ಕಲಬುರಗಿ: ವಿದ್ಯಾರ್ಥಿ ಸ್ವಯಂ ಪ್ರೇರಿತವಾಗಿ ಜನಿವಾರ ತೆಗೆದಿದ್ದನೇ? ಸಿಬ್ಬಂದಿ ಈಗ ಹೇಳೋದೇ ಬೇರೆ!
ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ, ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ಪರೀಕ್ಷಾ ಸಿಬ್ಬಂದಿ ತೆಗೆಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಬ್ರಾಹ್ಮಣ ಸಮುದಾಯ ಮತ್ತು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಈ ನಡುವೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಕಲಬುರಗಿ, ಮೇ 05: ಕಲಬುರಗಿಯ (Kalaburagi) ಸೇಂಟ್ ಮೇರಿ ಶಾಲೆಯಲ್ಲಿ ರವಿವಾರ (ಮೇ. 04) ನಡೆದಿದ್ದ ನೀಟ್ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ (Brahaman) ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಅವರ ಜನಿವಾರವನ್ನು (Janivara) ಪರೀಕ್ಷಾ ಕೇಂದ್ರ ಸಿಬ್ಬಂದಿ ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಸಂಬಂಧ ಬ್ರಾಹ್ಮಣ ಸಮುದಾಯ ಮತ್ತು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪ್ರಕರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ತಮ್ಮ ವರಸೆಯನ್ನು ಬದಲಿಸಿದ್ದಾರೆ.
ಪರೀಕ್ಷಾ ಕೇಂದ್ರ ಸಿಬ್ಬಂದಿ ಹೇಳುತ್ತಿರುವುದು ಏನು?
“ಪರೀಕ್ಷೆ ಬರೆಯಲು ಬಂದ ಎಲ್ಲ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ನೀಟ್ ಪರೀಕ್ಷಾ ನಿಯಮಗಳನ್ನು ತಿಳಿಸಿದೆವು. ಬಳಿಕ, ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಡಿಸಿದೆವು. ಈ ವೇಳೆ, ವಿದ್ಯಾರ್ಥಿಗಳು ತಮ್ಮ ಕೈ ಯಲ್ಲಿ ಕಟ್ಟಿರುವ ದಾರ, ಕೊರಳಲ್ಲಿನ ತಾಯತಗಳನ್ನು ತೆಗೆದರು. ಎಲ್ಲ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಚಿಹ್ನೆಗಳನ್ನು ತೆಗೆಯುತ್ತಿದ್ದಂತೆ ಶ್ರೀಪಾದ ಪಾಟೀಲ್ ಕೂಡ ಜನಿವಾರ ತೆಗೆದಿದ್ದಾನೆ. ನಾವು ಜನಿವಾರ ತೆಗೆದಿಡು ಅಂತ ಹೇಳಿಲ್ಲ. ತಾನಾಗಿಯೇ ತೆಗೆದಿದ್ದಾನೆ. ಬೇರೆ ಯಾವ ಬ್ರಾಹ್ಮಣ ವಿದ್ಯಾರ್ಥಿ ಕೂಡ ಜನಿವಾರ ತೆಗೆದಿಲ್ಲ. ನಾವು ಜನಿವಾರ ತೆಗೆಸುತ್ತಿರಲಿಲ್ಲ. ಶ್ರೀಪಾದ ಪಾಟೀಲ್ ಜನಿವಾರ ತೆಗೆದು, ಬಳಿಕ ಹೊರಗೆ ಹೋಗಿ ತಮ್ಮ ತಂದೆಯವರಿಗೆ ನೀಡಿದ್ದಾರೆ” ಪರೀಕ್ಷಾ ಕೇಂದ್ರ ಸಿಬ್ಬಂದಿ ಹೇಳಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಅರೆಸ್ಟ್
ಪ್ರಕರಣ ಸಂಬಂಧ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಎಸ್.ಡಿ.ಶರಣಪ್ಪ ಮಾತನಾಡಿ, ಸದ್ಯ ಇಬ್ಬರನ್ನು ಸಿಬ್ಬಂದಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದೇವೆ. ವಿದ್ಯಾರ್ಥಿ ದೂರು ಆಧರಿಸಿ ಶರಣಗೌಡ, ಗಣೇಶ ಎಂಬುವರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಿದ್ದೇವೆ ಎಂದರು.
ಈ ಇಬ್ಬರು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ರವಿವಾರ ಸೇಂಟ್ ಮೇರಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿತ್ತು. ಸದ್ಯ ಪ್ರಕರಣದ ತನಿಖೆ ಮುಂದುವರಿಸಿದ್ದೇವೆ ಡಾ.ಎಸ್.ಡಿ.ಶರಣಪ್ಪ ಎಂದು ತಿಳಿಸಿದರು.
ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲೂ ಜನಿವಾರ ತೆಗೆಸಿದ ಅಧಿಕಾರಿಗಳು
ನೀಟ್ ನಿಯಮಗಳು
- ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಅಭ್ಯರ್ಥಿಗಳು ಕಟ್ಟುನಿಟ್ಟಾದ ಡ್ರೆಸ್ ಕೋಡ್ ನಿಯಮ ಪಾಲಿಸಬೇಕು.
- ಜನಿವಾರ ಕುರಿತಂತೆ ನಿರ್ದಿಷ್ಟವಾಗಿ ಯಾವುದೇ ಸ್ಪಷ್ಟ ನಿಯಮವನ್ನು NTA ನೀಡಿಲ್ಲ
- ಜನಿವಾರ ತೆಗಯುವುದನ್ನ ಅಧಿಕೃತ ಎಂದು NTA ಉಲ್ಲೇಖಿಸಿಲ್ಲ.
- ಆದರೆ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆಯ ಸಂದರ್ಭದಲ್ಲಿ ಜನಿವಾರವನ್ನು ತೆಗೆಯುವಂತೆ ಸೂಚಿಸಬಹುದು.
- ವಿಶೇಷವಾಗಿ ಜನಿವಾರ ಲೋಹದ ವಸ್ತುಗಳನ್ನು ಒಳಗೊಂಡಿದ್ದರೆ ತೆಗಸಬಹುದು.
- ಲೋಹದ ವಸ್ತುಗಳನ್ನು ಪರೀಕ್ಷಾ ಕೊಠಡಿಗೆ ಒಯ್ಯಲು ಅನುಮತಿಯಿಲ್ಲ
- ಜನಿವಾರ ಧಾರ್ಮಿಕವಾಗಿ ಮಹತ್ವದ್ದಾಗಿದ್ದರೆ NEET ಅರ್ಜಿ ಫಾರ್ಮ್ನಲ್ಲಿ “ಕಸ್ಟಮರಿ ಡ್ರೆಸ್” ಆಯ್ಕೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
- ಇದರಿಂದ ಸುರಕ್ಷತಾ ತಪಾಸಣೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತದೆ.
- ಪರೀಕ್ಷಾ ಕೇಂದ್ರದ ಅಧಿಕಾರಿಗಳನ್ನು ಮುಂಚಿತವಾಗಿ ಸಂಪರ್ಕಿಸಬೇಕಾಗುತ್ತದೆ.
- ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕಾಗುತ್ತದೆ.
- ಪರೀಕ್ಷಾ ಕೇಂದ್ರದ ಬಳಿ ತಪಾಸಣೆಗೆ ಒಳಗಾಗಬೇಕಾಗುತ್ತದೆ.
- ಧಾರ್ಮಿಕ ಅಥವಾ ಸಾಂಸ್ಕೃತಿಕ ಸಾಂಪ್ರದಾಯಿಕ ಉಡುಗೆ ಧರಿಸುವ ಅಭ್ಯರ್ಥಿಗಳಿಗೆ ಅನ್ವಯ. ಉದಾಹರಣೆಗೆ ಹಿಜಾಬ್, ಸಿಖ್ರ ಕಂಗ, ಕರ, ಕಿರ್ಪಾನ್
- ನೀಟ್ ಅರ್ಜಿ ಫಾರ್ಮ್ನಲ್ಲಿ “ಕಸ್ಟಮರಿ ಡ್ರೆಸ್” ಆಯ್ಕೆಯನ್ನು ಆಯ್ಕೆ ಮಾಡಬೇಕು.
- ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ತೆರಳಿ ವಿಶೇಷ ತಪಾಸಣೆಗೆ ಒಳಗಾಗಬೇಕು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Mon, 5 May 25