ಹಾಸನ ಜಿಲ್ಲೆ ರೈತರಿಗೆ ಅನ್ಯಾಯ: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಜೆಡಿಎಸ್ ನಾಯಕ ರೇವಣ್ಣ ಆಗ್ರಹ

ಹಾಸನ ಜಿಲ್ಲೆಯಲ್ಲಿ ರಾಗಿ, ಭತ್ತ, ಜೋಳ ಬೆಳೆಗಳ ಖರೀದಿಯೂ ಆರಂಭವಾಗಿಲ್ಲ. ಈ ಸರ್ಕಾರ ನಿದ್ದೆ ಮಾಡುತ್ತಿದೆ. ಇಂಥ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲೇ ನೋಡಲಿಲ್ಲ ಎಂದು ರೇವಣ್ಣ ಹೇಳಿದರು.

ಹಾಸನ ಜಿಲ್ಲೆ ರೈತರಿಗೆ ಅನ್ಯಾಯ: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಜೆಡಿಎಸ್ ನಾಯಕ ರೇವಣ್ಣ ಆಗ್ರಹ
ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ
Edited By:

Updated on: Feb 15, 2022 | 10:59 PM

ಹಾಸನ: ಜಿಲ್ಲೆಯ ರೈತರ ಬೆಳೆಗಳನ್ನು ಬೆಂಬಲ ಬೆಲೆಗೆ ಕರ್ನಾಟಕ ಸರ್ಕಾರ ಖರೀದಿಸುತ್ತಿಲ್ಲ ಎಂದು ಜೆಡಿಎಸ್ ನಾಯಕ ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಜಿಲ್ಲೆಯಲ್ಲಿ ಒಟ್ಟು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗಿದೆ. ಈ ಬಾರಿ ಸುಮಾರು 14 ಲಕ್ಷ ಕ್ವಿಂಟಲ್ ರಾಗಿ ಬೆಳೆ ಬಂದಿದೆ. ಆದರೆ ಈವರೆಗೆ ಬೆಳೆ ಖರೀದಿಗೆ ಕ್ರಮ ಕೈಗೊಂಡಿಲ್ಲ. ಭತ್ತ, ಜೋಳ ಬೆಳೆಗಳ ಖರೀದಿಯೂ ಆರಂಭವಾಗಿಲ್ಲ. ಈ ಸರ್ಕಾರ ನಿದ್ದೆ ಮಾಡುತ್ತಿದೆ. ಇಂಥ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲೇ ನೋಡಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿ ಮಾತನಾಡುತ್ತಿವೆ. ಆದರೆ ಅವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದರು. ಕೊವಿಡ್‌ ಸಂಕಷ್ಟದಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ರೈತರು ಒಡವೆ ಅಡ ಇಟ್ಟು ಸಾಲ ತಂದು ಬೆಳೆ ಬೆಳೆದಿದ್ದಾರೆ. ಕುಮಾರಣ್ಣನ ಸರ್ಕಾದಲ್ಲಿ ತಂದಿದ್ದ ರಿಯಾಯ್ತಿ ಬಡ್ಡಿಯ ಸಾಲದ ಯೋಜನೆಯನ್ನೂ ಯಡಿಯೂರಪ್ಪ ತೆಗೆದು ಹಾಕಿದರು. ನಮ್ಮ ಯೋಜನೆಯಿಂದ ಶೇ 3ರ ಬಡ್ಡಿಯಲ್ಲಿ ಹಣ ದೊರೆಯುತ್ತಿತ್ತು ಎಂದು ವಿಷಾದಿಸಿದರು.

ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ಕಟ್ಟಿಸಿದ್ದರೂ ಏನೂ ಪ್ರಯೋಜನ ಆಗುತ್ತಿಲ್ಲ. ಇವರು ಬೇಕುಬೇಕಾದವರನ್ನ ಕೆಲಸಕ್ಕೆ ತಗೊಳ್ತಾ, ಅದರಲ್ಲೇ ದುಡ್ಡು ಹೊಡೀತಾ ಇದ್ದಾರೆ ಎಂದು ಆಸ್ಪತ್ರೆಗಳಲ್ಲಿ ಔಟ್​ಸೋರ್ಸಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ, ಹೀಗೆ ಮಾಡೋದಾದ್ರೆ ಅಸ್ಪತ್ರೆಯ ಬಾಗಿಲು ಮುಚ್ಚಿಬಿಡಿ ಎಂದು ಕಿಡಿಕಾರಿದರು.

ಪ್ರೀತಂ ಗೌಡ ಹಾಕಿದ ಸವಾಲಿಗೆ ಸೈ ಅಂದ ರೇವಣ್ಣ

ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಮ್ಮ ಕುಟುಂಬಕ್ಕೆ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಕಿರುವ ಸವಾಲನ್ನು ಸ್ವೀಕರಿಸುವುದಾಗಿ ಶಾಸಕ ಎಚ್.ಡಿ.ರೇವಣ್ಣ ಹೇಳಿದರು. ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರ ಜತೆ ಚರ್ಚಿಸುತ್ತೇವೆ. ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಹಾಸನದ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ, ಎದುರಿಸುತ್ತೇವೆ ಎಂದು ರೇವಣ್ಣ ಹೇಳಿದರು. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಪಕ್ಷ ಬಿಡುವುದಿಲ್ಲ. ಅವರಿಗೆ ತೊಂದರೆಯಾಗಿದ್ದರೆ ಸರಿಪಡಿಸಲಾಗುವುದು ಎಂದರು.

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ತೊರೆಯುತ್ತಾರೆ ಎನ್ನುವುದು ಕೇವಲ ಅಪಪ್ರಚಾರ. ಅವರು ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ನಾಯಕರನ್ನು ಹೊಗಳಿರಬಹುದು. ಅವರ ಕ್ಷೇತ್ರಕ್ಕೆ ಯಾರೇ ಬಂದರೂ ಗೌರವ ಕೊಡಬೇಕು. ಆ ರೀತಿ ನಡೆದುಕೊಂಡಿದ್ದಾರೆ. ಹಾಗೆಂದು ಜೆಡಿಎಸ್​ನಲ್ಲಿ ಯಾವುದೇ ಅವರ ಬಗ್ಗೆ ಅಸಮಾನವಿಲ್ಲ ಎಂದು ಹೇಳಿದರು. ಆದರೆ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದು ತಾವಾ ಅಥವಾ ತಮ್ಮ ಪತ್ನಿ ಭವಾನಿ ಅವರಾ ಎಂದು ಅವರು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ.

ಇದನ್ನೂ ಓದಿ: ವ್ಯವಹಾರಕ್ಕೆ ಸಂಬಂಧಿಸಿದಂತೆ ರೇವಣ್ಣ ಮತ್ತು ನನ್ನ ಕುಟುಂಬಗಳು ಬೇರೆ ಬೇರೆಯಾಗಿವೆ: ಹೆಚ್ ಡಿ ಕುಮಾರಸ್ವಾಮಿ

ಇದನ್ನೂ ಓದಿ: HD Revanna: ದೇವಾಲಯ ಉದ್ಘಾಟನೆ ವೇಳೆ ಬೆಂಬಲಿಗರಿಗೆ ನಿಂಬೆಹಣ್ಣು ಹಂಚಿದ ಹೆಚ್ಡಿ ರೇವಣ್ಣ

Web contact

TV9 Kannada

Read More
Follow Us