ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಇಬ್ಬರ ಬಂಧನ. ತನಿಖೆಗೆ ಪೂರ್ಣ ವಿರಾಮ‌ ಹಾಕಲು ಸೂಚನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

545 ಪಿಎಸ್ಐ ಹುದ್ದೆಗಳಿಗೆ  ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ವಿಚಾರಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಇಬ್ಬರ ಬಂಧನ. ತನಿಖೆಗೆ ಪೂರ್ಣ ವಿರಾಮ‌ ಹಾಕಲು ಸೂಚನೆ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಗನ್​ಮ್ಯಾನ್​ ಅಯ್ಯಣ್ಣ ದೇಸಾಯಿ, ಕಲಬುರಗಿ ಸಿಎಆರ್​ ಕಾನ್ಸ್​ಟೇಬಲ್​ ರುದ್ರಗೌಡ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Apr 21, 2022 | 8:32 PM

ಕಲಬುರಗಿ: ಪಿಎಸ್ಐ (PSI Recruitment) ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲ್ ಪುರದ ಶಾಸಕ ಎಂ.ವೈ.ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಕಲ್ಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯುಪಿಎಸ್ಸಿ ಮಾದರಿಯಲ್ಲಿ ನೇಮಕಾತಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗಿತ್ತು. ಈ ಭದ್ರತೆಯ ವ್ಯವಸ್ಥೆ, ಪಾರದರ್ಶಕತೆಯ ನಡುವೆಯೂ ಲೋಪವೆಸಗಿ ವಾಮಮಾರ್ಗದಲ್ಲಿ ಅಕ್ರಮ ಕಾರ್ಯಾಚರಣೆ ಮಾಡಿರುವುದಕ್ಕೆ ಪೂರ್ಣವಿರಾಮ ಹಾಕಬೇಕೆಂದು ಸರ್ಕಾರದ ಚಿಂತನೆಯಾಗಿದೆ ಎಂದು ಅವರು ತಿಳಿಸಿದರು. ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ದೂರು ಬಂದ ತಕ್ಷಣವೇ ಪ್ರಾಥಮಿಕ ತನಿಖೆ ಕೂಲಂಕುಷವಾಗಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಉತ್ತರಪತ್ರಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಮೇಲೆ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ.

ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಸಮಯ ವ್ಯರ್ಥವಾಗದೇ ಕಾರ್ಯಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಕಲ್ಬುರ್ಗಿಯಲ್ಲಿ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥರು ತಲೆಮರೆಸಿಕೊಂಡಿದ್ದು, ಶೋಧನಾ ಕಾರ್ಯ ಮುಂದುವರೆದಿದೆ. ಈಗ ಕಾಂಗ್ರೆಸ್ ಪಕ್ಷದ ಶಾಸಕ ಎಂ ವೈ ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಅವರನ್ನು ಬಂಧಿಸಲಾಗಿದೆ. ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆಯೂ ನಡೆಸಿ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಎಂ ಹೇಳಿದರು.

ದಿವ್ಯಾ ಹಾಗರಗಿಯವರು ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಕಠಿಣ ಕಾನೂನ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರವೇ ಸಿಐಡಿ ತನಿಖೆಗೆ ಅನುಮತಿ ನೀಡಿದೆ. ತನಿಖೆ ಮುಕ್ತವಾಗಿ ನಡೆಸಲು ಸೂಚನೆ ನೀಡಿದೆ. ಬೇರೆ ಪಕ್ಷಗಳು ಈ ರೀತಿಯ ಪ್ರಕರಣವನ್ನೇ ಮುಚ್ಚಿಹಾಕಿರುವ ಇತಿಹಾಸ ಇದೆ. ಹಿಂದೆ ಪಿಎಸ್ಐ ಪರೀಕ್ಷೆಗಳು 3-4 ಬಾರಿ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆ ನಡೆಯುತ್ತಿದ್ದು, ಮಧ್ಯಂತರ ವರದಿ ಬಂದ ನಂತರ ಮರುಪರೀಕ್ಷೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಿಐಡಿ ತನಿಖೆ ನಡೆಯುತ್ತಿರುವುದರಿಂದ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.

ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯನ್ನು ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ಅಥವಾ ಸಿಬಿಐಗೆ ವಹಿಸಬೇಕೆಂದು ಬೇರೆ ಪಕ್ಷಗಳು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ತನಿಖೆಯ ಮಧ್ಯಂತರ ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಎಲ್ಲ ಅಂಶಗಳು ತಿಳಿಯುತ್ತದೆ. ಎಲ್ಲ ಸಾಕ್ಷ್ಯಾಧಾರಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಸಮಗ್ರ ತನಿಖೆ ಆಗುತ್ತಿದೆ ಎಂದು ತಿಳಿಸಿದರು.

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ  ಯಲ್ಲಿ ಅಕ್ರಮ ವಿಚಾರವಾಗಿ ಅಫಜಲಪುರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಂ.ವೈ.ಪಾಟೀಲ್​ ಗನ್​ಮ್ಯಾನ್​ ಅಯ್ಯಣ್ಣ ದೇಸಾಯಿಯನ್ನು ಸಿಐಡಿ ಪೊಲೀಸರು (CID Police) ವಶಕ್ಕೆ ಪಡೆದಿದ್ದಾರೆ. ಪಿಎಸ್​ಐ ನೇಮಕಾತಿ ಪರೀಕ್ಷೆಯನ್ನು ಅಯ್ಯಣ್ಣ ದೇಸಾಯಿ ಬರೆದಿದ್ದು, ಪಿಎಸ್​ಐ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಕೂಡ ಇತ್ತು. 2012 ರಲ್ಲಿ ಡಿ.ಆರ್​ ಪೇದೆಯಾಗಿ ಆಯ್ಕೆಯಾಗಿದ್ದ ಅಯ್ಯಣ್ಣ ದೇಸಾಯಿ, ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಮೊದಲ ರ್ಯಾಂಕ್​ನಲ್ಲಿ ಪಾಸಾಗಿದ್ದರು. ಇನ್ ಸರ್ಸಿಸ್ ವಿಭಾಗದಲ್ಲಿ ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಪರೀಕ್ಷೆ ಬರೆದಿದ್ದು, ಅಯ್ಯಣ್ಣ ದೇಸಾಯಿ ನಿಜವಾದ ಹೆಸರು ಹಯ್ಯಾಳಿ ಎನ್.ದೇಸಾಯಿ. ಅಕ್ರಮವಾಗಿ ಪರೀಕ್ಷೆ ಬರೆದ ಆರೋಪದಡಿ ದೇಸಾಯಿ ಮತ್ತು ಕಲಬುರಗಿ ಸಿಎಆರ್​ ಕಾನ್ಸ್​ಟೇಬಲ್​ ರುದ್ರಗೌಡನನ್ನು ಸಿಐಡಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:

‘ಕೆಜಿಎಫ್​: ಚಾಪ್ಟರ್​ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್​ ಫ್ಯಾನ್ಸ್​ ತಕರಾರು​

Fraternity : ಸಮಾಜದ ಸ್ವಾಸ್ಥ್ಯ ಕೆಡಿಸದಂತೆ ಬದುಕುವುದು ಎಲ್ಲರಲ್ಲಿಯೂ ಮೊಳೆಕೆಯೊಡೆಯಬೇಕು

Published On - 2:35 pm, Thu, 21 April 22