ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಯುವತಿ ಲಾಡ್ಜ್‌ನಲ್ಲಿ ನಿಗೂಢ ಸಾವು

ಬೆಂಗಳೂರಿನ ಯುವತಿ ಹಾಸನ ಜಿಲ್ಲೆಯ ಸಕಲೇಶಪುರ ಪ್ರವಾಸಕ್ಕೆ ತೆರಳಿದ್ದ ವೇಳೆ ಲಾಡ್ಜ್ ಒಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸದ್ಯ ಮಗಳ ಸಾವು ಪೋಷಕರಲ್ಲಿ ಹಲವು ಅನುಮಾನ ಮೂಡಿಸಿದ್ದು, ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ಇನ್ನು ಈ ಕುರಿತಾಗಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಯುವತಿ ಲಾಡ್ಜ್‌ನಲ್ಲಿ ನಿಗೂಢ ಸಾವು
ಮೃತ ಯುವತಿ
Image Credit source: tv9 kannada
Edited By:

Updated on: Sep 16, 2026 | 6:29 PM

ಹಾಸನ, ಸೆಪ್ಟೆಂಬರ್​ 16: ಗೌರಿ-ಗಣೇಶ ಹಬ್ಬದ ರಜೆ ಹಿನ್ನೆಲೆ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ 23 ವರ್ಷದ ಸಿಎ ಪದವೀಧರೆ, ತಾಲೂಕಿನ ಹಿರಿಯೂರು ಕೂಡಿಗೆಯ ಲಾಡ್ಜ್‌ ಒಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರಿನಿಂದ ಸ್ನೇಹಿತರ ಜೊತೆಗೆ ಸಕಲೇಶಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಯುವತಿ ತಾನು ವಾಸ್ತವ್ಯ ಹೂಡಿದ್ದ ಲಾಡ್ಜ್​ನ ಕೊಠಡಿಯಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದ್ದು, ಸದ್ಯ ಸಾಕಷ್ಟು ಅನುಮಾನ ಮೂಡಿಸಿದೆ. ಮೃತ ಯುವತಿ ಮೂಲತಃ ಬೆಂಗಳೂರಿನ ನಾಗಸಂದ್ರ ಮೂಲದವಳಾಗಿದ್ದು, ಸಿಎ ಪದವಿಧರೆಯಾಗಿದ್ದಳು.

ಅನುಮಾನ ವ್ಯಕ್ತಪಡಿಸಿದ ಪೋಷಕರು 

ಮೂಲತಃ ಕೊಡಗು ಜಿಲ್ಲೆಯವರಾದ ಯುವತಿಯ ಪೋಷಕರು ಬೆಂಗಳೂರಿನ ನಾಗಸಂದ್ರದಲ್ಲಿ ನೆಲೆಸಿದ್ದಾರೆ. ಯುವತಿಯ ತಾಯಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಇಬ್ಬರು ಗೆಳತಿಯರು ಹಾಗೂ ಇಬ್ಬರು ಗೆಳೆಯರ ಜೊತೆ ಕಾರಿನಲ್ಲಿ ಸಕಲೇಶಪುರಕ್ಕೆ ಟೂರ್ ಹೋಗುವುದಾಗಿ ಮಗಳು ಹೇಳಿ ಹೊರಟಿದ್ದಳು. ಆದರೆ ಅಲ್ಲಿಗೆ ಗೆಳತಿಯರು ಹೋಗಿರಲೇ ಇಲ್ಲ. ಮಗಳ ಜೊತೆ ಓದಿದ್ದ, ನಮಗೆ ಪರಿಚಿತರೇ ಆಗಿದ್ದ ಇಬ್ಬರು ಯುವಕರ ಜೊತೆ ಎಲೆಕ್ಟ್ರಿಕ್ ಆಟೋದಲ್ಲಿ ತೆರಳಿದ್ದಳು. ಇದೀಗ ಮಗಳು ಲಾಡ್ಜ್‌ನಲ್ಲೇ ಮೃತಪಟ್ಟಿದ್ದಾಳೆ ಎಂದು ಹೇಳುತ್ತಿದ್ದಾರೆ’ ಎಂದು ಕಣ್ಣೀರಿಟ್ಟಿರುವ ಪೋಷಕರು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ನಾನಗೃಹಕ್ಕೆ ಹೋದಾಗಲೇ ಅಸ್ವಸ್ಥ

ಬೆಂಗಳೂರು ಮೂಲದ ರಘು ಹಾಗೂ ದರ್ಶನ್ ಎಂಬುವವರು ಯುವತಿಯ ಜೊತೆಗಿದ್ದರು. ‘ಲಾಡ್ಜ್ ಕೊಠಡಿಯ ಸ್ನಾನಗೃಹಕ್ಕೆ ಹೋದಾಗ ಆಕೆ ಅಸ್ವಸ್ಥಗೊಂಡು ಬಿದ್ದಿದ್ದಳು. ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ಕಾರ್ಬನ್ ಮೊನಾಕ್ಸೈಡ್ ಅನಿಲದಿಂದ ಆಕೆ ಅಸ್ವಸ್ಥಳಾಗಿ ಮೃತಪಟ್ಟಿರಬಹುದು’ ಎಂದು ಶಂಕಿಸಲಾಗಿದೆ. ತಕ್ಷಣ ಆಕೆಯನ್ನು ಸಮೀಪದ ಹೆತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಉಸಿರಾಟ ಸ್ಥಗಿತಗೊಂಡಿದ್ದ ಕಾರಣ ಸಕಲೇಶಪುರ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಯುವತಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಮೃತ ಯುವತಿ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ: ಎಸ್​​ಪಿ ಶುಭಾನ್ವಿತ 

ಇನ್ನು ಈ ಕುರಿತಾಗಿ ಹಾಸನ ಎಸ್​​ಪಿ ಶುಭಾನ್ವಿತ ಪ್ರತಿಕ್ರಿಯಿಸಿದ್ದು, ‘ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಜೊತೆಗೆ ಮೃತ ಯುವತಿ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಹಾಗಾಗಿ ಈ ಸಂಬಂಧ ಯುಡಿಆರ್ ದಾಖಲಿಸಲಾಗಿದೆ. ಹಿಮ್ಸ್​ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ’ ಎಂದು ಅವರು ಮಾಹಿತಿ ನೀಡಿದರು. ‘ಜೊತೆಗೆ ಮೂವರು ತಂಗಿದ್ದ ಲಾಡ್ಜ್​​ನ ಲೈಸೆನ್ಸ್ ಬಗ್ಗೆಯೂ ಸಾಕಷ್ಟು ಅನುಮಾನವಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ’ ಎಸ್​​ಪಿ ಶುಭಾನ್ವಿತ ಹೇಳಿದ್ದಾರೆ.

ಇದನ್ನೂ ಓದಿ: ಆಸ್ತಿ ವಿವಾದ: ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ತಂದೆ, ಮಗಳ ಬರ್ಬರ ಹತ್ಯೆ

ಒಟ್ಟಿನಲ್ಲಿ ಗೌರಿ ಗಣೇಶ ಹಬ್ಬದ ರಜೆ ಖುಷಿಯಲ್ಲಿ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದು ಮೂರ್ನಾಲ್ಕು ದಿನ ಸಂಭ್ರಮಿಸಿದಾಕೆ ಹಠಾತ್​​ ಸಾವನ್ನಪ್ಪಿರುವುದು ಹತ್ತಾರು ಅನುಮಾನ ಮೂಡಿಸಿದೆ. ಅನುಮಾನಾಸ್ಪದ ಸಾವು ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೋತ್ತರ ವರದಿ ಬಳಿಕ ಸುಂದರಿ ಸಾವಿನ ಅಸಲಿ ಸತ್ಯ ತಿಳಿಯಲಿದೆ.

Hassan Lodge Death: ಹುಡುಗರ ಜೊತೆ ಟ್ರಿಪ್​ ಬಂದಿದ್ದ ಯುವತಿಯ ಸಾವಿನ ಸುತ್ತ ಅನುಮಾನದ ಹುತ್ತ| #Tv9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:27 pm, Wed, 16 September 26

Loading...
Unable to load recommendations.
Follow Us