ಹಾಸನಾಂಬೆ ಜಾತ್ರೆಗೆ ಮುಹೂರ್ತ ನಿಗದಿ: ನವೆಂಬರ್ 2ರಿಂದ 15ರವರೆಗೆ ದಿನದ 24 ಗಂಟೆಯೂ ದರ್ಶನ

| Updated By: ವಿವೇಕ ಬಿರಾದಾರ

Updated on: Aug 16, 2023 | 7:14 AM

ಹಾಸನಾಂಬೆ ಜಾತ್ರಗೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ಶಕ್ತಿ ದೇವತೆಯ ಜಾತ್ರೆ ನಡೆಯಲಿದೆ. ಒಟ್ಟು 14 ದಿನಗಳು 24 ಗಂಟೆ ದೇವಿಯ ದರ್ಶನ ಮಾಡಬಹುದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ರಾಜಣ್ಣ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯ ಹೇಮಾವತಿ ಸಭಾಂಗಣದ ಸಭೆ ನಡೆಯಿತು.

ಹಾಸನಾಂಬೆ ಜಾತ್ರೆಗೆ ಮುಹೂರ್ತ ನಿಗದಿ: ನವೆಂಬರ್ 2ರಿಂದ 15ರವರೆಗೆ ದಿನದ 24 ಗಂಟೆಯೂ ದರ್ಶನ
ಹಾಸನಾಂಬೆ
Follow us on

ಹಾಸನ: ರಾಜ್ಯದ ಶಕ್ತಿದೇವತೆ, ಹಾಸನದ (Hassan) ಅಧಿದೇವತೆ, ಬೇಡಿದ ವರವ ಕರುಣಿಸುವ ಮಹಾತಾಯಿ, ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ (Hasnambe) ಜಾತ್ರಗೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ಶಕ್ತಿ ದೇವತೆಯ ಜಾತ್ರೆ ನಡೆಯಲಿದೆ. ಒಟ್ಟು 14 ದಿನಗಳು 24 ಗಂಟೆ ದೇವಿಯ ದರ್ಶನ ಮಾಡಬಹುದಾಗಿದೆ. ಕೊರೊನ ಕಾರಣದಿಂದ ಕಳೆದ ಮೂರು ವರ್ಷ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆದಿರಲಿಲ್ಲ. ಹೀಗಾಗಿ ಈ ವರ್ಷ ಜಾತ್ರೆ ವಿಜೃಂಭಣೆಯಿಂದ ಆಚರಿಸಲು ತಯಾರಿ ನಡೆದಿದೆ. ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ಅವಕಾಶ ದೊರೆತ ಹಿನ್ನೆಲೆಯಲ್ಲಿ ಈ ಬಾರಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಹೆಚ್ಚು ಭಕ್ತರು ಆಗಮಿಸುವುದರಿಂದ ಹಾಸನಾಂಬೆ ಮಹೋತ್ಸವ ವೈಭವದಿಂದ ಜರಗುತ್ತದೆ. ಜೊತೆಗೆ ಹಾಸನ ಜಿಲ್ಲೆಯ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಜೀವಕಳೆ ಬಂದಂತಾಗುತ್ತದೆ. ಇನ್ನು ಈ ಜಾತ್ರೆ ವಿಶೇಷವಾಗಿರಲಿದ್ದು, ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಅಚ್ಚುಕಟ್ಟಾಗಿ ಸಿದ್ಧತೆ ನಡೆಯಬೇಕು, ಯಾವುದೇ ಕುಂದುಕೊರತೆ ಮತ್ತು ಗಡಿಬಿಡಿ ಆಗಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್​. ರಾಜಣ್ಣ ಅವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಲೋಕಸಭೆಗೆ ಹಾಸನದಿಂದ ಪ್ರಜ್ವಲ್​ ರೇವಣ್ಣ ಸ್ಪರ್ಧೆ: ದೇವೇಗೌಡರ ತೀರ್ಮಾನವೇ ಅಂತಿಮ: ಹೆಚ್​. ಡಿ ರೇವಣ್ಣ

ನಿನ್ನೆ (ಆ.15) ರಂದು ಹಾಸನಾಂಬೆ ಜಾತ್ರಾಮಹೋತ್ಸವ ನಿಮತ್ತ ಉಸ್ತುವಾರಿ ಸಚಿವ ಕೆ. ರಾಜಣ್ಣ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯ ಹೇಮಾವತಿ ಸಭಾಂಗಣದ ಸಭೆ ನಡೆಯಿತು. ಒಟ್ಟು 14 ದಿನಗಳು ದೇವಿಯ ದೇಗುಲದ ಬಾಗಿಲು ತೆರೆಯಲಿದ್ದು, ಮೊದಲ ಹಾಗೂ ಕೊನೆಯ ದಿನ ಪೂಜಾ ವಿಧಿ ವಿಧಾನಗಳ ಕಾರಣ ಎರಡು ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬಿಟ್ಟರೆ ಒಟ್ಟು 12 ದಿನಗಳು 24 ಗಂಟೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನವಾಯಿತು. ಈ ಬಾರಿ ಅದ್ಧೂರಿಯಾಗಿ ಜಾತ್ರೆ ನಡೆಸಬೇಕು. ಈ ಸಂಬಂಧ ಅಗತ್ಯ ತಯಾರಿ ಮಾಡಿಕೊಳ್ಳಿ ಎಂದು ಸಚಿವರು ಸೂಚನೆ ನೀಡಿದ್ದಾರೆ.

ವಿಐಪಿ ಹೆಸರಿನಲ್ಲಿ ಬರುವ ಗಣ್ಯರ ಸಂಖ್ಯೆಗೆ ಕಡಿವಾಣ ಹಾಕುವ ಬಗ್ಗೆ ಕೂಡ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಭಕ್ತರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಈ ಬಾರಿ ಹಾಸನಾಂಬೆ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಹಾಸನಾಂಬೆ ಜಾತ್ರೆಯಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳ, ಕಲೆ ಮತ್ತು ಸಂಸ್ಕೃತಿ ಪ್ರದರ್ಶನವಾಗಬೇಕು. ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ಹಾಸನ ಜಿಲ್ಲೆಯ ನೈಸರ್ಗಿಕ ತಾಣಗಳ ಜೊತೆಗೆ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳ ದರ್ಶನದ ಬಗ್ಗೆಯೂ ಕೂಡ ಗಮನ ಸೆಳೆಯಲು ಯೋಜನೆ ರೂಪಿಸಲಾಗಿದೆ. ಸ್ಥಳೀಯರನ್ನು ಒಳಗೊಂಡು ಜಾನಪದ, ಸಂಸ್ಕೃತಿ ಉತ್ಸವ, ಗ್ರಾಮೀಣ ಕ್ರೀಡೆ ಸೇರಿ ಹಲವು ಚಟುವಟಿಕೆ ಮಾಡುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರು ಕಾತರರಾಗಿ ಕಾಯುತ್ತಿದ್ದಾರೆ. ರಾಜ್ಯ ಅಲ್ಲದೆ ಹೊರ ರಾಜ್ಯಗಳಿಂದಲೂ ಕೂಡ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಕಳೆದ ನಾಲ್ಕು ವರ್ಷಗಳಿಂದ 24 ಗಂಟೆ ಕೂಡ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ