Sudha Murthy: ದೇಶದ ಶ್ರೀಮಂತ ಮಹಿಳೆ ಸುಧಾ ಮೂರ್ತಿ 300 ಪುಸ್ತಕಗಳ ಲೇಖಕಿಯೂ ಹೌದು!

ಖ್ಯಾತ ಬರಹಗಾರ್ತಿ ಸುಧಾ ಮೂರ್ತಿಯವರು 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ಮಕ್ಕಳ ಪುಸ್ತಕಗಳಿಂದ ಹಿಡಿದು ಸಣ್ಣ ಕಥೆಗಳು, ಕಾದಂಬರಿಗಳು, ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಇನ್ನು ಇಲ್ಲಿ ವಿಶೇಷವೆಂದರೆ ಇವರ ಬಹುತೇಕ ಪುಸ್ತಕಗಳು ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.

Sudha Murthy: ದೇಶದ ಶ್ರೀಮಂತ ಮಹಿಳೆ ಸುಧಾ ಮೂರ್ತಿ 300 ಪುಸ್ತಕಗಳ ಲೇಖಕಿಯೂ ಹೌದು!
ಸುಧಾ ಮೂರ್ತಿ
Follow us
|

Updated on:Sep 02, 2024 | 1:54 PM

ಸರಳತೆ, ಸಮಾಜ ಸೇವೆಗಳಿಂದ ಹೆಸರು ಮಾಡಿರುವ ಸಂಸದೆ ಸುಧಾ ಮೂರ್ತಿಯವರು (Sudha Murthy) ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಖ್ಯಾತ ಬರಹಗಾರ್ತಿ ಎನಿಸಿಕೊಂಡಿದ್ದಾರೆ. ಜನಸಾಮಾನ್ಯರ ಏಳಿಗೆಗಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಿದ್ದಾರೆ. ಇನ್ಫೋಸಿಸ್‌(Infosys) ಫೌಂಡೇಶನ್‌ ಅಧ್ಯಕ್ಷೆಯಾಗಿರುವ ಇವರು ಇನ್ಫೋಸಿಸ್ ಮೂಲಕ, ಸಮಾಜ ಸೇವೆಯೊಂದಿಗೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿಯುತ್ತಿದ್ದಾರೆ ಹಾಗೂ ತಮ್ಮ ಪುಸ್ತಕಗಳ ಮೂಲಕ ಜನ ಸಾಮಾನ್ಯರ ದನಿಯಾಗಿದ್ದಾರೆ.

ಇತ್ತೀಚೆಗೆ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸುಧಾಮೂರ್ತಿಯವರು ಸಂಸತ್ ಬಗ್ಗೆ ಒಂದು ಪುಸ್ತಕವನ್ನು ಬರೆಯುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದರು. ಇವರು ಮಕ್ಕಳ ಪುಸ್ತಕಗಳಿಂದ ಹಿಡಿದು ಸಣ್ಣ ಕಥೆಗಳು, ಕಾದಂಬರಿಗಳು, ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಇನ್ನು ಇಲ್ಲಿ ವಿಶೇಷವೆಂದರೆ ಇವರ ಬಹುತೇಕ ಪುಸ್ತಕಗಳು ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.

ಸುಧಾ ಮೂರ್ತಿಯವರ ಪುಸ್ತಕಗಳು

ಸುಧಾ ಮೂರ್ತಿಯವರ ಬರವಣಿಗೆ ಜನಸಾಮಾನ್ಯರ ಜೀವನ, ಅವರ ಕಷ್ಟ, ಸಂಸ್ಕೃತಿಯ ಮೇಲೆ ಬೆಳಕು ಚಲ್ಲಿರುತ್ತೆ. ಅವರು ಆತಿಥ್ಯ, ತಮ್ಮ ಬಾಲ್ಯ, ದೇಣಿಗೆ ಮತ್ತು ದಾನದ ಬಗೆಗಿನ ಅಭಿಪ್ರಾಯಗಳನ್ನು ಅರಿತುಕೊಳ್ಳುವುದು ಮೊದಲಾದವುಗಳ ಬಗ್ಗೆ ಬರೆದಿದ್ದಾರೆ. ಪೆಂಗ್ವಿನ್‌ ಪ್ರಕಾಶನ ಅವರ ಹೆಚ್ಚಿನ ಬರಹಗಳನ್ನು ಪ್ರಕಟಿಸಿವೆ. ಮನದ ಮಾತು ಎಂಬ ಕಾದಂಬರಿ, ಡಾಲರ್‌ ಸೊಸೆ, ಕಾವೇರಿಯಿಂದ ಮೆಕಾಂಗಿಗೆ, ಋಣ, ಹಕ್ಕಿಯ ತೆರದಲಿ, ಗುಟ್ಟೊಂದ ಹೇಳುವೆ ಎಂಬ ಅನೇಕ ಪ್ರಸ್ತಕಗಳನ್ನು ಬರೆದಿದ್ದಾರೆ. “ನನ್ನ ಅಜ್ಜಿಗೆ ನಾ ಹೇಗೆ ಓದಲು ಕಲಿಸಿದೆ ಮತ್ತು ಇತರ ಕಥೆಗಳು”. ಈ ಪುಸ್ತಕ 15 ಭಾಷೆಗಳಿಗೆ ಭಾಷಾಂತರಗೊಂಡಿದೆ.

ಇದನ್ನೂ ಓದಿ: ರಾಜ್ಯಸಭಾ ಸದಸ್ಯರಾಗಿ ಅವಧಿ ಮುಗಿದ ನಂತರ ಸಂಸತ್ ಬಗ್ಗೆ ಪುಸ್ತಕ ಬರೆಯುವೆ: ಸುಧಾ ಮೂರ್ತಿ

ಸುಧಾ ಮೂರ್ತಿಯವರಿಗೆ ಸಿಕ್ಕ ಪ್ರಶಸ್ತಿಗಳು

ಸುಧಾ ಮೂರ್ತಿಯವರಿಗೆ 11 ಗೌರವ ಡಾಕ್ಟರೇಟ್‌ಗಳು ಲಭಿಸಿವೆ. 2006 ಮತ್ತು 2023 ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2023ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2006 ರಲ್ಲಿ ಆರ್. ಕೆ. ನಾರಾಯಣ ಪ್ರಶಸ್ತಿ ಮತ್ತು 2011 ರಲ್ಲಿ ಕರ್ನಾಟಕ ಸರ್ಕಾರದಿಂದ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠತೆಗಾಗಿ ಅತ್ತಿಮಬ್ಬೆ ಪ್ರಶಸ್ತಿ, ಸಾಮಾಜಿಕ ಕಾರ್ಯಗಳಿಗಾಗಿ ಓಜಸ್ಟಿನಿ ಪ್ರಶಸ್ತಿ, ಮಿಲೇನಿಯಮ್ ಮಹಿಳಾ ಶಿರೋಮಣಿ ಪ್ರಶಸ್ತಿ, ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿ, ದೂರದರ್ಶನದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಹೀಗೆ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಇತ್ತೀಚೆಗೆ, ಸುಧಾ ಮೂರ್ತಿ ಅವರು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡರು.

ಹಾವೇರಿ ಜಿಲ್ಲೆಯ ಶಿಗ್ಗಾಂವದ ಡಾ. ಆರ್‌. ಹೆಚ್‌ ಕುಲಕರ್ಣಿ ಮತ್ತು ವಿಮಲಾ ದಂಪತಿಯ ಪುತ್ರಿಯಾಗಿ 1950ರ ಅಗಸ್ಟ್ 19ರಂದು ಸುಧಾ ಮೂರ್ತಿಯವರು ಜನಿಸಿದರು. ಸುಧಾ ಅವರ ತಂದೆಯವರು ಹುಬ್ಬಳ್ಳಿಯ ಕೆ. ಎಮ್. ಸಿ. ಯಲ್ಲಿ ಸ್ತ್ರೀರೋಗತಜ್ಞರು ಮತ್ತು ಪ್ರಾಧ್ಯಾಪಕರಾಗಿದ್ದರು. ಸುಧಾರವರು ಪ್ರಾಥಮಿಕ ಶಿಕ್ಷಣವನ್ನು ಶಿಗ್ಗಾಂವದಲ್ಲಿಯೇ ಪೂರೈಸಿದರು. 1966ರಲ್ಲಿ ಹುಬ್ಬಳ್ಳಿಯ ಇಂಗ್ಲೀಷ್ ಶಾಲೆಯಲ್ಲಿ ಎಸ್​ಎಸ್​ಎಲ್​ಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು. 1972ರಲ್ಲಿ ಬಿವಿಬಿ ಇಂಜನಿಯರಿಂಗ್ ಕಾಲೇಜಿನಿಂದ ಇಲೆಕ್ಟ್ರಿಕಲ್ ಇಂಜನಿಯರ್ ಮಾಡಿ ಮೊದಲ ರ್ಯಾಂಕ ಪಡೆದು ಪದವೀಧರೆಯಾದರು. 1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್​ನಲ್ಲಿ ಚಿನ್ನದ ಪದಕದೊಂದಿಗೆ ಅತ್ಯುತ್ನತ ಸ್ಥಾನ ಪಡೆದು ಎಂ. ಇ. ಸ್ನಾತಕೋತ್ತರ ಪದವಿಯನ್ನು ಮುಗಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:18 pm, Mon, 2 September 24