ದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು ಸಂಸತ್ ಭವನದಲ್ಲಿ ಇಂದು ಭೇಟಿಯಾದ ಸಿಎಂ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ, ನೆರೆ ಹಾನಿ, ಪರಿಹಾರ ಕಾರ್ಯ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಸುಮಾರು 20 ನಿಮಿಷಗಳ ಸುದೀರ್ಘ ಚರ್ಚೆ ನಡೆಯಿತು ಅಂತಾ ಹೇಳಲಾಗಿದೆ.
ಈ ನಡುವೆ ಹೈಕಮಾಂಡ್ ಅನುಮತಿ ನೀಡಿದರೆ ಮಾತ್ರ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು ಕೇವಲ ಮೂವರು ಅಥವಾ ನಾಲ್ವರಿಗೆ ಮಾತ್ರ ಮಂತ್ರಿಯಾಗುವ ಅವಕಾಶ ದೊರೆಯಲಿದೆ ಎಂಬ ಮಾತು ಕೇಳಿಬಂದಿದೆ. ಜೊತೆಗೆ, ಅಧಿಕಾರಕ್ಕೇರಲು ನೆರವಾದವರಿಗೆ ಮೊದಲ ಆದ್ಯತೆ ಕೊಡಲಾಗುವುದು ಎಂಬ ಸುದ್ದಿ ಬಂದಿದೆ. ಹಾಗಾಗಿ, MTB ನಾಗರಾಜ್ ಮತ್ತು R.ಶಂಕರ್ಗೆ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ.
ಆದರೆ, ಸಂಪುಟದಿಂದ H ವಿಶ್ವನಾಥ್ ದೂರ ಸರಿಯುವುದು ಬಹುತೇಕ ಪಕ್ಕಾ ಎಂಬ ಮಾತು ಸಹ ಕೇಳಿಬಂದಿದೆ. ವಿಶ್ವನಾಥ್ ಸ್ಥಾನದಲ್ಲಿ ಪಕ್ಷದ ನಿಷ್ಠಾವಂತರಿಗೆ ಅವಕಾಶ ಕೊಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿದ್ದು ಶಾಸಕ ಅರವಿಂದ ಲಿಂಬಾವಳಿಗೆ ಈ ಬಾರಿ ಅವಕಾಶ ಸಿಗುವೆ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ದಲಿತ ಸಮುದಾಯವನ್ನು ಓಲೈಸುವ ಅವಕಾಶವಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಬಹುದು.
ರಾಜ್ಯದ ವಿಚಾರದಲ್ಲಿ ಮೋದಿ, ಅಮಿತ್ ಶಾ ತೀರ್ಮಾನವೇ ಅಂತಿಮ
ಅಧಿವೇಶನಕ್ಕೂ ಮುನ್ನ ವಿಸ್ತರಣೆ ಕಷ್ಟ ಎಂಬ ಮಾಹಿತಿ ದೊರೆತಿದ್ದು ಜೊತೆಗೆ ಸಿಎಂ BSY ಉತ್ತರಾಧಿಕಾರಿ ಹುಡುಕುವ ವಿಚಾರ ವರಿಷ್ಠರಿಗೆ ಬಿಟ್ಟಿದು ಎಂಬ ನೇರ ಮಾತು ಸಹ ಕೇಳಿಬಂದಿದೆ. ಈ ನಿರ್ಧಾರ ಖುದ್ದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೈಗೊಳ್ಳಲಿದ್ದಾರಂತೆ. ರಾಜ್ಯದ ವಿಚಾರದಲ್ಲಿ ಮೋದಿ, ಅಮಿತ್ ಶಾ ತೀರ್ಮಾನವೇ ಅಂತಿಮ ಎಂದು ಹಿರಿಯ ನಾಯಕರು ಪಕ್ಷದಲ್ಲಿ ಈ ಕುರಿತು ಸೂಚನೆ ನೀಡಿದ್ದಾರೆ.
ಸಚಿವಾಕಾಂಕ್ಷಿಗಳು ಎಂಟಿಬಿ ನಾಗರಾಜ್ ಕುರುಬ ಹೆಚ್.ವಿಶ್ವನಾಥ್ ಕುರುಬ ಆರ್. ಶಂಕರ್ ಕುರುಬ ಸಿ.ಪಿ. ಯೋಗೇಶ್ವರ್ ಒಕ್ಕಲಿಗ ಬಸನಗೌಡ ಯತ್ನಾಳ್ ಲಿಂಗಾಯತ ಉಮೇಶ್ ಕತ್ತಿ ಲಿಂಗಾಯತ ಮುರುಗೇಶ್ ನಿರಾಣಿ ಲಿಂಗಾಯತ ಎಂ.ಪಿ. ರೇಣುಕಾಚಾರ್ಯ ಲಿಂಗಾಯತ ಸುನಿಲ್ ಕುಮಾರ್ ಬಿಲ್ಲವ ಅರವಿಂದ ಲಿಂಬಾವಳಿ ದಲಿತ ತಿಪ್ಪಾರೆಡ್ಡಿ ರೆಡ್ಡಿ