
ಕಲಬುರಗಿ, ಸೆ.15: ಬಿಸಿಲನಾಡು ಕಲಬುರಗಿಯಲ್ಲಿ ಗೌರಿ-ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದ್ದು, ನಾಡಿನಾದ್ಯಂತ ವಿಘ್ನನಿವಾರಕ ಎಕದಂತನನ್ನು ಭಕ್ತಿ-ಸಡಗರದಿಂದ ಬರಮಾಡಿಕೊಳ್ಳಲಾಗಿದೆ. ಈ ಬಾರಿ ಕಲಬುರಗಿ ನಗರದ ಕೋಟೆ ಎದುರು ಸ್ಥಾಪಿಸಲಾಗಿರುವ ‘ಹಿಂದೂ ಮಹಾಗಣಪತಿ’ ಭಕ್ತಾದಿಗಳಿಗೆ ಹಿಮಾಲಯದ ಕೇದಾರನಾಥ ಪುಣ್ಯಕ್ಷೇತ್ರದ ಅನುಭೂತಿಯನ್ನು ನೀಡುತ್ತಿದ್ದು, ಸಾರ್ವಜನಿಕರ ಕಣ್ಣುಸೆಳೆಯುತ್ತಿದೆ.
ಪ್ರತಿವರ್ಷವೂ ವಿನೂತನ ಪರಿಕಲ್ಪನೆಯೊಂದಿಗೆ ಗಣೇಶೋತ್ಸವ ಆಚರಿಸುವ ಹಿಂದೂ ಮಹಾಗಣಪತಿ ಸಮಿತಿಯ ಅಭೂತಪೂರ್ವ ಥೀಮ್, ಈ ಬಾರಿಯ ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಕಲಬುರಗಿಯ ಕೋಟೆ ಮುಂಭಾಗದಲ್ಲಿ ಅತ್ಯಂತ ಭವ್ಯವಾಗಿ ನಿರ್ಮಿಸಲಾಗಿರುವ ಪೆಂಡಾಲ್ ಥೇಟ್ ಹಿಮಾಲಯದ ಕೇದಾರನಾಥ ದೇವಾಲಯದ ಮಾದರಿಯಲ್ಲಿದೆ.
ಕೇದಾರನಾಥ ಮಂದಿರದ ಮಾದರಿಯ ಗರ್ಭಗುಡಿಯಲ್ಲಿ ವಿಘ್ನ ವಿನಾಶಕ ಗಣೇಶನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿದೆ. ಕೇದಾರನಾಥ ಶಿವಲಿಂಗದ ಜೊತೆಗೆ ಪೆಂಡಾಲ್ನಲ್ಲಿ ಭಕ್ತಾದಿಗಳಿಗಾಗಿ 12 ಜ್ಯೋತಿರ್ಲಿಂಗಗಳ ದರ್ಶನಕ್ಕೂ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಬುರಗಿಯಲ್ಲೇ ಇದ್ದು ಹಿಮಾಲಯದ ಕೇದಾರನಾಥ ಯಾತ್ರೆ ಮಾಡಿದ ಅನುಭವವನ್ನು ಜನತೆ ಪಡೆಯುತ್ತಿದ್ದಾರೆ.
ಹಿಂದೂ ಮಹಾಗಣಪತಿ ಸಮಿತಿಯ ಸದಸ್ಯ ಬಸವರಾಜ್ ಮಾತನಾಡಿ, ಸಮಿತಿಯು ಪ್ರತಿವರ್ಷ ವಿಶಿಷ್ಟ ಪರಿಕಲ್ಪನೆಯಲ್ಲಿ ಗಣೇಶೋತ್ಸವ ಆಚರಿಸುವ ಸಂಪ್ರದಾಯ ಇಟ್ಟುಕೊಂಡಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿ ಪೆಂಡಾಲ್. ಅದಕ್ಕೂ ಹಿಂದಿನ ವರ್ಷ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿ ಮಾಡಲಾಗಿತ್ತು. ಈ ಬಾರಿ ಬಿಸಿಲನಾಡಿನ ಜನರಿಗೆ ಹಿಮಾಲಯದ ಅನುಭವ ನೀಡಲು ಕೇದಾರನಾಥ ಮಂದಿರ ಮಾದರಿ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದ ಗಾಳಿಯ ಗುಣಮಟ್ಟ ವರದಿ: ಕರಾವಳಿಯಲ್ಲಿ ಉತ್ತಮ, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾಧಾರಣ
ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹಾಗಣಪತಿಯನ್ನು ವೈಭವದಿಂದ ಸ್ವಾಗತಿಸಲಾಗಿದ್ದು, ಕೇದಾರನಾಥ ಗಣೇಶನ ದರ್ಶನ ಪಡೆಯಲು ಭಕ್ತರು ತಂಡೋಪತಂಡವಾಗಿ ಹರಿದುಬರುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ