ಪಕ್ಷಿಗಳ ರಕ್ಷಣೆಗೆ ನಿಂತ ಹಾವೇರಿಯ ಸರ್ಕಾರಿ ಶಾಲೆ ಮಕ್ಕಳು

ಬಿಸಿಲಿನ ತಾಪಮಾನಕ್ಕೆ ಅದೆಷ್ಟೋ ಪ್ರಾಣಿ, ಪಕ್ಷಿಗಳು ಕುಡಿಯಲು ನೀರು, ತಿನ್ನಲು ಆಹಾರ ಸಿಗದೆ ಅಸುನೀಗುತ್ತಿವೆ. ಇಂತಹ ಶೋಚನೀಯ ಸ್ಥಿಯಲ್ಲಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಳ್ಳಿಬೈಲ್ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ಪಕ್ಷಿಗಳ ರಕ್ಷಣೆಗೆ ನಿಂತಿದ್ದಾರೆ. ಈ ಕುರಿರು ಒಂದು ವರದಿ ಇಲ್ಲಿದೆ ಓದಿ...

ಪಕ್ಷಿಗಳ ರಕ್ಷಣೆಗೆ ನಿಂತ ಹಾವೇರಿಯ ಸರ್ಕಾರಿ ಶಾಲೆ ಮಕ್ಕಳು
ಪಕ್ಷಿಗಳ ರಕ್ಷಣೆಗೆ ನಿಂತ ಹಾವೇರಿಯ ಸರ್ಕಾರಿ ಶಾಲೆ ಮಕ್ಕಳು
Edited By: ವಿವೇಕ ಬಿರಾದಾರ

Updated on: Apr 09, 2024 | 8:30 AM

ಹಾವೇರಿ, ಏಪ್ರಿಲ್​ 09: ರಾಜ್ಯದಲ್ಲಿ ಬರಗಾಲ (Karnataka Drought) ಆವರಿಸಿದ್ದರಿಂದ ನದಿ, ಹಳ್ಳ, ಕೊಳ್ಳಗಳೆಲ್ಲ ಬರಿದಾಗಿ ಹೋಗಿವೆ. ಕುಡಿಯಲು ಸಹ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅದೆಷ್ಟೋ ಪ್ರಾಣಿ, ಪಕ್ಷಿಗಳು ಕುಡಿಯಲು ನೀರು, ತಿನ್ನಲು ಆಹಾರ ಸಿಗದೆ ಅಸುನೀಗುತ್ತಿವೆ. ಇಂತಹ ಶೋಚನೀಯ ಸ್ಥಿಯಲ್ಲಿ ಹಾವೇರಿ (Haveri) ಜಿಲ್ಲೆ ಹಾನಗಲ್ (Hangal) ತಾಲೂಕಿನ ಹಳ್ಳಿಬೈಲ್ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು (Government School Children) ಪಕ್ಷಿಗಳ ರಕ್ಷಣೆಗೆ ನಿಂತಿದ್ದಾರೆ. ಈ ಕುರಿರು ಒಂದು ವರದಿ ಇಲ್ಲಿದೆ ಓದಿ..

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಳ್ಳಿಬೈಲ್ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಶಾಲೆಯಲ್ಲಿ ಒಟ್ಟು 65 ಜನ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಒಬ್ಬ ಮುಖ್ಯ ಗುರುಗಳು ಹಾಗೂ ಇಬ್ಬರು ಶಿಕ್ಷಕಿಯರಿದ್ದಾರೆ. ಶಿಕ್ಷಕ ಶಿಕ್ಷಕಿಯರು ಮತ್ತು ಮಕ್ಕಳು ಸೇರಿಕೊಂಡು ಶಾಲೆಯ ಆವರಣಕ್ಕೆ ಹೊಸ ರೂಪು ಕೊಟ್ಟಿದ್ದಾರೆ‌. ನಿರುಪಯುಕ್ತ ಬಾಟಲಿಗಳನ್ನು ಕಟ್ ಮಾಡಿ ಶಾಲಾ ಆವರಣದಲ್ಲಿನ ಗಿಡ-ಮರಗಳಲ್ಲಿ ನೇತು ಹಾಕಿ, ನಿತ್ಯ ಅವುಗಳಲ್ಲಿ ನೀರು, ಕಾಳುಗಳನ್ನು ಹಾಕುತ್ತಿದ್ದಾರೆ.

ಹಸಿವು ಅಂತ ಆಹಾರ ಅರಸಿಕೊಂಡು ಬರುವ ಪಕ್ಷಿಗಳು, ಗಿಡಮರಗಳಲ್ಲಿ ತೂಗು ಹಾಕಿರುವ ಬಾಟಲಿಗಳ ತುಂಡಿನಲ್ಲಿ ತುಂಬಿಟ್ಟ ಆಹಾರ ತಿಂದು ಹಸಿವು ನೀಗಿಸಿಕೊಳ್ಳುತ್ತಿವೆ. ಬಿರು ಬಿಸಿಲಿನಿಂದ ನೀರಿಗಾಗಿ ಹಾರಾಡಿ, ಅಲೆದಾಡಿ ಶಾಲೆಯ ಆವರಣಕ್ಕೆ ಬಂದು ನೀರು ಕುಡಿದು ತಮ್ಮ ದಾಹ ನೀಗಿಸಿಕೊಳ್ಳುತ್ತಿವೆ.

ಇದನ್ನೂ ಓದಿ: ಶ್ವಾನ ಹಾಗೂ ಜಾನುವಾರುಗಳ ಬಾಯಾರಿಕೆ ಮತ್ತು ಹಸಿವು ತಣಿಸುವ ವಿಕಲಚೇತನ

ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಟೀಚರ್​ ವಿಶೇಷ ಕಾಳಜಿ ವಹಿಸಿ ಈ ಕಾರ್ಯ ಮಾಡುತ್ತಿದ್ದು, ಮಕ್ಕಳಿಗೆ ಪ್ರಾಣಿ, ಪಕ್ಷಿ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಇವರ ಉದ್ದೇಶವಾಗಿದೆ. ಇವರ ಕಾರ್ಯಕ್ಕೆ ಇನ್ನೂಳಿದ ಸಹ ಶಿಕ್ಷಕರು ಮತ್ತು ಮಕ್ಕಳು ಸಾಥ್ ಕೊಟ್ಟಿದ್ದಾರೆ. ನಿರುಪಯುಕ್ತ ಬಾಟಲಿಗಳಲ್ಲಿ ನೀರು ಮತ್ತು ಕಾಳುಗಳನ್ನು ಹಾಕಲಾಗುತ್ತದೆ. ಶಾಲಾ ಆವರಣಕ್ಕೆ ಬರುವ ಪಕ್ಷಿಗಳು ಜ್ಯೋತಿ ಟೀಚರ್ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ಮರಗಳಲ್ಲಿ ತೂಗು ಹಾಕಿರುವ ಸಣ್ಣಸಣ್ಣ ತೊಟ್ಟಿಗಳಲ್ಲಿನ ಕಾಳು ತಿಂದು, ನೀರು ಕುಡಿದು ಹಸಿವು ಮತ್ತು ದಾಹ ನೀಗಿಸಿಕೊಳ್ಳುತ್ತಿವೆ. ನಂತರ ಬಿಸಿಲಿನ ಬೇಗೆಯಿಂದ ತಪ್ಫಿಸಿಕೊಳ್ಳಲು ಶಾಲಾ ಆವರಣದಲ್ಲಿನ ಗಿಡ ಮರಗಳಲ್ಲಿ ಬಿಡಾರ ಹೂಡಿ ಸ್ವಚ್ಛಂದವಾಗಿ ಹಾರಾಡುತ್ತವೆ.

ಶಾಲೆಯ ಮಕ್ಕಳಿಗೆ ಪರಿಸರ ಕಾಳಜಿಯ ಜೊತೆಗೆ ಪ್ರಾಣಿ ಪಕ್ಷಿಗಳ ಹಸಿವು ನೀಗಿಸುವ, ಕುಡಿಯುವ ನೀರಿನ ದಾಹ ಇಂಗಿಸುವ ಪಾಠವನ್ನು ಶಿಕ್ಷಕಿ ಜ್ಯೋತಿ ಟೀಚರ್ ಹೇಳಿಕೊಡುತ್ತಿದ್ದಾರೆ‌. ಶಿಕ್ಷಕಿ ಜ್ಯೋತಿ ಸುರಳೇಶ್ವರ ಅವರು ಮಾಡುತ್ತಿರುವ ವಿಶೇಷ ಪ್ರಯತ್ನಕ್ಕೆ ಶಾಲೆಯ ಮುಖ್ಯ ಗುರುಗಳು ಹಾಗೂ ಶಾಲೆಯ ಮತ್ತೋರ್ವ ಶಿಕ್ಷಕಿ ಸಾಥ್ ನೀಡುತ್ತಿದ್ದಾರೆ.

ಒಟ್ಟಾರೆ ಈ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸದ ಜೊತೆಗೆ ಪರಿಸರ ಪಾಠ, ಪ್ರಾಣಿ ಪಕ್ಷಿಗಳ ಹಸಿವು, ದಾಹ ನೀಗಿಸುವುದನ್ನೂ ಕಲಿಸಿಕೊಡಲಾಗುತ್ತದೆ. ಶಾಲೆಗೆ ಬರುವ ಹಲವು ಮಕ್ಕಳು ತಮ್ಮ ತಮ್ಮ ಮನೆಗಳಲ್ಲೂ ಶಾಲೆಯಂತೆ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಕಿ, ನೀರು ಇಡುತ್ತಿದ್ದಾರೆ. ಇದು ಉಳಿದ ಶಾಲೆಗಳಿಗೂ ಮಾರ್ಗದರ್ಶನವಾಗಲಿ ಎನ್ನುವುದು ನಮ್ಮ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us