ಫ್ರಿ ವಿದ್ಯುತ್ ನಡುವೆಯೂ ಬಂತು 40-50 ಸಾವಿರ ರೂ. ಕರೆಂಟ್ ಬಿಲ್; ಕೂಸನೂರು ಗ್ರಾಮಸ್ಥರು ಶಾಕ್

ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಆ ಗ್ರಾಮಸ್ಥರಿಗೆ ಶಾಕ್ ನೀಡಿದೆ. ಈ ಗ್ಯಾರಂಟಿ ಯೋಜನೆಗಳಲ್ಲಿ ಜನರನ್ನ ಅತೀ ಹೆಚ್ಚು ಆಕರ್ಷಿಸಿದ್ದ ಗೃಹ ಜ್ಯೋತಿ ಯೋಜನೆಯೇ ಇದೀಗ ಮಗ್ಗುಲ ಮುಳ್ಳಾಗಿದೆ. ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದ ಸರ್ಕಾರ, ಪ್ರತಿ ಮನೆಗೂ 40 ರಿಂದ 50 ಸಾವಿರ ರೂ. ಬಿಲ್ ನೀಡಿದೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಫ್ರಿ ವಿದ್ಯುತ್ ನಡುವೆಯೂ ಬಂತು 40-50 ಸಾವಿರ ರೂ. ಕರೆಂಟ್ ಬಿಲ್; ಕೂಸನೂರು ಗ್ರಾಮಸ್ಥರು ಶಾಕ್
ವಿದ್ಯುತ್​ ಬಿಲ್​ ನೋಡಿ ಕೂಸನೂರು ಗ್ರಾಮಸ್ಥರು ಶಾಕ್
Edited By: ಕಿರಣ್ ಹನುಮಂತ್​ ಮಾದಾರ್

Updated on: Oct 10, 2024 | 4:49 PM

ಕಲಬುರಗಿ, ಅ.10: ಜೆಸ್ಕಾಂ ಕೊಟ್ಟ ಶಾಕ್‌ನಿಂದ ಕಲಬುರಗಿ(Kalaburagi) ತಾಲೂಕಿನ ಕುಸನೂರು ಗ್ರಾಮಸ್ಥರು ಕಂಗಲಾಗಿದ್ದಾರೆ. ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಪಡೆದು ತಿಂಗಳಿಗೆ 100 ರಿಂದ 200 ರೂ. ಬಿಲ್ ಪಡೆಯುತ್ತಿದ್ದ ಕೂಸನೂರು ಗ್ರಾಮಸ್ಥರು, ಈ ತಿಂಗಳು ಬರೊಬ್ಬರಿ 18 ಸಾವಿರ, 20 ಸಾವಿರ, 49 ಸಾವಿರದಂತೆ ಅಡ್ಡಾದಿಡ್ಡಿ ಬಿಲ್ ನೋಡಿ ಕಂಗಾಲಾಗಿದ್ದಾರೆ. ಕಳೆದ ತಿಂಗಳಷ್ಟೆ ಸಾವಿರ ರೂಪಾಯಿ ಬಿಲ್‌ ಕಟ್ಟಿದ್ದ ಮಹಿಳೆಗೆ, ಈ ತಿಂಗಳು ಬರೋಬ್ಬರಿ 11 ಸಾವಿರ ಬಿಲ್ ಬಂದಿದೆ. ಹೀಗಾಗಿ ಕೂಲಿ ನಾಲಿ ಮಾಡಿ ಬದುಕುವ ಜನ ಇಷ್ಟೊಂದು ಬಿಲ್ ಎಲ್ಲಿಂದ ಕಟ್ಟುವುದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೂಸನೂರು ಗ್ರಾಮಸ್ಥರು ಬಹುತೇಕ ಕೃಷಿ ಚಟುವಟಿಕೆ ಮತ್ತು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನ ನೀಡಿ ಜನರ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ಭರವಸೆ ಇಟ್ಟುಕೊಂಡಿದ್ದಾರೆ. ಆದರೆ, ಇಷ್ಟೊಂದು ದೊಡ್ಡಮಟ್ಟದ ಬಿಲ್ ನೋಡಿ ಆಘಾತಗೊಳಗಾಗಿದ್ದಾರೆ. ಅಲ್ಲದೇ ಸರ್ಕಾರ ನಮಗೆ ಉಚಿತ ಕೊಡ್ತಿನಿ ಎಂದು ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಇಂಧನ ಸಚಿವರೇ ಇತ್ತ ಗಮನ ಹರಿಸಿ: ವಿದ್ಯುತ್ ಸಮಸ್ಯೆಯಿಂದ ಹೈರಾಣಾದ ಬಳ್ಳಾರಿ ಜೀನ್ಸ್ ಉದ್ಯಮಿಗಳು

ಈ ಗ್ರಾಮಕ್ಕೆ ಜೆಸ್ಕಾಂ ಎಇಇ ಭೇಟಿ ನೀಡಿದಾಗ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಬಾಡಿಗೆ ಮನೆಯಲ್ಲಿದ್ದವರಿಗೂ 28 ಸಾವಿರ ಬಿಲ್ ಬಂದಿದೆ. ಎಲ್ಲಿಂದ ಕಟ್ಟಬೇಕು ಎಂದು ಗಲಾಟೆ ಮಾಡಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಸ್ಕಾಂ ಎಇಇ ಸುನೀಲ್ ಕುಮಾರ್, ‘ಮೀಟರ್ ರೀಡರ್ ಮಾಡಿದ ಎಡವಟ್ಟಿನಿಂದ ಹಿಗೇ ಬಿಲ್ ಹೆಚ್ಚಿಗೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ‌ನೀಡಿದ್ದಾರೆ. ಅಲ್ಲದೇ ಜನ ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ, ಇದೀಗ ಸಾರ್ವಜನಿಕರಿಗೆ ವಿದ್ಯುತ್ ಬಿಲ್ ‌ಮೂಲಕ ಶಾಕ್ ನೀಡಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ. ಸಾರ್ವಜನಿಕರ ಸಹನೆ ಕಟ್ಟೆಯೊಡೆಯುವ ಮುನ್ನ ಜೆಸ್ಕಾಂ ಎಚ್ಚೆತ್ತುಕೊಳ್ಳಬೇಕಾಗಿದೆ‌. ಅದೇನೆ ಇರಲಿ ಉಚಿತ ವಿದ್ಯುತ್ ಅಂತ ಹೇಳಿದ್ದ ಸರ್ಕಾರ ಇದನ್ನ ಆದಷ್ಟು ಬೇಗ ಬಗೆಹರಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Thu, 10 October 24

Loading...
Unable to load recommendations.
Follow Us