ಮುಂಬಡ್ತಿ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಡಿ ರೂಪಾಗೆ ಪ್ರಮುಖ ಹುದ್ದೆ: ಐಎಎಸ್ ರೋಹಿಣಿ ಸಿಂಧೂರಿ ಕೂಡ ಟ್ರಾನ್ಸ್ಫರ್
ಎರಡು ವಾರ ಹಿಂದಷ್ಟೇ ಹೈಕೋರ್ಟ್ ಆದೇಶದ ಮೇರೆಗೆ ಮುಂಬಡ್ತಿ ನೀಡಲಾಗಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ಕರ್ನಾಟಕ ಸರ್ಕಾರ ಗುರುವಾರ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೊರ್ಸ್ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ. ಮತ್ತೊಂದೆಡೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಎಂಡಿಯನ್ನಾಗಿ ಅಕ್ರಂ ಪಾಷಾರನ್ನು ನೇಮಕ ಮಾಡಲಾಗಿದೆ. ವಿವರಗಳು ಇಲ್ಲಿವೆ.

ಬೆಂಗಳೂರು, ಜೂನ್ 12: ಎರಡು ವಾರ ಹಿಂದಷ್ಟೇ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (D. Roopa Moudgil) ಅವರಿಗೆ ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿದ್ದ ಕರ್ನಾಟಕ ಸರ್ಕಾರ (Karnataka Government) ಇದೀಗ ಅವರನ್ನು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೊರ್ಸ್ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದೇ ರೀತಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಇತರ ಕೆಲವು ಮಂದಿ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದೆ.
ಡಿ. ರೂಪಾ ಮೌದ್ಗಿಲ್ ಅವರನ್ನು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೊರ್ಸ್ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯು ಎಡಿಜಿಪಿ ಹುದ್ದೆಗೆ ಸಮನಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ. ರೂಪಾ ಮೌದ್ಗಿಲ್ ಅವರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶದ ಅನುಸಾರ ಎರಡು ವಾರಗಳ ಹಿಂದೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿತ್ತು. ನ್ಯಾಯವಾಗಿ ತಮಗೆ ಸಿಗಬೇಕಾದ ಬಡ್ತಿ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ರೂಪಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಜನೋಪಯೋಗಿ ಕೆಲಸಗಳಲ್ಲಿಯೂ ಅತ್ಯಂತ ಪ್ರಮುಖ ಜವಾಬ್ದಾರಿಯೊಂದನ್ನು ಬಿಎಮ್ಟಿಎಫ್ ಗೆ ಸರಕಾರ ನೀಡಿದೆ. ಆ ಪ್ರಕಾರ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಗಳಿಗೆ ಸೇರಿದ ಆಸ್ತಿ ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ನಿರ್ವಹಣೆಗಾಗಿ ಸರ್ಕಾರದಿಂದ ಹಸ್ತಾಂತರಿಸಲ್ಪಟ್ಟ ಕೆರೆ, ಸರೋವರಗಳು ಮತ್ತು ಕೆರೆ-ಹಾಸುಗಳ ರಕ್ಷಣೆ ಮಾಡುವ ಕೆಲಸ ಬಿ ಎಮ್ ಟಿ ಎಫ್ದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ರೂಪಾ ಅವರಿಗೆ ಪ್ರಮುಖ ಜವಾಬ್ದಾರಿಯುತ ಹುದ್ದೆಯೊಂದನ್ನು ಸರಕಾರ ನೀಡಿದಂತಾಗಿದೆ.
ರೋಹಿಣಿ ಸಿಂಧೂರಿ ಕೂಡ ವರ್ಗಾವಣೆ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕೃಷಿ ಇಲಾಖೆಯ (ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ) ಕಾರ್ಯದರ್ಶಿ ಹುದ್ದೆಯಿಂದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಹೈಕೋರ್ಟ್ನ ಆದೇಶಕ್ಕೆ ಮಣಿದ ಸರ್ಕಾರ: ಐಪಿಎಸ್ ಅಧಿಕಾರಿ ರೂಪಾಗೆ ಮುಂಬಡ್ತಿ
ಐಎಎಸ್ ಅಧಿಕಾರಿ ಅಕ್ರಂ ಪಾಷಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಎಸ್ಆರ್ಟಿಸಿ ಎಂಡಿ ಆಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Thu, 12 June 25







