ಕಲಬುರಗಿ: ಕಮಲಾಪುರ ಬಳಿ ಭೀಕರ ಅಪಘಾತ, ಮೂವರು ಸಾವು

| Updated By: ಗಣಪತಿ ಶರ್ಮ

Updated on: May 27, 2024 | 10:39 AM

ಕಮಲಾಪುರ ತಾಲೂಕಿನ ಬೆಂಗಳೂರು ಕ್ರಾಸ್​ನಲ್ಲಿ ಕೆಎಸ್​​ಆರ್​ಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಮೂವರು ಬೈಕ್​​ ಸವಾರರು ಮೃತಪಟ್ಟಿದ್ದಾರೆ. ಇದರೊಂದಿಗೆ, ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹಾಗೂ ಅದರಿಂದಾಗಿ ಸಾವಿಗೀಡಾದವರ ಸಂಖ್ಯೆ ಮತ್ತಷ್ಟು ಹೆಚ್ಚಾದಂತಾಗಿದೆ.

ಕಲಬುರಗಿ: ಕಮಲಾಪುರ ಬಳಿ ಭೀಕರ ಅಪಘಾತ, ಮೂವರು ಸಾವು
ಕಮಲಾಪುರ ಬಳಿ ಭೀಕರ ಅಪಘಾತ, ಮೂವರು ಸಾವು
Follow us on

ಕಲಬುರಗಿ, ಮೇ 27: ಕಲಬುರಗಿ ಜಿಲ್ಲೆಯ ಕಮಲಾಪುರ (Kamalapura) ತಾಲೂಕಿನ ಬೆಂಗಳೂರು ಕ್ರಾಸ್​ನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ಮೂವರು ದುರ್ಮರಣ ಹೊಂದಿದ್ದಾರೆ. ಕೆಎಸ್​​ಆರ್​ಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಕಿಣ್ಣಿ ಸಡಕ್ ಗ್ರಾಮದ ಮೂವರು ಬೈಕ್​​ ಸವಾರರು ಮೃತಪಟ್ಟಿದ್ದಾರೆ.

ಯುವಕರು ಕಿಣ್ಣಿ ಸಡಕ್ ಗ್ರಾಮದಿಂದ ಕಲಬುರಗಿಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಲಬುರಗಿಯಿಂದ ಹುಮನಾಬಾದ್ ಕಡೆಗೆ ಸಾರಿಗೆ ಬಸ್ ತೆರಳುತ್ತಿತ್ತು. ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದರೊಂದಿಗೆ, ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾದಂತಾಗಿದೆ. ಭಾನುವಾರ ಬೆಳಗ್ಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘತಗಳಲ್ಲಿ 51 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭಾನುವಾರ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 24 ಗಂಟೆ ಅವಧಿಯಲ್ಲಿ ರಸ್ತೆ ಅಪಘಾತದಲ್ಲಿ 51 ಸಾವು: ಅಜಾಗರೂಕ ಚಾಲನೆ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್​ ಕಳವಳ

ಭಾನುವಾರ ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಮೃತಪಟ್ಟಿದ್ದರು. 2023ರಲ್ಲಿ ಕರ್ನಾಟಕದಾದ್ಯಂತ ಪ್ರತಿದಿನ ಸರಾಸರಿ 34 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚಿನ ಅಪಘಾತಗಳು ವರದಿಯಾಗಿದ್ದವು. ಅಜಾಗರೂಕತೆಯ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಬಗ್ಗೆ ಸಂಚಾರ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ