ತನಿಖೆಗೆ ಇಳಿದ್ದಿದ್ದರು. ತನಿಖೆ ವೇಳೆ, ಈ ನಾಲ್ವರು ಜಿಎಸ್​ಟಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ದಾಳಿ ನಡೆಸಿ ಒಂದುವರೇ ಕೋಟಿ ಹಣ ಪಡೆದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಂಟಲಿಜೆನ್ಸ್ ಆಫೀಸರ್ ಸೊನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮೋನೊಜ್ ಸೈನಿ, ಎಸ್​​​ಪಿ‌ (ಸೂಪರಿಂಡೆಂಟ್) ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ನಾಗೇಶ್ ಬಾಬು ಎಂಬ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು.

ಬಳಿಕ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಬಂಧಿತ ಅಧಿಕಾರಿಗಳ ನಿವಾಸದಲ್ಲಿ ತಪಾಸಣೆ ನಡೆಸಿದರು. ಮಹಿಳಾ ಅಧಿಕಾರಿ ಸೋನಾಲಿ ಅವರ ನಿವಾಸದಲ್ಲಿ 32 ಮೊಬೈಲ್, 50 ಚೆಕ್ ಬುಕ್ ಮತ್ತು ಎರಡು ಲ್ಯಾಪ್ ಟಾಪ್​ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ