ಕಾವೇರಿ ನೀರಿಗಾಗಿ ಕರ್ನಾಟಕ-ತಮಿಳುನಾಡು ಸಂಘರ್ಷ: ಇಂದು ಬಗೆಹರಿಸುತ್ತಾ ಸುಪ್ರೀಂಕೋರ್ಟ್? ಎಲ್ಲರ ಚಿತ್ತ ದಿಲ್ಲಿಯತ್ತ

| Updated By: ರಮೇಶ್ ಬಿ. ಜವಳಗೇರಾ

Updated on: Sep 06, 2023 | 7:02 AM

Cauvery Water Dispute: ಕರ್ನಾಟಕ-ತಮಿಳುನಾಡಿನ ಮಧ್ಯೆ ಕಾವೇರಿ ಕಿಚ್ಚು ತಾರಕಕ್ಕೇರಿದೆ. ಉಭಯ ರಾಜ್ಯಗಳು ತಮ್ಮಮ್ಮ ವಾದ ಮಂಡಿಸಲು ಸಜ್ಜಾಗಿವೆ.. ಇದ್ರ ಮಧ್ಯೆ ರೈತ ಸಂಘಟನೆಗಳು ಸರ್ವೋಚ್ಛ ಕೋರ್ಟ್​​​ನ ಕದ ತಟ್ಟಿದ್ದು, ಇಂದು ಸುಪ್ರೀಂಕೋರ್ಟ್​​​ನಲ್ಲಿಂದು ಕಾವೇರಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇದೀಗ ಸುಪ್ರೀಂಕೋರ್ಟ್​ನತ್ತ ನೆಟ್ಟಿದೆ.

ಕಾವೇರಿ ನೀರಿಗಾಗಿ ಕರ್ನಾಟಕ-ತಮಿಳುನಾಡು ಸಂಘರ್ಷ: ಇಂದು ಬಗೆಹರಿಸುತ್ತಾ ಸುಪ್ರೀಂಕೋರ್ಟ್? ಎಲ್ಲರ ಚಿತ್ತ ದಿಲ್ಲಿಯತ್ತ
ಸುಪ್ರೀಂಕೋರ್ಟ್​
Follow us on

ನವದೆಹಲಿ, (ಸೆಪ್ಟೆಂಬರ್ 06): ಕರ್ನಾಟಕ ಕಾವೇರಿ‌ ನೀರನ್ನು(Cauvery Water) ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು (Tamil Nadu)  ಸುಪ್ರೀಂಕೋರ್ಟ್(Supreme Court) ಮೆಟ್ಟಿಲೇರಿದ್ದು, ಈ ಅರ್ಜಿ ವಿಚಾರಣೆಯನ್ನ ಇಂದು (ಸೆಪ್ಟೆಂಬರ್ 06) ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಕಳೆದ ವಾರ ಕಾವೇರಿ ನೀರು ನಿರ್ವಹಣ ಪ್ರಾಧಿಕಾರವೂ, ಕರ್ನಾಟಕ ಪ್ರತಿದಿನ ಮುಂದಿನ ಹದಿನೈದು ದಿನಗಳಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತ್ತು. CWMA ಆದೇಶಕ್ಕೆ‌ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. 5 ಸಾವಿರ ಕ್ಯೂಸೆಕ್ ನೀರು ಸಾಲುವುದಿಲ್ಲ. 24 ಸಾವಿರ ಕ್ಯೂಸೆಕ್ ನೀರು ಬೇಕು ಎಂದು ಒತ್ತಡ ಹೇರಿದ್ರು‌‌. ಆದ್ರೆ, ಇದಕ್ಕೆ ಒಪ್ಪದ CWMA ಒಪ್ಪಿರಲಿಲ್ಲ. ಇದೀಗ ಸುಪ್ರಿಂಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುವುದಕ್ಕೆ ಸೂಚಿಸುವಂತೆ ಮನವಿ ಮಾಡಿದೆ.

ರಾಜ್ಯದ ನೀರಿನ ಸ್ಥಿತಿಗತಿ ಬಗ್ಗೆ ಸುಪ್ರೀಂಗೆ ಸರ್ಕಾರ ಮನವರಿಕೆ

ಇತ್ತ ಕರ್ನಾಟಕ ಸರ್ಕಾರವೂ ಕೂಡ ಮಳೆಯ ಕೊರತೆಯ ಚಿತ್ರಣವನ್ನು ಸುಪ್ರೀಂಕೋರ್ಟ್ ಮುಂದೆ ಇಡಲು ತಯಾರಿ ನಡೆಸಿದೆ. ಈ ಬಾರಿ ಕಾವೇರಿ ಕಣಿವೆ ಪ್ರದೇಶದಲ್ಲಿ 57 ಪರ್ಸೆಂಟ್ ಮಳೆ ಕೊರತೆಯಾಗಿದೆ. ಡ್ಯಾಂಗಳು ಬರಿದಾಗುತ್ತಿವೆ. ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ಇದರಿಂದ ನಿತ್ಯ 5ಸಾವಿರ ಕ್ಯೂಸೆಕ್ ನೀರು ಹರಿಸಲು ಕಷ್ಟವಾಗಲಿದೆ ಎಂದು ವಾದ ಮಾಡಲು ತಯಾರಿ ಮಾಡಿದೆ. ರಾಜ್ಯದ ಪರ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಹಾಗೂ ಮೋಹನ್ ಕಾತರಿಕಿ ವಾದ ಮಾಡಲಿದ್ದಾರೆ‌. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಕೆಆರ್​ಎಸ್​ ಡ್ಯಾಂನಿಂದ ನೀರು ಬಿಡುಗಡೆ; ಕರ್ನಾಟಕದ ರೈತ ಸಂಘಟನೆಗಳಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಜೀವಜಲಕ್ಕಾಗಿ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ ರೈತಸಂಘಟನೆಗಳು!

ಕಾವೇರಿ ನೀರಿಗಾಗಿ ಎರಡು ರಾಜ್ಯ ಸರ್ಕಾರಗಳು ಕಾನೂನು ಹೋರಾಟ ನಡೆಸುತ್ತಿರುವ ಮಧ್ಯೆ ಕರ್ನಾಟಕದ ರೈತ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಕಾವೇರಿ ನೀರಿಗಾಗಿ ರೈತ ಸಂಘಟನೆಗಳು ಕೂಡ ಸುಪ್ರೀಂಗೆ ಅರ್ಜಿ ಸಲ್ಲಿಸಿವೆ.‌ ನಾವು ಬೆಳೆಗೆ ನೀರು ಕೇಳುತ್ತಿಲ್ಲ, ಕುಡಿಯಲು ಕೇಳುತ್ತಿದ್ದೇವೆ ಎಂದು ಮನವಿ ಮಾಡಿವೆ. ಇಂದಿನ ವಿಚಾರಣೆ ವೇಳೆ ನಮ್ಮ ಅರ್ಜಿಯನ್ನ ಪುರಸ್ಕರಿಸುವಂತೆ ರೈತ ಸಂಘಟನೆಗಳು ಮನವಿ ಮಾಡಲಿವೆ.

ಒಟ್ಟಿನಲ್ಲಿ ಕರ್ನಾಟಕ-ತಮಿಳುನಾಡಿನ ಮಧ್ಯೆ ತಾರಕಕ್ಕೇರಿರುವ ಕಾವೇರಿ ಕಿಚ್ಚಿಗೆ ದೇಶದ ಸರ್ವೋಚ್ಛ ನ್ಯಾಯಲಯ ಮುಲಾಮು ಅಚ್ಚುತ್ತಾ ಎನ್ನುವುದನ್ನ ಕಾದು ನೋಡಬೇಕು.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:59 am, Wed, 6 September 23