ಕಡತ ಜಟಾಪಟಿ: IPS ವರ್ತಿಕಾ ಆರೋಪಕ್ಕೆ ಟ್ವಿಸ್ಟ್, ಸಿಎಸ್ಗೆ ಸ್ಪಷ್ಟನೆ ನೀಡಿದ ಡಿ ರೂಪಾ
ಕರ್ನಾಟಕ ಐಪಿಎಸ್ ಅಧಿಕಾರಿಗಳಾದ ವರ್ತಿಕಾ ಕಟಿಯಾರ್ ಹಾಗೂ ಡಿ ರೂಪಾ ಮೌದ್ಗಿಲ್ ನಡುವಿನ ಆರೋಪ ಪ್ರತ್ಯಾರೋಪ ಜೋರಾಗಿದೆ. ಈಗಾಗಲೇ ರೂಪ ವಿರುದ್ಧ ವರ್ತಿಕಾ ಅವರು ಕೆಲ ಗಂಭೀರ ಆರೋಪಗಳನ್ನು ಮಾಡಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಯಾವುದೇ ಮಾಹಿತಿ ನೀಡದೇ ತಮ್ಮ ಕಚೇರಿ ಕಡತ ತರಿಸಿಕೊಂಡಿದ್ದಾರೆ ಅಂತೆಲ್ಲಾ ಆರೋಪ ಮಾಡಿದ್ದಾರೆ. ಇದರ ಬೆನಲ್ಲೇ ಇದೀಗ ವರ್ತಿಕಾ ದೂರಿಗೆ ಪ್ರತಿಯಾಗಿ ರೂಪಾ ಅವರು ಸಹ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಇಬ್ಬರು ಐಪಿಎಸ್ ಗುದ್ದಾಟಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಹಾಗಾದ್ರೆ, ಐಪಿಎಸ್ ಡಿ ರೂಪಾ ಅವರು ಬರೆದ ಪತ್ರದಲ್ಲೇನಿದೆ? ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮಾರ್ಚ್ 05): ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ನೀಡಿದ್ದ ದೂರಿಗೆ ಇದೀಗ ಸ್ವತಃ ಡಿ ರೂಪಾ ಮೌದ್ಗಿಲ್ ಅವರೇ ಸ್ಪಷ್ಟೀಕರಣ ನಿಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಆಂತರಿಕ ಭದ್ರತಾ ವಿಭಾಗದ ಡಿಐಜಿ ವರ್ತಿಕಾ ಕಟಿಯಾರ್ ಅವರು ಕೆಲವು ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿ ಸುಳ್ಳು ದೂರು ನೀಡಿದ್ದಾರೆ ಎಂದು ತಮ್ಮ ಮೇಲಿನ ಒಂದೊಂದು ಆರೋಪಕ್ಕೂ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಈ ಮೂಲಕ ವರ್ತಿಕಾ ಅವರು ಶಿಸ್ತಿನ ಇಲಾಖೆಯಲ್ಲಿ ಇದ್ದುಕೊಂಡು ಅಶಿಸ್ತಿನ ರೀತಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ರೂಪಾ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ರೂಪಾ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಅವರನ್ನು ಸಿವಿ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಇಂದು(ಮಾರ್ಚ್ 05) ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿದ್ದ ರೂಪಾ ಅವರನ್ನು ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಎಂಡಿ ಆಗಿ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಐಪಿಎಸ್ ಡಿ ರೂಪಾ ವಿರುದ್ಧ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್ಗೆ ವರ್ಗಾವಣೆ ಭಾಗ್ಯ!
ರೂಪಾ ಸ್ಪಷ್ಟೀಕರಣದ ಪತ್ರದಲ್ಲೇನಿದೆ?
6-9-2024ರಂದು ಕೆಲವು ಕಾನ್ಸ್ಟೆಬಲ್ಗಳು ಫೈಲ್ಗಳನ್ನು ತಮ್ಮ ಕೊಠಡಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಹಾಗೇ ಕೆಲ ಫೈಲ್ಗಳ ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರು(ವರ್ತಿಕಾ) ಹೇಳುತ್ತಾರೆ. ಆದ್ರೆ, ಅವರು ಯಾವುದೇ ಪುರಾವೆಗಳಿಲ್ಲದೆ ಈ ಅಸಂಬದ್ಧ ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕಾನ್ಸ್ಟೆಬಲ್ಗಳ ಯಾವುದೇ ಹೇಳಿಕೆಗಳಿಲ್ಲ, ಫೈಲ್ಗಳ ಫೋಟೋ ತೆಗೆದುಕೊಂಡಿರುವ ಯಾವುದೇ ಪುರಾವೆಗಳಿಲ್ಲ. ಅವರ ಕೊಠಡಿ ಮತ್ತು ನನ್ನ ಕೊಠಡಿಯ ಮುಂದಿನ ಕಾರಿಡಾರ್ನಲ್ಲಿ ಕನಿಷ್ಠ 5 ಸಿಸಿಟಿವಿ ಕ್ಯಾಮೆರಾಗಳಿವೆ. ಅವರು ಯಾವುದೇ ಸಿಸಿಟಿವಿ ದೃಶ್ಯಾವಳಿಗಳನ್ನು ಲಗತ್ತಿಸಿಲ್ಲ ಎಂದು ರೂಪಾ ಅವರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಈ ರೀತಿ ಘಟನೆ ನಡೆದಿದ್ದರೆ ಅವರು (ವರ್ತಿಕಾ) ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಹಿರಿಯ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ? ನನ್ನ ಮೇಲೆ ಎಡಿಜಿ ಐಎಸ್ಡಿ ಇದ್ದಾರೆ. ಪೊಲೀಸ್ ಮಹಾನಿರ್ದೇಶಕ ಐಎಸ್ಡಿ ಇದ್ದಾರೆ ಮತ್ತು ಪೊಲೀಸ್ ಪಡೆಯ ಮುಖ್ಯಸ್ಥರಾಗಿರುವ ಡಿಜಿ ಮತ್ತು ಐಜಿಪಿ ಇದ್ದಾರೆ. ಈ ಬಗ್ಗೆ ಅವರು ಏಕೆ ಇವರುಗಳ ಗಮನಕ್ಕೆ ತರಲಿಲ್ಲ. ನನ್ನ ಮೇಲೆ ಕೆಲವು ಕಡತಗಳ ಕಳ್ಳತನ ಮಾಡಿರುವ ಆರೋಪಿಗಳನ್ನು ಮಾಡುತ್ತಿದ್ದಾರೆ. ಅವರು ನಿಷ್ಪಕ್ಷಪಾತ ತನಿಖೆಗಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ.
ಅವರು ಸ್ವತಃ ನ್ಯಾಯಾಧೀಶರಾಗಿದ್ದಾರೆ. ಅವರು ನನ್ನ ಖ್ಯಾತಿಗೆ ಕಳಂಕ ತರುವ ಮತ್ತು ನನಗೆ ಮಾನಹಾನಿ ಮಾಡುವ ಏಕೈಕ ಉದ್ದೇಶದಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರ ಕ್ರಮಗಳು ಅಶಿಸ್ತು ಮತ್ತು ಘೋರ ದುಷ್ಕೃತ್ಯಕ್ಕೆ ಸಮಾನ. ಪೊಲೀಸ್ ಇಲಾಖೆಯು ಶಿಸ್ತುಬದ್ಧವಾಗಿದೆ. ಮುಖ್ಯ ಕಾರ್ಯದರ್ಶಿಗೆ ನೇರವಾಗಿ ಬರೆಯುವ ಕ್ರಮಗಳು ಅವಿಧೇಯತೆಗೆ ಸಮಾನವಾಗಿರುತ್ತದೆ. ಹೀಗಾಗಿ ವರ್ತಿಕಾ ಕಟಿಯಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮೇಲ್ನೋಟಕ್ಕೆ ಆರೋಪಗಳು ಅಸಂಬದ್ಧವಾಗಿವೆ. ಏಕೆಂದರೆ ನಾನು ಹಿರಿಯ ಅಧಿಕಾರಿಯಾಗಿದ್ದೇನೆ. ಹೀಗಾಗಿ ಅಧಿಕೃತವಾಗಿ ಯಾವುದೇ ಫೈಲ್ಗಳನ್ನು ತರಸಿಕೊಳ್ಳಬಹುದು ಮತ್ತು ವಿಲೇವಾರಿ ಮಾಡಬಹುದು. ಆದ್ರೆ, ಅವರು ಯಾವುದೇ ತಲೆಬುಡವಿಲ್ಲದ ಸುಳ್ಳು ಹೇಳುತ್ತಿದ್ದಾರೆ. ವರ್ತಿಕಾ ಕಟಿಯಾರ್ ಅವರು ವೈಯಕ್ತಿಕ ಕಾರಣಗಳಿಗಾಗಿ ಇತರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಎಂದು ಕೆಲ ಉದಾಹರಣೆಗಳ ಸಮೇತ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಅವರು 2010 ರ ಐಪಿಎಸ್ ಬ್ಯಾಚ್ಗೆ ಸೇರಿದವರಾಗಿದ್ದು, ಹೈದರಾಬಾದ್ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಪ್ರೊಬೆಷನರ್ ಆಗಿ ತರಬೇತಿ ಪಡೆಯುತ್ತಿದ್ದಾಗ ಐಪಿಎಸ್ ವಿಪುಲ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಲಿಖಿತ ದೂರು ನೀಡಿದ್ದರು. ವಿಪುಲ್ ಕುಮಾರ್ ಒಬ್ಬ ಅತ್ಯುತ್ತಮ ಅಧಿಕಾರಿ ಮತ್ತು ಅವರು ಕರ್ನಾಟಕ ಕೇಡರ್ಗೆ ಸೇರಿದವರು ಎಂದು ನಮಗೆಲ್ಲರಿಗೂ ತಿಳಿದಿದೆ. ಆದ್ರೆ ಆ ದೂರು ಸುಳ್ಳು ಎಂದು ತಿಳಿದುಬಂತು.
ತಮ್ಮ ಪತಿ ನಿತಿನ್ ಯೆಯೋಲಾ ವಿರುದ್ಧವೇ ಸುಳ್ಳು ದೂರು ನೀಡಿದ್ದರು. ಎಂಎಸ್ ಕಟ್ಟಡದ 6ನೇ ಮಹಡಿಯಲ್ಲಿರುವ ತಮ್ಮ ಕಚೇರಿಗೆ ಆ್ಯಸಿಡ್ ಎರಚಲು ಬಂದಿದ್ದರು. ಕೊಲ್ಲುವ ಉದ್ದೇಶ ಹೊಂದಿದ್ದರು. ಆದರೆ, ಕಚೇರಿಯಲ್ಲಿ ಇಲ್ಲದ ಕಾರಣ ತಪ್ಪಿಸಿಕೊಂಡೆ ಎಂದು ತಮ್ಮ ಪತಿ ವಿರುದ್ಧವೇ ಆರೋಪಿಸಿದ್ದರು ಎಂದು ರೂಪಾ ಅವರು ವರ್ತಿಕಾ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸುಳ್ಳು ಆರೋಪಗಳನ್ನು ಹೊರಿಸಿ ಮಾಧ್ಯಮಗಳಿಗೆ ಸೋರಿಕೆ ಮಾಡಿ ತೀವ್ರ ದುಷ್ಕೃತ್ಯ ಮತ್ತು ಅಶಿಸ್ತಿನ ಕೃತ್ಯ ಎಸಗಿದ್ದಕ್ಕಾಗಿ ಸರ್ಕಾರ ಅವರ (ವರ್ತಿಕಾ) ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ರೂಪಾ ಅವರು ಸಿಎಸ್ಗೆ ಬರೆದಲ್ಲಿ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:15 pm, Wed, 5 March 25







