ಹೊಳೆನರಸೀಪುರದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ಯುವಕ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 19, 2024 | 6:38 PM

ಶಾಲಾ-ಕಾಲೇಜಿನಲ್ಲಿ ಶುರುವಾಗುವ ಹದಿ-ಹರೆಯದ ಪ್ರೀತಿ ಅದೆಷ್ಟೋ ಮಕ್ಕಳ ಬಾಳನ್ನೆ ಬೀದಿಪಾಲು ಮಾಡಿದ ಅದೆಷ್ಟೋ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಅದರಂತೆ ಹಾಸನ ಜಿಲ್ಲೆಯ ಹೊಳೆನರಸೀಫುರದಲ್ಲೂ ಇಂತಹುದೇ ಘಟನೆಗೆ ಯುವಕ ಬಲಿಯಾಗಿ ಹೋಗಿದ್ರೆ, ಬಾಲಕಿ ಸಾವು ಬದುಕಿ ನಡುವ ಹೋರಾಡುತ್ತಾ ಆಸ್ಪತ್ರೆ ಬೆಡ್ ಮೇಲೆ ನರಳಾಡುತ್ತಿದ್ದಾಳೆ.

ಹೊಳೆನರಸೀಪುರದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ಯುವಕ ಸಾವು
ಮೃತ ಯುವಕ
Follow us on

ಹಾಸನ, ಮಾ.19: ಹದಿ-ಹರೆಯದ ಮಾಗದ ಪ್ರೀತಿಯ(Love) ಪಾಡೇ ಹೀಗೆ, ಒಂದೋ ತಮ್ಮ ಜೀವ ತೆಗೆದುಕೊಳ್ತಾರೆ, ಇಲ್ಲ ಕುಟುಂಬವನ್ನ ನರಕಕ್ಕೆ ದೂಡಿ ಬಿಡುತ್ತಾರೆ. ಅದರಂತೆ ನಿನ್ನೆ(ಮಾ.18) ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ (Holenarasipura) ನಡೆದ ಘಟನೆ ನಿಜಕ್ಕೂ ಕಣ್ಣೀರು ತರಿಸುತ್ತಿದೆ. ತಾಲ್ಲೂಕಿನ ನಗರನಹಳ್ಳಿಯ ರಾಜು(20) ಹಾಗೂ ಇದೇ ತಾಲ್ಲೂಕಿನ ದ್ವಿತೀಯ ಪಿಯುಸಿ ಯುವತಿ ನಡುವೆ ಇದ್ದ ಸ್ನೇಹ ಪ್ರೀತಿಗೆ ತಿರುಗಿದೆ. ಬಾಲ್ಯದಿಂದಲೂ ಪರಿಚಿತರಾಗಿದ್ದ ಈ ಜೋಡಿ, ಪರಸ್ಪರ ಇಷ್ಟಪಟ್ಟಿದ್ದರಂತೆ. ಆದ್ರೆ, ಮನೆಯವರಿಗೆ ವಿಚಾರ ಮುಟ್ಟಿತ್ತೋ ಇಲ್ಲವೋ, ಆದರೆ ಮನೆಯವರಿಗೆ ವಿಚಾರ ಗೊತ್ತಾದರೆ ಇದಕ್ಕೆ ಒಪ್ಪುವುದಿಲ್ಲ ಎಂದು ತಮಗೇ ತಾವೇ ತೀರ್ಮಾನ ಮಾಡಿಕೊಂಡ ಈ ಪ್ರೇಮಿಗಳು ಬದುಕನ್ನೇ ಅಂತ್ಯಗೊಳಿಸಿಕೊಳ್ಳೋ  ತೀರ್ಮಾನ ಮಾಡಿದ್ದಾರೆ.

ಹೊಳೆನರಸೀಫುರದ ಹೇಮಾವತಿ ನದಿ ದಂಡೆಯ ಬಳಿ ಇರುವ ರೈಲ್ವೆ ಟ್ರ್ಯಾಕ್ ಬಳಿ ನಿನ್ನೆ ಸಂಜೆ ಇಬ್ಬರೂ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ವಿಷ ಕುಡಿದು ಒದ್ದಾಡುತ್ತಿದ್ದ ಇಬ್ಬರನ್ನು ಕಂಡ ಸ್ಥಳೀಯರು, ಹೊಳೆನರಸೀಫುರ ನಗರ ಠಾಣೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತಮ್ಮದೇ ವಾಹನದಲ್ಲಿ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ, ನಿನ್ನೆ ರಾತ್ರಿಯೇ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಬಾಲಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಇದನ್ನೂ ಓದಿ:ಹಣ ಕಳ್ಳತನವಾಗಿದೆ ಎಂದು ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದ ಶಿಕ್ಷಕಿಯರು, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಅಕ್ಕ ಪಕ್ಕದ ಊರಿನವರಾದ ರಾಜು ಹಾಗು ಯುವತಿ ಮೊದಲಿನಿಂದಲೂ ಪರಿಚಿತರಾಗಿದ್ದರು. ಬಾಲ್ಯದಲ್ಲಿಯೇ ತಾಯಿಯನ್ನ ಕಳೆದುಕೊಂಡಿದ್ದ ಬಾಲಕಿ ತನ್ನ ಅಜ್ಜಿಮನೆಯಲ್ಲಿದ್ದಳು. ದ್ವಿತೀಯ ಬಿಎ ಓದಿಕೊಂಡಿದ್ದ ರಾಜು ಮನೆಯಲ್ಲಿ ಬಡತನದ ಕಾರಣ ಓದನ್ನ ಅರ್ದಕ್ಕೆ ಬಿಟ್ಟು ಎರಡು ತಿಂಗಳ ಹಿಂದಷ್ಟೇ ಮೈಸೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ಯುವತಿಕೆ ಹುಡುಗನನ್ನ ಹುಡುಕುತ್ತಿದ್ದು, ಪರೀಕ್ಷೇ ಮುಗಿದ ಬಳಿಕ ಆಕೆಯ ಮದುವೆಯಾಗುತ್ತದೆ ಎನ್ನುವ ವಿಚಾರ ರಾಜು ಕಿವಿಗೆ ಬಿದ್ದಿದ್ದಂತೆ. ಈ ವಿಚಾರ ಸತ್ಯವೋ, ಸುಳ್ಳೋ ಎಂದು ಪರಿಶೀಲನೆಯನ್ನು ಮಾಡದೆ, ಮನೆಯವರಿಗೂ ವಿಚಾರ ತಿಳಿಸದೆ ತಮ್ಮಷ್ಟಕ್ಕೆ ತಾವೇ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಹೊಳೆನರಸೀಪುರದಲ್ಲಿ ಇಬ್ಬರೂ ಬೇಟಿಯಾಗಿದ್ದಾರೆ. ಪರೀಕ್ಷೆ ಮುಗಿಸಿ ಬಂದ ಬಾಲಕಿಯನ್ನ ಜೊತೆಗೆ ಕರೆದೊಯ್ದ ರಾಜು, ರೈಲ್ವೆ ಟ್ರ್ಯಾಕ್ ಸಮೀಪ ಆಕೆಯೊಂದಿಗೆ ವಿಷ ಕುಡಿದಿದ್ದಾನೆ. ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯುವಕ ಬದುಕುಳಿದಿಲ್ಲ. ವರ್ಷಗಳ ಹಿಂದೆಯೇ ತನ್ನ ಸಂಬಂಧಿಯೊಬ್ಬರ ಜೊತೆಗೆ ತನ್ನ ಪ್ರೀತಿ ವಿಚಾರ ಹೇಳಿಕೊಂಡಿದ್ದ ರಾಜು, ಸಹಾಯ ಮಾಡುವಂತೆ ಕೇಳಿದ್ದನಂತೆ. ಆದ್ರೆ, ಬಾಲಕಿ ಇನ್ನೂ ಅಪ್ರಾಪ್ತೆ, ನೀನೂ ದುಡಿದು ಜೀವನ ಕಟ್ಟಿಕೊಳ್ಳಬೇಕಿದೆ. ಸಮಯ ಬಂದಾಗ ಎಲ್ಲವೂ ಆಗುತ್ತದೆ ದುಡಕಬೇಡಾ ಎಂದು ಬುದ್ದಿಹೇಳಿದ್ದ ಸಂಬಂದಿಕರು, ಮುಂದೆ ಮಾತಾಡೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಾಸನ: ಪತ್ನಿ ಕೊಂದು ಪತಿ ಆತ್ಮಹತ್ಯೆ ಶಂಕೆ; ಮನೆಯ ಬಾಗಿಲು ಮುರಿದು ನೋಡಿದಾಗ ಘಟನೆ ಬೆಳಕಿಗೆ

ಆದ್ರೆ ನಿನ್ನೆ ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಇಬ್ಬರೂ ಆತ್ಮಹತ್ಯೆಗೆ ಯತ್ನ ಮಾಡಿ ಓರ್ವ ಬಲಿಯಾಗಿದ್ದಾನೆ. ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಒಟ್ಟಿನಲ್ಲಿ ಇನ್ನೂ ಓದಿ ಕಲಿಯಬೇಕಿದ್ದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ತಲೆಕೆಡಿಸಿಕೊಂಡು ಯಡವಟ್ಟು ಮಾಡಿಕೊಂಡ ಜೋಡಿ, ತಮ್ಮ ಬದುಕನ್ನೇ ಕೊನೆಗಾಣಿಸಿಕೊಳ್ಳಲು ಮುಂದಾಗಿದ್ದು, ಕೇಸ್ ದಾಖಲುಮಾಡಿಕೊಂಡಿರುವ ಅರಸೀಕೆರೆ ರೈಲ್ವೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಪ್ರೀತಿಯ ಪಾಶಕ್ಕೆ ಸಿಲುಕಿದ ಯುವಕನೇನೋ ಬಲಿಯಾಗಿದ್ದಾನೆ, ಬಾಲಕಿಯಾದರೂ ಬದುಕಿ ಬರಲಿ ಎನ್ನುವುದು ಸಂಬಂಧಿಕರ ಪ್ರಾರ್ಥನೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ