ಪಂಚಮಸಾಲಿ ಹೋರಾಟ ಕಡೆಗಣಿಸಿದ್ರೆ ಕುರ್ಚಿ ಅಲ್ಲಾಡುತ್ತೆ: ಸಿಎಂಗೆ ಜಯಮೃತ್ಯುಂಜಯ ಶ್ರೀ ಎಚ್ಚರಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Mar 12, 2024 | 10:12 PM

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಮತ್ತೆ ಪಂಚಮಸಾಲಿ 2ಎ ಮೀಸಲಾತಿ ಕಿಚ್ಚು ಹೊತ್ತಿಕೊಂಡಿದೆ. ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿ ಮುನ್ನ ಪಂಚಮಸಾಲಿ ಲಿಂಗಾಯದ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಸಹ ನೀಡಿದ್ದಾರೆ.

ಪಂಚಮಸಾಲಿ ಹೋರಾಟ ಕಡೆಗಣಿಸಿದ್ರೆ ಕುರ್ಚಿ ಅಲ್ಲಾಡುತ್ತೆ: ಸಿಎಂಗೆ ಜಯಮೃತ್ಯುಂಜಯ ಶ್ರೀ ಎಚ್ಚರಿಕೆ
Follow us on

ಕಲಬುರಗಿ, (ಮಾರ್ಚ್ 12) : ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿ ಮುನ್ನ ಪಂಚಮಸಾಲಿ ಲಿಂಗಾಯದ ಸಮಾಜಕ್ಕೆ 2ಎ ಮೀಸಲಾತಿ (Panchamasali 2A Reservation) ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಮಾಜ ಬಹಳಷ್ಟು ಅಸಮಾಧಾನಗೊಳ್ಳುತ್ತದೆ. ಪಂಚಮಸಾಲಿ ಹೋರಾಟ ಕಡೆಗಣಿಸಿದವರ ಕುರ್ಚಿ ಅಲ್ಲಾಡಿಸುವ ಶಕ್ತಿ ನಮ್ಮ ಸಮಾಜಕ್ಕೆ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ(jayamrityunjaya sri)  ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಒಬಿಸಿ ಮೀಸಲಾತಿ ಆಗ್ರಹಿಸಿ ಇಂದು (ಮಾರ್ಚ್ 12) ಕಲಬುರಗಿಯ ಶರಣಬಸವೇಶ್ವರರ ಮೈದಾನದಲ್ಲಿ ನಡೆದ ಪಂಚಮಸಾಲಿ ಲಿಂಗಾಯತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿ, ಮೀಸಲಾತಿ ಆದೇಶ ಪ್ರತಿ ಸಿಗುವವರೆಗೆ ನಮ್ಮ ಸಮಾಜದ ಹೋರಾಟ ನಿಲ್ಲಲ್ಲ, ನಮ್ಮ ಸಮಾಜದ ಎಲ್ಲಾ ಶಾಸಕರು ಗಟ್ಟಿ ಧ್ವನಿ ಎತ್ತಬೇಕು. ಕಾಂತರಾಜ ವರದಿ ನಮ್ಮ ಸಮಾಜ ಯಾವುದೇ ಕಾರಣಕ್ಕೂ ಒಪ್ಪಲ್ಲ. ನಾವು ಸುಮ್ಮನೆ ಕುಳಿತರೆ ನಮ್ಮ ಹೋರಾಟ ತಣ್ಣಗಾಗುತ್ತದೆ, ಅದಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರದಲ್ಲಿ ಈ ಸಮಾವೇಶ ಮಾಡಲಾಗುತ್ತಿದೆ. ನಾವು ಎಂದೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ, ಪಂಚಮಸಾಲಿ ಹೋರಾಟದಿಂದ ಸಮಗ್ರ ಲಿಂಗಾಯತರು ಒಂದು ಎಂಬ ಭಾವನೆ ಮೂಡಿದೆ ಎಂದು ತಿಳಿಸಿದರು.

ಈ ಸರ್ಕಾರಕ್ಕೂ ನಾವು ನಮ್ಮ ಹಕ್ಕನ್ನು ಮಂಡಿಸಿದ್ದೇವೆ. ಈಗ ಆರನೇ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ. ಪಂಚಮಸಾಲಿ ಮೀಸಲಾತಿಗಾಗಿ ಇಡೀ ಕರ್ನಾಟಕ ಒಂದಾಗಿದೆ. ಹೊಸ ಸರ್ಕಾರ ಬಂದಮೇಲೂ ಪಂಚಮಸಾಲಿ ಹೋರಾಟ ಮುಂದುವರಿದಿದೆ. ಪಂಚಮಸಾಲಿ ಹೋರಾಟ ಮುಗಿದೆ ಹೋಯಿತು ಅಂತ ಕೆಲವರು ಅಂದುಕೊಂಡಿದ್ದಾರೆ. ಆದರೆ, ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಲ್ಲ. ಯಡಿಯೂರಪ್ಪರಿಗೆ ಒತ್ತಾಯ ಮಾಡಿದ ಹಾಗೆ ಸಿದ್ದರಾಮಯ್ಯ ಮೇಲೂ ಒತ್ತಡ ಹಾಕುತ್ತಿದ್ದೇವೆ. ನಾನು ಯಾವುದೇ ಸರ್ಕಾರದ ಮೇಲೆ ಗುಡುಗುವುದಿಲ್ಲ, ಸರ್ಕಾರದ ಕಣ್ತೆರೆಸಲು ಹೋರಾಟ ಮಾಡುತ್ತಿದ್ದೇವೆ. ಆದರೆ, ಸರ್ಕಾರ ಕಣ್ತೆರೆಯುತ್ತಿಲ್ಲ. ಮೂರು ಅಧಿವೇಶನ ಮುಗಿದರೂ ನಮ್ಮ ಕೂಗು ಈ ಸರ್ಕಾರಕ್ಕೆ ಮುಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ